ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್ಲೈನ್ನಲ್ಲೇ ದರ್ಶನ ನೀಡಲು ತಯಾರಿ!
ಬೆಂಗಳೂರು, ಮೇ 21: ಕೊರೊನಾ ಹಾವಳಿಯಿಂದಾಗಿ ಲಾಕ್ಡೌನ್ ಜಾರಿಯಾಗಿ ದೇಗುಲಗಳೆಲ್ಲ ಬಾಗಿಲು ಮುಚ್ಚಿವೆ. ನಾಲ್ಕನೇ ಹಂತದ ಲಾಕ್ಡೌನ್ನಲ್ಲೂ ದೇಗುಲಗಳ ಬಾಗಿಲು ತೆರೆಯಲು ಸರ್ಕಾರ ಅವಕಾಶ ಮಾಡಿ ಕೊಟ್ಟಿಲ್ಲ.
Recommended Video
ಇದರಿಂದ ರಾಜ್ಯದ ಅನೇಕ ದೇವಸ್ಥಾನಗಳ ಸಿಬ್ಬಂದಿ ಭಕ್ತರ ದೇಣಿಗೆ, ಕಾಣಿಗೆಯಿಲ್ಲದೇ ಚಿಂತಾಕ್ರಾಂತವಾಗಿದ್ದಾರೆ. ಅತ್ತ ಭಕ್ತರು ತಮ್ಮ ನೆಚ್ಚಿನ ದೇವರು, ದೇವಸ್ಥಾನ, ಮನೆ ದೇವರನ್ನು ನೋಡಲಾಗದೇ ಪರಿತಪಿಸುತ್ತಿದ್ದಾರೆ.
ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವುದಿಲ್ಲವೆಂದ ಸಚಿವ
ಸದ್ಯ ಇವೆರಡೂ ಸಮಸ್ಯೆಗೆ ಮುಕ್ತಿ ಹಾಡಲು ಮುಜರಾಯಿ ಇಲಾಖೆ ಮುಂದಾಗಿದೆ. ಭಕ್ತರಿಗೆ ಆನ್ಲೈನ್ನಲ್ಲೇ ದೇವರ ದರ್ಶನ ಮಾಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ನಿಗದಿತ ಹಣ ಪಾವತಿಸಿ ತಮ್ಮ ನೆಚ್ಚಿನ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲು ಅನುವು ಮಾಡಲಾಗುತ್ತದೆ. ಅಲ್ಲದೇ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಅರ್ಚಕರಿಗೆ ಮೂರು ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಯವಾಗಿನಿಂದ ಆರಂಭ?
ಆನ್ಲೈನ್ನಲ್ಲಿ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ದೇವರ ದರ್ಶನ ಕಲ್ಪಿಸುವ ವ್ಯವಸ್ಥೆ ಶೀಘ್ರವೇ ಆರಂಭವಾಗಲಿದೆ. ಇದೇ ತಿಂಗಳು 26 ಅಥವಾ 27 ರಂದು ಆನ್ಲೈನ್ ಭಕ್ತರಿಗೆ ದೇವಸ್ಥಾನಗಳು ಬಾಗಿಲು ತೆರೆಯಲಿವೆ.
ಹೇಗಿರಲಿದೆ ಆನ್ಲೈನ್ ಪೂಜೆ
ವೆಬ್ ಸೈಟ್ ಮೂಲಕ ಪೂಜಾ ಕೈಂಕರ್ಯಗಳ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆನ್ ಲೈನ್ ಮೂಲಕ ಭಕ್ತರು ಸೇವಾ ವೆಚ್ಚ ಭರಿಸಬಹುದು. ಅವರಿಗೆ ಮನೆಗೇ ಪ್ರಸಾದ ಕಳಿಸುವ ಕೆಲಸ ಮಾಡಲಾಗುತ್ತದೆ. ಪೂಜೆಯ ನೇರ ಪ್ರಸಾರ, ಮಂಗಳಾರತಿ, ಅರ್ಚನೆ, ಅಷ್ಟೋತ್ತರ ಸೇರಿ 15 ಸೇವೆಗಳಿವೆ. ಭಕ್ತರು ಬೇಕಾದ ಸೇವೆಗೆ ಹಣ ಪಾವತಿಸಬೇಕು. ಅಂತವರ ಹೆಸರಿನಲ್ಲಿ ಪೂಜೆಯನ್ನ ನೆರವೇರಿಸಲಾಗುತ್ತದೆ. ನಂತರ ಅವರಿಗೆ ಪ್ರಸಾದವನ್ನ ಅವರ ಮನೆಗೆ ಅಂಚೆ ಮೂಲಕ ಕಳಿಸಲಾಗುತ್ತದೆ.
ಯಾವ ಯಾವ ದೇವಸ್ಥಾನಗಳಲ್ಲಿ ವ್ಯವಸ್ಥೆ?
ಸದ್ಯಕ್ಕೆ ರಾಜ್ಯದ 15 ಜಿಲ್ಲೆಗಳ ದೇಗುಲ ಪೂಜಾ ಪದ್ಧತಿಯನ್ನ ನೇರಪ್ರಸಾರ ಮಾಡುವುದು ಉದ್ದೇಶ ಹೊಂದಲಾಗಿದೆ ಎಂದು ಸಚಿವ ಪುಜಾರಿ ತಿಳಿಸಿದ್ದಾರೆ. ಬೆಂಗಳೂರು ಬನಶಂಕರಿ, ಸವದತ್ತಿ ಯಲ್ಲಮ್ಮ, ಮೈಸೂರು ಚಾಮುಂಡಿ, ನಂಜನಗೂಡು ಶ್ರೀಕಂಠೇಶ್ವರ, ಕಟೀಲು ಸೇರಿ ಹಲವು ದೇಗುಲಗಳಲ್ಲಿ ಪೂಜೆಯನೇರ ಪ್ರಸಾರ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅರ್ಚಕರಿಗೂ ತೀವ್ರ ಸಮಸ್ಯೆಯಾಗಿದೆ
ಕೊರೊನಾ ಲಾಕ್ಡೌನ್ನಿಂದಾಗಿ ಅರ್ಚಕರಿಗೂ ತೀವ್ರ ಸಮಸ್ಯೆಯಾಗಿದೆ. ಮೂರು ತಿಂಗಳ ತಸ್ತಿಕ್ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದೇವು. ಸಿಎಂ ಸೂಚನೆ ಮೇರೆಗೆ ಹಣಕಾಸು ಇಲಾಖೆ 33.66 ಕೋಟಿ ಹಣ ಬಿಡುಗಡೆ ಮಾಡಿದೆ. 29200 ದೇಗುಲಗಳ ಅರ್ಚಕರಿಗೆ ಮೂರು ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ. ದೇಗುಲಗಳ ಪ್ರಾರಂಭಕ್ಕೆ ಅರ್ಚಕರು ಮನವಿ ಮಾಡಿದ್ದಾರೆ. ಅವರು ತಟ್ಟೆಯ ಕಾಸನ್ನೇ ನಂಬಿಕೊಂಡಿದ್ದಾರೆ. ಲಾಕ್ ಡೌನ್ ನಿಂದ ಅವರಿಗೆ ಸಮಸ್ಯೆಯಾಗಿದೆ. ದೇಗುಲ ಪ್ರಾರಂಭವಾದರೆ ಅವರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸಚಿವ ಪೂಜಾರಿ ಹೇಳಿದ್ದಾರೆ.