ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆ: ಡಿಕೆ ಶಿವಕುಮಾರ್ ಟಾರ್ಗೆಟ್ ಯಾರು?
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಮತ್ತೆ ಕೆದಕಿದ ಸಚಿವ ಡಿ ಕೆ ಶಿವಕುಮಾರ್ ಅವರ ಹೇಳಿಕೆಯ ಹಿಂದಿನ ರಾಜಕೀಯ ಲೆಕ್ಕಾಚಾರವೇನು? ಐದು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಡಿಕೆಶಿಯ ಈ ನಿಲುವಿನಿಂದ ಪಕ್ಷಕ್ಕೇನಾದರೂ ಲಾಭವಾಗುತ್ತಾ ಅಥವಾ ಅವರು ಯಾರನ್ನು ಟಾರ್ಗೆಟ್ ಮಾಡಲು ಹೊರಟಿದ್ದಾರೆ? ಈ ರೀತಿಯ ಹಲವು ಚರ್ಚೆಗಳು ಆರಂಭವಾಗಿವೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ "ಕಾಂಗ್ರೆಸ್ ತಪ್ಪು ಮಾಡಿತು" ಎನ್ನುವ ಹೇಳಿಕೆ ನೀಡಿದರೆ, ಅದರಿಂದ ಎದುರಾಗುವ ವಿರೋಧವನ್ನು ಅರಿತೇ ನಾನು ಮಾತನಾಡಿರುವುದು ಎನ್ನುವ ಡಿಕೆಶಿ ಹೇಳಿಕೆಯಿಂದಾಗಿ, ಸ್ವಪಕ್ಷೀಯರೇ ಡಿಕೆಶಿ ವಿರುದ್ದ ತಿರುಗಿಬಿದ್ದಿದ್ದಾರೆ. ಜೊತೆಗೆ, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹೋರಾಟ ನಡೆಸಿದ್ದ ಪೀಠಾಧಿಪತಿಗಳೂ ಅವರ ವಿರುದ್ದ ಬೇಸರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ, ಪಕ್ಷದ ಮುಖಂಡರಿಂದಲೇ ಇವರಿಗೆ ಟ್ರಬಲ್ ಎದುರಾಗಿದೆಯಾ ಎನ್ನುವ ಪ್ರಶ್ನೆಗೆ, ಸದ್ಯದ ಮಟ್ಟಿಗೆ ಉತ್ತರ ಹೌದು. ಕೆಪಿಸಿಸಿ ಉಪಾಧ್ಯಕ್ಷ ಈಶ್ವರ ಖಂಡ್ರೆ, ಪಕ್ಷದ ಮುಖಂಡರಾದ ಎಂ ಬಿ ಪಾಟೀಲ್, ವಿನಯ್ ಕುಲ್ಕರ್ಣಿ ಸೇರಿದಂತೆ, ಹಲವು ಮುಖಂಡರು ಬಹಿರಂಗವಾಗಿಯೇ ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.
ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್
ಇದೂ ಅಲ್ಲದೇ, ಪಕ್ಷದ ಕೆಲವು ಮುಖಂಡರು, ಡಿ ಕೆ ಶಿವಕುಮಾರ್ ಅವರ ವಿರುದ್ದ ಹೈಕಮಾಂಡ್ ವಲಯದಲ್ಲೂ ದೂರು ನೀಡಿಯಾಗಿದೆ. ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಡಿ ಕೆ ಶಿವಕುಮಾರ್ ಪಕ್ಷಕ್ಕೆ ಮುಜುಗರ ತಂದೊಡ್ಡಿದ್ದಾರೆ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದನ್ನು ಮೊದಲು ಡಿಕೆಶಿ ಬಿಡಬೇಕು ಎಂದು ಎಂ ಬಿ ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಕೆ ಶಿವಕುಮಾರ್ ಟಾರ್ಗೆಟ್ ಯಾರು? ಮುಂದೆ ಓದಿ..
ತಕ್ಷಣವೇ ಕೆಪಿಸಿಸಿ ಉಸ್ತುವಾರಿಯಿಂದ ಪ್ರತಿಕ್ರಿಯೆ
ಪಕ್ಷದ ಮುಖಂಡರು ನೀಡಿರುವ ದೂರಿಗೆ ತಕ್ಷಣವೇ ಕೆಪಿಸಿಸಿ ಉಸ್ತುವಾರಿ ಪ್ರತಿಕ್ರಿಯಿಸಿದ್ದಾರೆಂದು ತಿಳಿದುಬಂದಿದೆ. ಉಪಚುನಾವಣೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಇಂತಹ ಹೇಳಿಕೆಯನ್ನು ನೀಡಬಾರದು. ಪ್ರತ್ಯೇಕ ಧರ್ಮ ಎನ್ನುವುದು ಸೂಕ್ಷ್ಮ ವಿಚಾರ. ಈ ರೀತಿಯ ಹೇಳಿಕೆಯನ್ನು ನೀಡುವಾಗ ಎಚ್ಚರದಿಂದ ಇರಿ ಎನ್ನುವ ಸೂಚನೆಯನ್ನು ಡಿಕೆಶಿಗೆ ವೇಣುಗೋಪಾಲ್ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ಸಮಾಜ ಫಲಿತಾಂಶ ಬದಲಿಸುವಷ್ಟು ಸಂಖ್ಯೆಯನ್ನು ಹೊಂದಿರುವ ಸಮುದಾಯ
ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಭಾವಿ ಲಿಂಗಾಯತ/ವೀರಶೈವ ಸಮಾಜ ಫಲಿತಾಂಶ ಬದಲಿಸುವಷ್ಟು ಸಂಖ್ಯೆಯನ್ನು ಹೊಂದಿರುವುದರಿಂದ, ಸಚಿವ ಡಿ ಕೆ ಶಿವಕುಮಾರ್ ಈ ರೀತಿಯ ಹೇಳಿಕೆಯನ್ನು ನೀಡಿರಬಹುದು. ಅಂದು ನಮ್ಮಿಂದ ತಪ್ಪಾಗಿದೆ, ಅದಕ್ಕೆ ಇಂದು ನಾವು ಕ್ಷಮೆಯಾಚಿಸುತ್ತಿದ್ದೇವೆ ಎನ್ನುವ ಡಿಕೆಶಿ ಹೇಳಿಕೆಯಿಂದ, ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಲಾಭವಾದರೂ ಆಗಬಹುದು. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ವರ್ಕೌಟ್ ಆದರೂ ಆಗಬಹುದು.
ಡಿಕೆಶಿಗೆ ಕೊನೆಗೂ ತಪ್ಪಿನ ಅರಿವಾಗಿರೋದು ಸಂತೋಷ: ಬಿಎಸ್ವೈ
ತಮ್ಮದೇ ಪಕ್ಷದ ಎಂ ಬಿ ಪಾಟೀಲರನ್ನು ಡಿಕೆಶಿ ಟಾರ್ಗೆಟ್ ಮಾಡುತ್ತಿದ್ದಾರಾ?
ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ ಇದನ್ನು ವಿರೋಧಿಸೋಣ ಎಂದಿದ್ದೆ, ಆದರೆ ನನ್ನ ಪರವಾಗಿ ಮಾತನಾಡುವವರ ಸಂಖ್ಯೆ ಕಮ್ಮಿಯಿದ್ದಿದ್ದರಿಂದ ಸುಮ್ಮನಾಗಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆ ಮೂಲಕ, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮಂಚೂಣಿಯಲ್ಲಿದ್ದ, ತಮ್ಮದೇ ಪಕ್ಷದ ಎಂ ಬಿ ಪಾಟೀಲರನ್ನು ಡಿಕೆಶಿ ಟಾರ್ಗೆಟ್ ಮಾಡುತ್ತಿದ್ದಾರಾ? ಸಚಿವ ಸ್ಥಾನ ಸಿಗದೇ ಇದ್ದಾಗ ದೊಡ್ಡ ಮಟ್ಟದ ನಿರಾಸೆ ವ್ಯಕ್ತಪಡಿಸಿದ್ದ ಪಾಟೀಲರನ್ನು ಸಮಾಧಾನ ಪಡಿಸಿದ್ದು ಸಿಎಂ ಕುಮಾರಸ್ವಾಮಿ. ಅಂದಿನ ಸಿಎಂ ಸಿದ್ದರಾಮಯ್ಯನವರಿಗೆ ಬೇಡವಾದ ಐಡಿಯಾವನ್ನು ನೀಡಿದ್ದಕ್ಕೆ , ಪರೋಕ್ಷವಾಗಿ ಡಿಕೆಶಿ ಈ ರೀತಿಯ ಹೇಳಿಕೆಯನ್ನು ನೀಡಿರಬಹುದು.
ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಯಾಚಿಸಬೇಕು: ಮಾತೆ ಮಹಾದೇವಿ
ಮಾಜಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ?
ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಡಿಕೆಶಿ ನೀಡಿರುವ ಹೇಳಿಕೆ ಒಂದು ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕೈಹಾಕುವುದು ಬೇಡ ಎಂದು ಹೈಕಮಾಂಡ್ ಕೂಡಾ ಸಿದ್ದರಾಮಯ್ಯನವರಿಗೆ ಸೂಚಿಸಿತ್ತು. ಆದರೂ, ವರಿಷ್ಠರ ಮನವೊಲಿಸಿ, ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಕಾಂಗ್ರೆಸ್ಸಿಗೆ ಕಳೆದ ಚುನಾವಣೆಯಲ್ಲಿ ಏಟು ನೀಡಿತು ಎನ್ನುವ ಸಂದೇಶವನ್ನು ಡಿಕೆಶಿ ಈ ಮೂಲಕ, ಸಿದ್ದರಾಮಯ್ಯನವರಿಗೆ ಕಳುಹಿಸಿರುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಆಕಾಂಕ್ಷೆ?
ಇನ್ನೊಂದು ಆಯಾಮದಲ್ಲಿ ಅವಲೋಕಿಸುವುವುದಾದರೆ, ಲಿಂಗಾಯತ/ವೀರಶೈವ ಧರ್ಮ ವಿಭಜನೆ ಪ್ರಮುಖವಾಗಿ ಚರ್ಚೆಯಾಗುವುದು ಉತ್ತರ ಕರ್ನಾಟಕದ ಭಾಗದಲ್ಲಿ. ಒಕ್ಕಲಿಗ ಸಮುದಾಯದ ನಂಬರ್ ಒನ್ ನಾಯಕನಾಗಲು ಡಿಕೆಶಿ ಮುಂದೆ ಇನ್ನೂ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಇದ್ದಾರೆ. ಹಾಗಾಗಿ, ಉತ್ತರ ಕರ್ನಾಟಕದ ಭಾಗದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಡಿಕೆಶಿ ಈ ರೀತಿಯ ಹೇಳಿಕೆಯನ್ನು ನೀಡಿರುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ಪ್ರಮುಖ ಮನಸ್ತಾಪ ಬರಲು ಕಾರಣ ಡಿಕೆಶಿ. ಅವರ ಹಸ್ತಕ್ಷೇಪ ಜಾಸ್ತಿ ಎನ್ನುವ ಸಿಟ್ಟನ್ನು ಖುದ್ದು ಜಾರಕಿಹೊಳಿ ಸಹೋದರರು ಹೊರಹಾಕಿದ್ದರು. ಆ ಭಾಗದಲ್ಲಿ ತಮ್ಮ ಚಿತ್ತವನ್ನು ಡಿಕೆಶಿ ಹರಿಸುತ್ತಿದ್ದಾರಾ ಎನ್ನುವ ಪ್ರಶ್ನೆಗೆ, ಇದೂ ಒಂದು ಉತ್ತರ.