ಕಾಂಗ್ರೆಸ್ ಮತ್ತು ಬಿಜೆಪಿ : ಮಹದಾಯಿ v/s ಲಿಂಗಾಯತ ಧರ್ಮ
ಬೆಂಗಳೂರು, ಡಿಸೆಂಬರ್ 27 : 'ಕುಡಿಯುವ ನೀರನ್ನು ತರುವ ಭಾರ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ. ನೀರನ್ನು ನಾ ತಂದೆ ತರುವೆ' ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಾಡಿದ ಘೋಷಣೆ ಇದು.
ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಹುಬ್ಬಳ್ಳಿ ಸಮಾವೇಶದಲ್ಲಿ ಯಡಿಯೂರಪ್ಪ ಮಾಡಿದ ಭಾಷಣ ಈಗ ರೈತರ ಆಕ್ರೋಶವನ್ನು ಹೆಚ್ಚಿಸಿದೆ. ಉತ್ತರ ಕರ್ನಾಟಕ ಭಾಗದಿಂದ ರೈತರು ಬೆಂಗಳೂರಿಗೆ ಬಂದು ಬಿಜೆಪಿ ಕಚೇರಿ ಮುಂದೆ ಧರಣಿ ಕೂತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬೆಂಬಲ ಸಿಕ್ಕಿದೆ. ಸ್ವತಃ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವವರು ಹೋರಾಟದ ಮುಂಚೂಣಿಯಲ್ಲಿದ್ದಾರೆ. ಆದರೆ, ಬಿಜೆಪಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ.
ಮಹದಾಯಿ ವಿವಾದದ ವಿಚಾರ ಮುಂದಿಟ್ಟುಕೊಂಡು, ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಗೋವಾ ಸರ್ಕಾರದ ಪತ್ರ ಓದಿದ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿಯ ಬೇರೆ ನಾಯಕರು ಅವರ ಜೊತೆ ಈ ಸಂದರ್ಭದಲ್ಲಿ ನಿಂತಿಲ್ಲ ಎಂಬುದು ಗಮನಿಸಬೇಕಾದ ಅಂಶ...

ಚುನಾವಣಾ ರಾಜಕಾರಣ
ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡಲು ಮುಂದಾಗಿವೆಯೇ?. ಕಾಂಗ್ರೆಸ್ ಪಕ್ಷದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ವಿರುದ್ಧವಾಗಿ ಬಿಜೆಪಿ ಮಹದಾಯಿ ದಾಳವನ್ನು ಉರುಳಿಸಿತೇ? ಎಂಬುದು ಸದ್ಯದ ಪ್ರಶ್ನೆ. ಬಿಜೆಪಿ ಪಕ್ಷಕ್ಕೆ ಈ ಹೋರಾಟದಲ್ಲಿ ಹಿನ್ನಡೆ ಆಗಿರುವುದಂತೂ ಸತ್ಯ.

ಯಡಿಯೂರಪ್ಪ ಪತ್ರ ಬರೆದಿದ್ದು ಏಕೆ?
ಡಿ.20ರಂದು ದೆಹಲಿಯ ಅಮಿತ್ ಶಾ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ 7.56 ಟಿಎಂಸಿ ನೀರನ್ನು ಕೊಡಿ ಎಂದು ಬಿ.ಎಸ್.ಯಡಿಯೂರಪ್ಪ ಪರಿಕ್ಕರ್ ಅವರಿಗೆ ಪತ್ರ ಬರೆದರು.

ರಾಜಕೀಯ ಆರಂಭ
ಗೋವಾ ಸಿಎಂ ಯಡಿಯೂರಪ್ಪ ಅವರ ಪತ್ರಕ್ಕೆ ಉತ್ತರ ಬರೆದರು. ಆದರೆ, ಮಹದಾಯಿ ವಿಚಾರದಲ್ಲಿ ಚರ್ಚೆ ನಡೆಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರಕ್ಕೆ ಅವರು ಉತ್ತರ ಕೊಡಲಿಲ್ಲ. ಇದರಿಂದ ಎರಡೂ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಆರಂಭವಾಯಿತು.

ಪ್ರಚಾರ ಸಭೆಯಲ್ಲಿ ಮಹದಾಯಿ ಘೋಷಣೆ
ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಹಾಗಾದರೆ 2018ರ ಚುನಾವಣೆ ಪ್ರಚಾರಕ್ಕಾಗಿ ಆರಂಭಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಮಹದಾಯಿ ವಿಚಾರವನ್ನು ಘೋಷಣೆ ಮಾಡಿದ್ದು ಏಕೆ?.

ಯಡಿಯೂರಪ್ಪ ಏಕಾಂಗಿ
ಗೋವಾ ಸಿಎಂ ಪತ್ರವನ್ನು ಓದಿದ ಬಳಿಕ ಕಾಂಗ್ರೆಸ್ ಯಡಿಯೂರಪ್ಪ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ಆದರೆ, ಯಡಿಯೂರಪ್ಪ ಬೆಂಬಲಕ್ಕೆ ಯಾವ ನಾಯಕರು ನಿಂತಿಲ್ಲ, ಅವರು ಏಕಾಂಗಿಯಾಗಿದ್ದಾರೆ.

ಎಂ.ಬಿ.ಪಾಟೀಲ್, ಯಡಿಯೂರಪ್ಪ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮುಂಚೂಣಿಯಲ್ಲಿದ್ದಾರೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ಮುಂದೆ ಬಂದು ಹೋರಾಟದ ನೇತೃತ್ವ ತೆಗೆದುಕೊಳ್ಳಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ ಸೆಳೆಯಲು ಯಡಿಯೂರಪ್ಪ ಮಹದಾಯಿ ವಿಚಾರವನ್ನು ತೆಗೆದುಕೊಂಡರು. ಆದರೆ, ಅದರಲ್ಲಿ ಹಿನ್ನಡೆ ಉಂಟಾಗಿದೆ.












Click it and Unblock the Notifications