ಲೋಕಸಭಾ ಚುನಾವಣೆ: 8ಕ್ಷೇತ್ರಗಳ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗೆ ಹೊಸ ಸೇರ್ಪಡೆ
ಜನವರಿ 11ರಿಂದ ಎರಡು ದಿನಗಳ ಬಿಜೆಪಿಯ ರಾಷ್ಟ್ರೀಯ ಅಧಿವೇಶನ ಆರಂಭವಾಗಿದೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಈ ಅಧಿವೇಶನ ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿದ್ದಪಡಿಸಿಕೊಂಡಿದ್ದು, ಜನವರಿ ಹನ್ನೊಂದು ಅಥವಾ ಹನ್ನೆರಡರಂದು, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ನೀಡಲಿದ್ದಾರೆ ಎನ್ನುವ ಮಾಹಿತಿಯಿದೆ.
ಕಳೆದ ಚುನಾವಣೆಯಲ್ಲಿನ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳನ್ನೇ ಬಹುತೇಕ ಮುಂದುವರಿಸಿಕೊಂಡು ಹೋಗಲು ಯಡಿಯೂರಪ್ಪ ನಿರ್ಧರಿಸಿದ್ದರೂ, ಕೆಲವೊಂದು ಹೊಸ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿ ಸೇರಿದೆ ಎನ್ನುವ ಸುದ್ದಿಯಿದೆ.
ಹೊಸದಾಗಿ ಸೇರ್ಪಡೆಯಾಗಿರುವ ಕೆಲವು ಸಂಭಾವ್ಯ ಅಭ್ಯರ್ಥಿಗಳು, ಮೂಲತಃ ಬಿಜೆಪಿ ಮುಖಂಡರಲ್ಲ. ಹಾಗಾಗಿ, ಅವರನ್ನು ಬೇರೆ ಪಕ್ಷದಿಂದ ಕರೆತರುವ ಕೆಲಸವನ್ನು ಮಾಡಬೇಕಿದೆ. ಈಗ ಹರಿದಾಡುತ್ತಿರುವ ಸಂಭಾವ್ಯ ಪಟ್ಟಿಗಳ ಜೊತೆಗೆ, ಎಂಟು ಲೋಕಸಭಾ ಕ್ಷೇತ್ರಗಳಿಗೆ ಹೊಸ ಹೆಸರುಗಳು ಸೇರ್ಪಡೆಗೊಂಡಿವೆ ಎನ್ನುವ ಮಾಹಿತಿಯಿದೆ.
ಬಾಲಕೃಷ್ಣ ಮತ್ತು ಆರ್ ಅಶೋಕ್ ಅವರ ಹೆಸರೂ ಕೇಳಿಬರುತ್ತಿದೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಿ ಪಿ ಯೋಗೇಶ್ವರ್ ಮತ್ತು ತುಳಸಿ ಮುನಿರಾಜು ಗೌಡ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ ಎನ್ನುವ ಮಾಹಿತಿಯ ನಡುವೆ, ಬಾಲಕೃಷ್ಣ ಮತ್ತು ಆರ್ ಅಶೋಕ್ ಅವರ ಹೆಸರೂ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಸೋತಿದ್ದ ಬಾಲಕೃಷ್ಣ ಅವರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ನಡೆಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸುರೇಶ್ ಗೌಡ ಅವರ ಹೆಸರ ಸಂಭಾವ್ಯರ ಪಟ್ಟಿಯಲ್ಲಿ
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಳೆದ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಜಿ ಎಸ್ ಬಸವರಾಜು ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿತ್ತು. ಇದರ ಜೊತೆಗೆ, ಸುರೇಶ್ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುದ್ದಹನುಮೇ ಗೌಡ, ಬಸವರಾಜು ಅವರನ್ನು 74,041 ಮತಗಳ ಅಂತರದಿಂದ ಸೋಲಿಸಿದ್ದರು.
ಮಾದಾರ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ
ಚಿತ್ರದುರ್ಗ (ಮೀಸಲು) ಲೋಕಸಭಾ ಕ್ಷೇತ್ರದಿಂದ ಜನಾರ್ಧನ ಸ್ವಾಮಿಯವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ ಎನ್ನುವ ಮಾಹಿತಿಯಿದೆ. ಕಳೆದ ಚುನಾವಣೆಯಲ್ಲಿ ಸ್ವಾಮಿ, ಕಾಂಗ್ರೆಸ್ಸಿನ ಬಿ ಎನ್ ಚಂದ್ರಪ್ಪ ವಿರುದ್ದ 101,291 ಮತಗಳ ಅಂತರದಿಂದ ಸೋತಿದ್ದರು. ಈಗ, ಚಿತ್ರದುರ್ಗ ಮಾದಾರ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ಹೆಸರೂ ಸಂಭಾವ್ಯರ ಪಟ್ಟಿಯಲ್ಲಿದೆ ಎನ್ನುವ ಸುದ್ದಿಯಿದೆ.
ಕಾಂಗ್ರೆಸ್ಸಿನ ಪ್ರಮುಖ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹಾಲೀ ಸಂಸದ ಜಿ ಎಂ ಸಿದ್ದೇಶ್ವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಅಷ್ಟೊಂದು ಆಸಕ್ತಿಯನ್ನು ತೋರದೇ ಇರುತ್ತಿರುವ ಹಿನ್ನಲೆಯಲ್ಲಿ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ, ಜೊತೆಜೊತೆಗೆ, ಆ ಭಾಗದ ಕಾಂಗ್ರೆಸ್ಸಿನ ಪ್ರಮುಖ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಅಂತಿಮ ಗಳಿಗೆಯಲ್ಲಿ ಅವರೇ ಪಕ್ಷದ ಅಭ್ಯರ್ಥಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಪ್ರಭಾಕರ ಕೋರೆ ಅವರ ಹೆಸರೂ ಕೇಳಿಬರುತ್ತಿದೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲೀ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಎದುರು ಕೇವಲ 3,003 ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ರಮೇಶ್ ವಿಶ್ವನಾಥ್ ಕತ್ತಿ ಈ ಬಾರಿಯ ಸಂಭಾವ್ಯ ಅಭ್ಯರ್ಥಿ ಕೂಡಾ. ಇವರ ಹೆಸರಿನ ಜೊತೆಗೆ, ಆ ಭಾಗದ ಪ್ರಭಾವಿ ಮುಖಂಡ, ಪ್ರಭಾಕರ ಕೋರೆ ಅವರ ಹೆಸರೂ ಕೇಳಿಬರುತ್ತಿದೆ.
ಮಾಜಿ ಮುಖ್ಯ ಕಾರ್ಯದರ್ಶಿ (ಸಿಎಸ್) ರತ್ನಪ್ರಭಾ
ಕಾಂಗ್ರೆಸ್ಸಿನ ಭದ್ರಕೋಟೆ ಕಲಬುರಗಿ (ಮೀಸಲು) ಕ್ಷೇತ್ತ. ಹಾಲೀ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ಪ್ರಯತ್ನ ಪಡುತ್ತಿರುವ ಬಿಜೆಪಿ, ಅಲ್ಲಿಂದ ಮಹಿಳಾ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದೆ. ಮಾಜಿ ಮುಖ್ಯ ಕಾರ್ಯದರ್ಶಿ (ಸಿಎಸ್) ರತ್ನಪ್ರಭಾ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ತೇಜಸ್ವಿನಿ ರಮೇಶ್ ಗೌಡ ಮತ್ತು ಆರ್ ವಿಜಯ ಶಂಕರ್
ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಕ್ಷೇತ್ರದಲ್ಲಿ ಯಾರನ್ನು ಫೈನಲ್ ಮಾಡಬೇಕು ಎನ್ನುವ ಗೊಂದಲ್ಲಿ ಬಿಜೆಪಿಯಿದೆ. ಮೂಲಗಳ ಪ್ರಕಾರ, ತೇಜಸ್ವಿನಿ ರಮೇಶ್ ಗೌಡ ಮತ್ತು ಆರ್ ವಿಜಯ ಶಂಕರ್ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ವಿಜಯ ಶಂಕರ್ ಸದ್ಯ ಕಾಂಗ್ರೆಸ್ ಮುಖಂಡರಾಗಿದ್ದಾರೆ.
ಲಕ್ಷ್ಮೀ ಅಶ್ವಿನ್ ಗೌಡ ಮತ್ತು ಚೆಲುವರಾಯಸ್ವಾಮಿ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸೋತಿದ್ದ ಡಾ. ಸಿದ್ದರಾಮಯ್ಯನವರ ಜೊತೆಗೆ, ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಅಶ್ವಿನ್ ಗೌಡ ಮತ್ತು ನಾಗಮಂಗಲ ಕ್ಷೇತ್ರದಿಂದ ಪರಾಭವಗೊಂಡಿದ್ದ ಚೆಲುವರಾಯಸ್ವಾಮಿಯವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಆದರೆ, ಬಿಜೆಪಿಗೆ ಅಲ್ಲಿ ಅಷ್ಟೇನೂ ನೆಲೆಯಿಲ್ಲದೇ ಇರುವುದರಿಂದ, ಅವರ ನಡೆ ಇನ್ನೂ ಅಂತಿಮವಾಗಿಲ್ಲ.