ಹಿಂದಿ ನಮಗೆ ಬೇಡ ಎಂದ ಮಹಾರಾಷ್ಟ್ರ: ಕರ್ನಾಟಕ ಸರ್ಕಾರಕ್ಕೆ ಈ ಧೈರ್ಯವಿದೆಯೇ ಎಂದ ಕನ್ನಡಿಗರು!
ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತುವುದರಲ್ಲಿ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದೊಂದಿಗೆ ಮಹಾರಾಷ್ಟ್ರದ ಜನರೂ ಕೈಜೋಡಿಸಿದ್ದರು. ಮಹಾರಾಷ್ಟ್ರದಲ್ಲಿ ಮರಾಠಿ ಮೊದಲು. ಮರಾಠಿ ಭಾಷೆಗೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದ್ದರು. ಹಿಂದಿ ವಿರೋಧಿ ಅಭಿಯಾನಗಳು ನಡೆದಿದ್ದವು. ಇದೀಗ ತ್ರಿಭಾಷಾ ಸೂತ್ರವನ್ನು ಮಹಾರಾಷ್ಟ್ರ ಸರ್ಕಾರ ಕೈಬಿಟ್ಟಿದೆ. ಇನ್ಮುಂದೆ ಮಹಾರಾಷ್ಟ್ರದಲ್ಲಿ ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳು ಮಾತ್ರ ಇರಲಿವೆ. ಮಹಾರಾಷ್ಟ್ರದ ಸರ್ಕಾರದ ಬೆನ್ನಲ್ಲೇ ಕನ್ನಡಿಗರು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇದೇ ರೀತಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಧೈರ್ಯ ಪ್ರದರ್ಶಿಸಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸರ್ಕಾರವಿದೆ. ಬಿಜೆಪಿ ನೇತೃತ್ವದ ಸರ್ಕಾರವೇ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಾದರೆ, ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಗೀತರಚನೆಗಾರ ಮತ್ತು ನಿರ್ದೇಶಕ ಕವಿರಾಜ್ ಅವರು ಸೇರಿದಂತೆ ಹಲವು ಎರಡು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದು ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕು ಮತ್ತೊಂದು ಹಿಂದಿಯಿಂದ ಕರ್ನಾಟಕದಲ್ಲಿ 90,000 ಸಾವಿರ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎನ್ನುವುದು ಮತ್ತೊಂದು. ನೆರೆಯ ಮಹಾರಾಷ್ಟ್ರದ ಸರ್ಕಾರವು ಹಿಂದಿಯನ್ನು ಮೂರನೇ ಭಾಷೆಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದೆ. ತ್ರಿಭಾಷಾ ಸೂತ್ರದ ಬದಲಾಗಿ ನಾವು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಿದ್ದೇವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.

ತ್ರಿಭಾಷಾ ನೀತಿ ಆದೇಶ ಹಿಂಪಡೆದ ಮಹಾರಾಷ್ಟ್ರ: ಇನ್ನು ಮಹಾರಾಷ್ಟ್ರ ಸರ್ಕಾರವು ತ್ರಿಭಾಷಾ ಸೂತ್ರದಿಂದ ಹಿಂದೆ ಸರಿದಿದೆ. ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ಪರಿಷ್ಕೃತ ಸರ್ಕಾರಿ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿದೆ. ಮೂರನೇ ಭಾಷೆಯಾಗಿ ಹಿಂದಿ ಪರಿಚಯಿಸುವುದಕ್ಕೆ ಮಹಾರಾಷ್ಟ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವ ನಿರ್ಧಾರವನ್ನು ಕೈಬಿಟ್ಟಿದ್ದು. ಈ ನೀತಿಯನ್ನು ಪರಿಶೀಲಿಸಲು ಹಾಗೂ ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಲು ಮಹಾ ಸರ್ಕಾರವು ಹೊಸ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದೆ.
ಸಮಿತಿ ವರದಿ ಬಂದ ಮೇಲೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಸಮಿತಿಯ ಶಿಫಾರಸು ಬರುವವರೆಗೆ ನಾವು ತ್ರಿಭಾಷಾ ನೀತಿಗೆ ಸಂಬಂಧಿಸಿದ ಎರಡೂ ಆದೇಶಗಳನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ. ಮರಾಠಿ ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು.
ಗೀತರಚನೆಗಾರ ಮತ್ತು ನಿರ್ದೇಶಕ ಕವಿರಾಜ್ ಅವರು, ಜನಾಭಿಪ್ರಾಯಕ್ಕೆ ಮಣಿದು ದೇಶದಲ್ಲೇ ಹೆಚ್ಚು ತೆರಿಗೆ ಉತ್ಪಾದಿಸುವ ರಾಜ್ಯ ಮಹಾರಾಷ್ಟ್ರ ತ್ರಿಭಾಷಾ ನೀತಿ ಜಾರಿಯನ್ನು ತಡೆ ಹಿಡಿದಿರುವುದನ್ನು 'ನಮ್ಮ ನಾಡು ನಮ್ಮ ಆಳ್ವಿಕೆ' ಸ್ವಾಗತಿಸುತ್ತದೆ. ಹಾಗೆಯೇ ತಮಿಳುನಾಡಿನ ಶಿಕ್ಷಣ ಸಚಿವರು ಮೂರನೇ ಭಾಷೆ ಹಿಂದಿಯಲ್ಲಿ 90 ಸಾವಿರ ಕನ್ನಡ ಮಕ್ಕಳು ಒಂದೇ ವರ್ಷದಲ್ಲಿ ಫೇಲ್ ಆಗಿ ಅವರ ಭವಿಷ್ಯಕ್ಕೆ ತೊಡಕಾಗಿದೆ ಎಂಬ ವಿಚಾರವನ್ನು ನಿನ್ನೆ ಪ್ರಸ್ತಾಪಿಸಿದ್ದಾರೆ. ಈ ಸತ್ಯವನ್ನು ಮುನ್ನೆಲೆಗೆ ತಂದ ಹೆಗ್ಗಳಿಕೆ 'ನಮ್ಮ ನಾಡು ನಮ್ಮ ಆಳ್ವಿಕೆ' ಯದ್ದು ಎಂದಿದ್ದಾರೆ.
ಕರ್ನಾಟಕದಲ್ಲಿ ಒಂದು ಸಂಘಟನೆಯಾಗಿ 'ನಮ್ಮ ನಾಡು ನಮ್ಮ ಆಳ್ವಿಕೆ' ಈ ಹೋರಾಟದ ಸಾರಥ್ಯ ವಹಿಸಿ ಬೈಕ್ ರ್ಯಾಲಿ, ಚಿಂತನಾ ಸಭೆ, ಲಕ್ಷಗಟ್ಟಲೇ ಕರಪತ್ರ ಹಂಚಿಕೆ, ಸಚಿವರು - ಅಧಿಕಾರಿಗಳಿಗೆ ಮನವಿ ಸಲ್ಲಿಕೆ, ಟ್ವಿಟ್ಟರ್ ಸ್ಪೇಸ್, ತಜ್ಞರೊಂದಿಗೆ ಚರ್ಚೆ ಮುಂತಾದ ಹಲವು ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಹೋರಾಟವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಕರ್ನಾಟಕದಲ್ಲೂ ಕೂಡ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಆಗ್ರಹದ ನಮ್ಮ ನಾಡು ನಮ್ಮ ಆಳ್ವಿಕೆ ಪಿಟಿಷನ್ನಿಗೆ ಈಗಾಗಲೇ 40 ಸಾವಿರ ಜನ ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ಇನ್ನೂ ಸಹಿ ಹಾಕಿಲ್ಲವಾದರೆ ಈ ಲಿಂಕ್ ಬಳಸಿ ಸಹಿ ಮಾಡಿ. ಒಂದು ಮಹತ್ತರ ಬದಲಾವಣೆಗೆ ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.












Click it and Unblock the Notifications