ಸ್ಪಷ್ಟನೆ ಕೋರಿ ಸಿಎಂ ಯಡಿಯೂರಪ್ಪಗೆ ಎಂ.ಬಿ. ಪಾಟೀಲ್ ಪತ್ರ!
ಬೆಂಗಳೂರು, ಅ. 08: ಕೃಷ್ಣಾ ನೀರಿನ ಮರು ಹಂಚಿಕೆ ಕುರಿತು ಹೊಸ ನ್ಯಾಯಾಧೀಕರಣ ರಚನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ನಡುವಿನ ಸಭೆಯ ಕುರಿತಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರ ಹೇಳಿಕೆ ಗೊಂದಲಮಯವಾಗಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಕುರಿತು ನಮಗೆ ಅನ್ಯಾಯ ಆಗಿದೆ ಎಂದು ರಾಜ್ಯಗಳ ವಿಭಜನೆಯ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಪರಸ್ಪರ ಸುಪ್ರಿಂ ಕೋರ್ಟ್ ಹಾಗೂ ನ್ಯಾಯಾಧೀಕರಣದಲ್ಲಿ ದಾವೆ ಹೂಡಿವೆ.
ನ್ಯಾಯಾಧೀಕರಣ ಈಗಾಗಲೇ ನಿರ್ಣಯಿಸಿದಂತೆ ಇದು ಆ ಎರಡೂ ರಾಜ್ಯಗಳ ನಡುವಿನ ಆಂತರಿಕ ವ್ಯಾಜ್ಯವಾಗಿದೆ. ರಾಜ್ಯ ಪುನರ್ ವಿಂಗಡನೆ ಕಾಯ್ದೆ ಸೆಕ್ಷನ್ 80ರ ಪ್ರಕಾರ (Matter Between two Successive State) ಎಂದು ಈಗಾಗಲೇ ಬ್ರಿಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದೆ. ಮತ್ತು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರವು ಕೂಡ ಇದೇ ನಿಲುವನ್ನು ಅಫಿಡವಿಟ್ ಮೂಲಕ ಸಲ್ಲಿಸಿದೆ.

ಆದ್ದರಿಂದ ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ನೀರಿನ ಮರು ಹಂಚಿಕೆ ಆ ಎರಡು ರಾಜ್ಯಗಳಿಗೆ ಸೀಮಿತವಾಗಿದ್ದು, ಹೊರತು ಕರ್ನಾಟಕಕ್ಕೆ ಅಲ್ಲ. ಆದರೆ ಈ ಹಂತದಲ್ಲಿ ಕೇಂದ್ರದ ಮಂತ್ರಿಗಳು ಹಾಗೂ ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಸಭೆ ಕರ್ನಾಟಕ ಹಿತಾಸಕ್ತಿಗೆ ಧಕ್ಕೆಯಾಗುವ ಅನುಮಾನಕ್ಕೆ ಎಡೆಮಾಡಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರವಾಗಿ ಮನವರಿಕೆ ಮಾಡುವುದರ ಜೊತೆಗೆ ರಾಜ್ಯದ ನೀರಿನ ಹಿತಾಸಕ್ತಿ ಕಾಪಾಡಲು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು.
ಕರ್ನಾಟಕದ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ.












Click it and Unblock the Notifications