Lok Sabha Election 2024: ಮಂಡ್ಯ ಕ್ಷೇತ್ರ ಜೆಡಿಎಸ್ ಮಡಿಲಿಗೆ..? ಲೋಕಸಭೆ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿ?
ಮಂಡ್ಯ, ಡಿಸೆಂಬರ್ 1: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಅನಿರೀಕ್ಷಿತ ಸೋಲು ಕಂಡ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗಾಗಿ ಎದುರು ನೋಡುತ್ತಿದೆ. ಕಾಂಗ್ರೆಸ್ನ ದಿಗ್ವಿಜಯ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಕಳೆದ ಲೋಕಸಭಾ ಚುನಾವಣೆಯಂತೆ ಮಂಡ್ಯ ಕ್ಷೇತ್ರವು ಈ ಬಾರಿಯೂ ಕುತೂಹಲದ ಕಣವಾಗಿದೆ. ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್ ಅಚ್ಚರಿಯ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕಿಳಿಸಲು ಸಜ್ಜಾಗಿದೆ.
ಏನಾದರೂ ಸರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಬೇಕು ಎಂದುಕೊಂಡಿರುವ ಬಿಜೆಪಿಯ ಜೊತೆ ಜೆಡಿಎಸ್ ಕೈ ಜೋಡಿಸಿದೆ. ಸ್ಥಳೀಯ ನಾಯಕರ ಪರ-ವಿರೋಧದದ ಗೊಂದಲಗಳಲ್ಲೇ ಹೈಕಮಾಂಡ್ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಅಂತಿಮಗೊಳಿಸಿತ್ತು. ಈ ಬಗ್ಗೆ ಅಸಮಾಧಾನ ಹೊಗೆಯಾಡಿದರೂ ಕೂಡ ಕಾಂಗ್ರೆಸ್ ಸೋಲಿನ ಗುರಿ ಎಲ್ಲಾ ಮುಖಂಡನ್ನು ತಣ್ಣಗಾಗಿಸಿದೆ.

ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಎರಡೂ ಪಕ್ಷದ ಅನೇಕರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಲಿದೆ. ಹೀಗಾಗಿ ಎರಡು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಹೇಗಿರಲಿದೆ ಎನ್ನುವ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಮಂಡ್ಯದಲ್ಲಿ ಅಭ್ಯರ್ಥಿಯ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಅಂತಹದ್ದೇ ರಾಜಕೀಯ ಸಮರ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಸದ್ಯ ಮಂಡ್ಯ ಕಾಂಗ್ರೆಸ್ ಪಾರುಪತ್ಯದಲ್ಲೇ ಇದ್ದರೂ, ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ನಾಯಕರ ಜನಪ್ರಿಯತೆ ಕೂಡ ಇದೆ. ಜೊತೆಗೆ ಹಾಲಿ ಸಂಸದೆ ಸುಮಲತಾ ಕೂಡ ಬಿಜೆಗೆ ಬೆಂಬಲಿಸಿರುವುದರಿಂದ ಇಲ್ಲಿನ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಕುತೂಹಲವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಮರ್ಥ ಅಭ್ಯರ್ಥಿಯೇ ಕಣಕ್ಕಿಳಿಯ ಬೇಕು. ಹೀಗಾಗಿ ಎರಡು ಪಕ್ಷಗಳು ಒಂದಾಗಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ. ಆದರೆ ಅಂತಹ ಸಮರ್ಥ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಸದ್ಯ ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವು ಜೆಡಿಎಸ್ ಪಾಲಾಗಿದ್ದು, ಜೆಡಿಎಸ್ ಅಭ್ಯರ್ಥಿಯೇ ಮಂಡ್ಯ ಲೋಕಸಭೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಜೆಡಿಎಸ್ ಅಭ್ಯರ್ಥಿ ಎಂದ ತಕ್ಷಣವೇ ನಿಖಿಲ್ ಕುಮಾರಸ್ವಾಮಿ ಮತ್ತೆ ಲೋಕಸಭಾ ಅಖಾಡಕ್ಕೆ ಇಳಿಯಬಹುದು ಎನ್ನುವ ಆಲೋಚನೆ ಬರಬಹುದು. ಆದರೆ ಸದ್ಯದ ಮಾಹಿತಿ ಪ್ರಕಾರ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಮ್ಮ ಪುತ್ರನನ್ನು ಸದ್ಯ ಚುನಾವಣಾ ರಾಜಕೀಯದಿಂದ ಹೊರಗಿಡುವ ಮಾತಿನ ಮೇಲೆ ನಿಂತಿದ್ದಾರೆ ಎನ್ನಲಾಗಿದೆ. ಹಾಗಾದರೆ ಮಂಡ್ಯದ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಸುಳಿವು ಇಲ್ಲಿದೆ.

ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್, ಸಿಎಸ್ ಪುಟ್ಟರಾಜುಗೆ ಚುನಾವಣಾ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಪಕ್ಷದ ವರಿಷ್ಠರಿಂದ ಈ ಸೂಚನೆ ಸಿಗುತ್ತಿದ್ದಂತೆ ಸಿಎಸ್ ಪುಟ್ಟರಾಜು ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದು, ಇತ್ತೀಚಿಗೆ ನಡೆದ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ತಮ್ಮ 60ನೇ ವರ್ಷದ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ನೆಪದಲ್ಲಿ ಸಾವಿರಾರು ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಿರುವ ಸಿಎಸ್ ಪುಟ್ಟರಾಜು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದೇಶ ರವಾನಿಸಿದ್ದಾರೆ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿದೆ. ಅಲ್ಲದೇ ವರಿಷ್ಠರ ಸಲಹೆಯಂತೆ ಸಿಎಸ್ ಪುಟ್ಟರಾಜು ಕ್ಷೇತದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಇದಿಷ್ಟು ಜೆಡೆಸ್ ಕಥೆಯಾದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖ್ಯವಾಗಿ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದ ಸಂಸದೆ ಸುಮಲತಾ ಕಥೆ ಏನು..? ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ನಡೆ ಇನ್ನೂ ನಿಗೂಢವಾಗಿದೆ. ಕಳೆದ ಐದು ವರ್ಷಗಳಲ್ಲಿ ಸಂಸದೆಯಾಗಿ ಸುಮಲತಾ ರಾಜಕೀಯವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಎದುರಾಳಿಗಳಿಗಳನ್ನು ಎದುರಿಸುವಷ್ಟು ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಆದರೆ 2019 ಹಾಗೂ 2024ರ ಚುನಾವಣೆ ನಡುವೆ ಬಹಳಷ್ಟು ವ್ಯತ್ಯಾಸವಿಗೆ. ಅಂದಿನ ಅನುಕಂಪದ ರಾಜಕಾರಣ ಈಗಿಲ್ಲ. ಇಂದಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಹೀಗಾಗಿ ರಾಷ್ಟ್ರೀಯ ಪಕ್ಷದ ಬೆಂಬಲ ಸುಮಲತಾಗೆ ಅನಿವಾರ್ಯವಾಗಿದ್ದು, ಸುಮಲತಾ ಮುಂದಿನ ನಿರ್ಧಾರ ಏನು ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications