Monsoon Rain: ಜೂನ್ 10 ದಿನಗಳಲ್ಲಿ ಮುಂಗಾರು ಮಳೆ ಕೊರತೆ: ಮುಂದಿನ 2 ವಾರಗಳ ಮುನ್ಸೂಚನೆ ಇಲ್ಲಿದೆ
Monsoon Rain Big Update: ಭಾರತದಲ್ಲಿ ಮುಂಗಾರು ಮಳೆ ಋತು ಆರಂಭವಾಗಿ 10 ದಿನವಾಗಿದೆ. ಕೊಂಚ ತಡವಾಗಿ ಬಂದರೂ ಸಹಿತ ದಕ್ಷಿಣ ರಾಜ್ಯಗಳಲ್ಲಿ ಮುಂಗಾರು (Monsoon Rain 2026) ವ್ಯಾಪಕವಾಗಿ ಸುರಿದರೂ ಸಹಿತ ಈ ಅವಧಿಯಲ್ಲಿ ಮಳೆ ಕೊರತೆ ಉಂಟಾಗಿದೆ. ಮುಂದೆ ನಿಗದಿತ ಸಮಯಕ್ಕೆ ಉತ್ತರ ಭಾರತದ ರಾಜ್ಯಗಳನ್ನು ಪ್ರವೇಶಿಸುವುದು ಅನುಮಾನ ಎನ್ನಲಾಗಿದೆ. ಕಾರಣ ಪಶ್ಚಿಮ ಭಾಗದಲ್ಲಿ ಉಂಟಾದ ಹವಾಮಾನ ಅಡೆತಡೆಗಳಿಂದ ಮುಂಗಾರು ತಾತ್ಕಾಲಿಕವಾಗಿ ದುರ್ಬಲಗೊಂಡಿದೆ. ಹೀಗಾಗಿ ಮುಂದಿನ ಎರಡು ವಾರದ ಮುಂಗಾರು ವಿಸ್ತರಣೆ, ಮಳೆ ಆಗಮನದಲ್ಲಿ ನಿಧಾನಗತಿ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ಗುರುವಾರ ಮುನ್ನೆಚ್ಚರಿಕೆ ನೀಡಿದ್ದಾರೆ.
ಮುಂಗಾರು ಮಳೆ ಪ್ರಸ್ತುತ ಮಂದಗತಿಯಲ್ಲಿ ಸಾಗಿದೆ. ಮುಂದಿನ ಎರಡು ವಾರಗಳಲ್ಲಿ ಮುಂಗಾರಿನ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಆಗಲಿದೆ. ಮಧ್ಯ ಮತ್ತು ಉತ್ತರ ಭಾರತದ ರಾಜ್ಯಗಳು ನಿಧಾನಗತಿಯ ಮುಂಗಾರು ಸಮಸ್ಯೆ ಎದುರಿಸಲಿವೆ. ಈ ಮೊದಲು ಹೇಳಿದಂತೆ ಜೂನ್ 15ರ ಹೊತ್ತಿಗೆ ರಾಜಸ್ಥಾನ ತಲುಪಿ ಅಲ್ಲಿಂದ ಇನ್ನಿತರ ರಾಜ್ಯಗಳನ್ನು ವಿಸ್ತರಿಸಲಿದೆ ಎನ್ನಲಾಗಿತ್ತು. ಸದ್ಯ ಎದುರಾದ ಹವಾಮಾನ ಅಡಚಣೆಯಿಂದ ನಿರೀಕ್ಷಿತ ವೇಗದಲ್ಲಿ ಸಾಗದೇ, ಉತ್ತರ ಭಾಗದ ರಾಜ್ಯಗಳಲ್ಲಿ ಮಳೆ ಕೊರತೆ ಆಗುವ ಸಂಭವವಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಾಪಿಸಿ ಮಳೆ ಸುರಿಸಿದ್ದ ಮುಂಗಾರು ಮಧ್ಯ ಭಾರತಕ್ಕೆ ತಲುಪಲು ಇನ್ನೂ ಕೆಲವು ದಿನ ಬೇಕಾಗುತ್ತದೆ. ಜೂನ್ನಿಂದ ಸೆಪ್ಟಂಬರ್ ವರೆಗಿನ ಈ ಮುಂಗಾರು ಮಳೆ ದೇಶಕ್ಕೆ ಲಭ್ಯವಾಗುವ ಒಟ್ಟು ಮಳೆಯಲ್ಲಿ ಶೇ. 70ರಷ್ಟು ನೀರು ಒದಗಿಸುತ್ತದೆ. ಕೃಷಿ, ನೀರಾವರಿ, ಜಲ ಮೂಲಗಳಿಗೆ ಈ ನಿರೇ ಆಧಾರವಾಗಿದೆ. ದೇಶದ ಆರ್ಥಿಕತೆಯನ್ನು ಮುಂಗಾರು ನಿರ್ಧರಿಸುತ್ತದೆ.
ಜೂನ್ 10 ದಿನಗಳಲ್ಲಿ ಶೇ. 26.5ರಷ್ಟು ಮಳೆ ಕೊರತೆ
ಭಾರತಕ್ಕೆ ಪ್ರತಿ ವರ್ಷ ಜೂನ್ 1ರ ಸುಮಾರಿಗೆ ಮುಂಗಾರು ಮಳೆ ಸುರಿಸುವ ಮಾರುತಗಳು ಕೇರಳ ಪ್ರವೇಶಿಸುತ್ತವೆ. ಮೊದಲಿಗೆ ಐಎಂಡಿ ಈ ಸಲ ಅವಧಿಗೂ ಮುನ್ನವೇ ಮುಂಗಾರು ಆಗಮಿಸಲಿದೆ ಎಂದಿತ್ತು. ಬಳಿಕ ಅದು ಸುಳ್ಳಾಯಿತು. ಕೊಂಚ ವಿಳಂಬದ ನಂತರ ಜೂನ್ 4ರಂದು ಕೇರಳವನ್ನು ಅಧಿಕೃತವಾಗಿ ಪ್ರವೇಶಿಸಿತು. ಒಟ್ಟಾರೆ ಮುಂಗಾರಿನ ಈ ಜೂನ್ 10 ದಿನಗಳಲ್ಲಿ (ಜೂನ್ 1-10) ನಿರೀಕ್ಷಿತ ಮಳೆಗಿಂತ ಕಡಿಮೆ ಆಗಿದೆ. ಅಂದರೆ ಶೇ. 26.5ರಷ್ಟು ಮಳೆ ಕಡಿಮೆ ದಾಖಲಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಸದ್ಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾಗೆ ಮುಂಗಾರು ಪ್ರವೇಶಿಸಿದೆ. ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆಗಳು ಇವೆ. ಸದ್ಯ ನಿಧಾನಗತಿಯಲ್ಲಿರುವ ಮುಂಗಾರು ಇದೇ ತಿಂಗಳಾಂತ್ಯಕ್ಕೆ ವೇಗ ಪಡೆದುಕೊಳ್ಳುವ ಜೊತೆಗೆ ನಿರೀಕ್ಷೆಯಷ್ಟು ಮಳೆ ಸುರಿಸಬಹುದೆಂದು ಅಂದಾಜಿಸಲಾಗಿದೆ. ಆಗ ಇಡೀ ಭಾರತಾದ್ಯಂತ ಮುಂಗಾರು ಆವರಿಸಿ ಎಲ್ಲ ರಾಜ್ಯಗಳಿಗೆ ಉತ್ತಮ ಮಳೆ ಆಗಬಹುದೆಂದು ಮತ್ತೊಬ್ಬ ಐಎಂಡಿ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
2026ರಲ್ಲಿ ಶೇ.10 ರಷ್ಟು ಮಳೆ ಕೊರತೆ
ಮುಂಗಾರು ಮಳೆ ಆಗಮಿಸುವ ಮುನ್ನವೇ ಐಎಂಡಿ ತನ್ನ ಮುನ್ಸೂಚನಾ ವರದಿಯಲ್ಲಿ, 2026ರಲ್ಲಿ ಶೇ.100ರಲ್ಲಿ 92ರಷ್ಟು ಮಾತ್ರವೇ ಮುಂಗಾರು ಮಳೆ ಆಗುತ್ತದೆ. ಶೇ. 8ರಷ್ಟು ಕೊರತೆ ಉಂಟಾಗುತ್ತದೆ ಎಂದಿತ್ತು. ನಂತರ ಶೇ. 90ರಷ್ಟು ಮಳೆ ಆಗಲಿದ್ದು, ಶೇ.10ರಷ್ಟು ಮಳೆ ಕೊರತೆ ಆಗುತ್ತದೆ ಎಂದು ತಿಳಿಸಿದೆ. ಇದಕ್ಕೆ ಹಿಂದೂ ಮಹಾಸಾಗರದ ಮೇಲ್ಮೈನಲ್ಲಿ ಉಂಟಾಗುವ ಎಲ್ನಿನೋ ಪ್ರಭಾವವೇ ಕಾರಣ ಅಂತಲೂ ಹೇಳಿದೆ. ಪೆಸಿಫಿಕ್ ಓಸಿಯನ್ನ ಮೇಲ್ಮೈನಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಿರುವ ವಾತಾವರಣವನ್ನು ಎಲ್ನಿನೋ ಎಂದು ಕರೆಯಲಾಗುತ್ತದೆ. ಅಲ್ಲಿ ಉಷ್ಣಾಂಶ ಜಾಸ್ತಿ ಇದ್ದಾಗ ಸಾಮಾನ್ಯವಾಗಿ ಮುಂಗಾರು ಮಳೆ ಕಡಿಮೆ ಆಗುತ್ತದೆ.
ಮುಂಗಾರು ಬಂದ ಬಳಿಕ ಬದಲಾಗದ ಹವಾಮಾನ
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿ ಸೇರಿ ವಿವಿಧ ಭಾಗಗಳಲ್ಲಿ ಕಳೆದ ಕೆಲವು ವಾರಗಳಿಂದಲೂ ವಾಯು ಚಂಡಮಾರುತ ಪ್ರಸರಣ ವ್ಯವಸ್ಥೆ, ತೀವ್ರ ಸುಳಿಗಾಳಿ, ಟ್ರಫ್, ಆಗೊಮ್ಮೆ ಈಗೊಮ್ಮೆ ವಾಯುಭಾರ ಕುಸಿತ ಉಂಟಾಗಿತ್ತು. ಇದರಲ್ಲಿ ಯಾವೊಂದು ವೈಪರೀತ್ಯಗಳು ಸಹಿತ ಸ್ಪಷ್ಟ ಚಂಡಮಾರುತವಾಗಿ ಬದಲಾಗಲಿಲ್ಲ. ನಿರೀಕ್ಷೆಯಂತೆ ಮುಂಗಾರು ಆಗಮಿಸಿದ ಬಳಿಕ ಈ ಹವಾಮಾನ ಬದಲಾವಣೆಗಳು ದುರ್ಬಲಗೊಂಡಿವೆ. ಇದು ಮಳೆ ಕಡಿಮೆ ಆಗಲು ಪ್ರಮುಖ ಕಾರಣ ಎನ್ನಲಾಗಿದೆ.













Click it and Unblock the Notifications