ಬೆಂಗಳೂರು-ಮಲೆನಾಡು, ಮಧ್ಯ ಕರ್ನಾಟಕಕ್ಕೆ ವಾಯುಯಾನ ಬೂಸ್ಟ್: ವಿಮಾನ ಸೇವೆ ಪುನಾರಂಭಕ್ಕೆ ಕೇಂದ್ರಕ್ಕೆ ಮನವಿ
ಬೆಂಗಳೂರು: ಜೂನ್ನಿಂದ ರಾಜ್ಯದಲ್ಲಿ ಬೀದರ್, ಬೆಂಗಳೂರು, ಕಲಬುರಗಿ ಮಾರ್ಗದಲ್ಲಿ ಅಧಿಕೃತವಾಗಿ ವಿಮಾನಯಾನ ಪುನರ್ ಆರಂಭವಾಗಿದೆ. ಆದರೆ ಅದ್ಧೂರಿ ಉದ್ಘಾಟನೆ ಕಂಡು, ಪ್ರಯಾಣಿಕರ ಕೊರತೆ ಹಿನ್ನೆಲೆ ಸ್ಥಗಿತಗೊಂಡಿದ್ದ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣದಿಂದಲೂ ವಿಮಾನಯಾನ ಆರಂಭಿಸುವ ಒತ್ತಾಯ ಜೋರಾಗಿದೆ. ಇದೀಗ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರೇ ಮಧ್ಯ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವಂತೆ ಉಡಾನ್ ಯೋಜನೆಯ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ-ಬೆಂಗಳೂರು ವಾಯುಮಾರ್ಗ ಸೇರಿಸುವಂತೆ ಕೇಂದ್ರಕ್ಕೆ ಕೋರಿದ್ದಾರೆ.
ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿರುವ ಸಚಿವ ಎಂಬಿ ಪಾಟೀಲ್ ಅವರು, ನಷ್ಟದ ಕಾರಣಕ್ಕಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಯನ್ನು ಸದ್ಯದಲ್ಲೇ ನಡೆಯಲಿರುವ ಉಡಾನ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಬೇಕು. ವಿಮಾನಸೇವೆಯ ಪುನಾರಂಭವು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ತಿಳಿಸಿದರು.

ಮಧ್ಯ ಕರ್ನಾಟಕ ಬೆಳವಣಿಗೆಗೆ ನೀರ್ಣಾಯಕ
2023ರ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಿತು. ಇದಾದ ಮೇಲೆ ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಕಾರ್ಯಾಚರಣೆ ಆರಂಭಿಸಿತ್ತು. ಬಳಿಕ ಕೆಲ ತಿಂಗಳಿನಲ್ಲೇ ಈ ಸೇವೆ ಸ್ಥಗಿತಗೊಂಡಿದ್ದು, ತೊಂದರೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಈ ಸೇವಾ ಸ್ಥಗಿತದಿಂದ ಹಾನಿಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರು ನಗರಕ್ಕೆ ನೇರ ವಿಮಾನ ಇಲ್ಲದೆ ಇರುವುದರಿಂದ ದೇಶದ ಬೇರೆಬೇರೆ ಭಾಗಗಳು ಮತ್ತು ವಿದೇಶಗಳಿಗೆ ಹೋಗುವವರಿಗೂ ತೊಂದರೆ ಆಗುತ್ತಿದೆ. ಆದ್ದರಿಂದ ವಿಜಿಟಿ ಫಂಡ್ ನೆರವಿನ ಮೂಲಕ ಉಡಾನ್ ಯೋಜನೆಯ ಉದ್ದೇಶಿತ ಬಿಡ್ ನಲ್ಲಿ ಈ ಮಾರ್ಗದ ಸೇರ್ಪಡೆ ಮಾಡಲು ತಾವು ಮಧ್ಯೆ ಪ್ರವೇಶಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ನೈಟ್ ಲ್ಯಾಂಡಿಂಗ್ ಸೌಲಭ್ಯ ಕಾಮಗಾರಿ
ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೇನು ಪೂರ್ಣಗೊಳ್ಳಲಿದೆ. ಏರ್ ಪೋರ್ಟ್ನಲ್ಲಿ ಇನ್ನಿತರ ಎಲ್ಲ ಮೂಲ ಸೌಲಭ್ಯಗಳು ಇವೆ. ಆದ್ದರಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಕೋರಿದರು.
ಕಲ್ಯಾಣ ಕರ್ನಾಟಕದ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಸರ್ಕಾರದ ಈ ಮೊದಲೇ ಉದ್ದೇಶಿಸಿದಂತೆ ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವಿಮಾನ ಕಾರ್ಯಾಚರಣೆಯನ್ನು ಪುನರ್ ಆರಂಭಿಸಿದೆ. ಉದ್ಯಮಿಗಳು, ಪ್ರಯಾಣಿಕರ ಇಷ್ಟು ದಿನದ ಪ್ರಯತ್ನ ಫಲಿಸಿದ್ದು, ಸಂತಷಗೊಂಡಿದ್ದಾರೆ.
2022ರಲ್ಲಿ ಸ್ಥಗಿತಗೊಂಡಿದ್ದ ವಿಮಾನ ಕಾರ್ಯಾಚರಣೆ
ವಿವಿಧ ಕಾರಣಗಳಿಂದಾಗಿ 2022ರ ಅಂತ್ಯದ ವೇಳೆಗೆ ಈ ಎರಡು ಮಾರ್ಗಗಳ ಮಧ್ಯದ ವಿಮಾನ ಸೇವೆ ಸ್ಥಗಿತೊಂಡಿತ್ತು. ಐಟಿ ಕೇಂದ್ರ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವುದರಿಂದ ವಾಣಿಜ್ಯ, ಕೈಗಾರಿಕೆ, ಪ್ರವಾದ್ಯೋಮ ದೃಷ್ಟಿಯಿಂದ ಅನುಕೂಲವಾಗಲಿದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಈ ಮಾರ್ಗಗಳಲ್ಲಿ ವಿಮಾನಯಾನ ನಡೆಸಲು ಅಗತ್ಯವಿದ್ದ 14ಕೋಟಿಗೂ ಅಧಿಕ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಶೇಕಡಾ 80ರಷ್ಟು ಒದಗಿಸಲು ನಿರ್ಧರಿಸಿದೆ. ಉಳಿಕ ಹಣವನ್ನು ರಾಜ್ಯ ಸರ್ಕಾರ ನೀಡಿ ವಿಮಾನಯಾನ ಪುನರ್ ಆರಂಭಕ್ಕೆ ನಿರ್ಧರಿಸಲಾಗಿದೆ. ಅದರಂತೆ ತಿಂಗಳುಗಳ ಪೂರ್ವ ತಯಾರಿ ಮಾಡಿಕೊಂಡಿದ್ದು, ಜೂನ್ ಎರಡನೇ ವಾರದಿಂದ ಬೆಂಗಳೂರು-ಕಲಬುರಗಿ, ಬೆಂಗಳೂರು-ಬೀದರ್ ಮಾರ್ಗದಲ್ಲಿ ವಿಮಾನ ಸೇವೆ ಶುರುವಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಎರಡು ಜಿಲ್ಲೆಗಳಿಗೆ ವಿಮಾನಯಾನ ಸೇವೆ ಪುನರ್ ಆರಂಭಿಸುವಲ್ಲಿ ಸಚಿವರಾದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ರಹೀಮ್ ಖಾನ್ ಹಾಗೂ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.














Click it and Unblock the Notifications