ಜೆಡಿಎಸ್ ವರಿಷ್ಠರು ಮಠದ ಸ್ವಾಮಿಗಳಾಗಲಿ : ಡಿಕೆಶಿ
ಹಾಸನ, ಮಾ.27: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹಾಸನ ಹಾಸನದ ಲೋಕಸಭಾ ಕ್ಷೇತ್ರದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರವೇಶದಿಂದ ಕಿಚ್ಚು ಹೆಚ್ಚಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಶತಾಯ ಗತಾಯ ಸೋಲಿಸಲು ಕಾಂಗ್ರೆಸ್ ಹೂಡಿರುವ ರಣತಂತ್ರದ ಬಗ್ಗೆ ಬೆಳಗ್ಗೆ ಓದಿರುತ್ತೀರಿ. ಈಗ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಡಿಕೆಶಿ ಅವರ ಡೈಲಾಗ್ ಗಳತ್ತ ಒಂದು ನೋಟ ಇಲ್ಲಿದೆ...
ದೇವೇಗೌಡರ ಕುಟುಂಬದ ಎದುರಾಳಿ ಡಿಕೆ ಶಿವಕುಮಾರ್ ಅವರನ್ನು ಹಾಸನ ಉಸ್ತುವಾರಿಗೆ ಕಾಂಗ್ರೆಸ್ ಬಿಟ್ಟಿದ್ದು, ಅರಕಲಗೂಡು ಮಂಜು ಅವರ ಪರ ಪ್ರಚಾರಕ್ಕಿಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡಾ ತಮ್ಮ ಆಪ್ತ ಮಂಜು ಪರ ಮತಯಾಚನೆಗಾಗಿ ಮಾ.29ರಂದು ಹಾಸನಕ್ಕೆ ಬಂದು ಬೃಹತ್ ಸಭೆಯಲ್ಲಿ ವಾಕ್ಸಮರ ಮುಂದುವರೆಸಲಿದ್ದಾರೆ.
ಎಚ್ ಡಿಡಿ ಮಠ ಸೇರಲಿ: ಪ್ರತಿ ಬಾರಿಯೂ ಇದೇ ಕೊನೆ ಚುನಾವಣೆ ಎಂದು ಹೇಳುವ ಜೆಡಿಎಸ್ ಹಿರಿಯ ನಾಯಕರು (ಎಚ್ ಡಿ ದೇವೇಗೌಡ) ರಾಜಕಾರಣ ಬಿಟ್ಟು ಮಠದ ಸ್ವಾಮಿಗಳಾಗಿ ಕುಳಿತುಕೊಳ್ಳುವುದು ಉತ್ತಮ ಎಂದು ಸಚಿವ ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ. ಡಿಕೆಶಿ ನುಡಿಮುತ್ತುಗಳು ಇಲ್ಲಿವೆ:

* ಜಿಲ್ಲೆಯಲ್ಲಿ ಜೆಡಿಎಸ್ ಸಾಕ್ಷಿಕರಿಸುವಂಥ ಯಾವುದೇ ಗುರುತರ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮಾಡಿರುವ ಕುರುಹು ತೋರಿಸಲಿ.
* ಕಾಂಗ್ರೆಸ್ ದೇಶದ ಶಕ್ತಿ, ನಮ್ಮದು ಕಾರ್ಯಕರ್ತರ ಪಕ್ಷ ಅವರದ್ದು ಅಪ್ಪ ಮಕ್ಕಳ ಪಕ್ಷ
* ಜೆಡಿಎಸ್ ನಿಂದ ದೇವೇಗೌಡರು ಸಿಎಂ, ಪ್ರಧಾನಿಯಾದರು, ಎಚ್ಡಿಕೆ ಸಿಎಂ ಆಗಿದ್ದರು ಆದರೂ ಜಿಲ್ಲೆ ಸ್ಥಿತಿ ಯಾಕೆ ಹೀಗಿದೆ
* ಸಿದ್ದರಾಮಯ್ಯ ಅವರ ಅನ್ನಭಾಗ್ಯ ಜನರನ್ನು ತಲುಪಿದ್ದು ನಮ್ಮ ಅಭ್ಯರ್ಥಿಗೆ ಜನಪರ ಯೋಜನೆಗಳೆ ಶ್ರೀರಕ್ಷೆ.
* ಪಾರ್ಲಿಮೆಂಟ್ ನಲ್ಲಿ ಒಂದೇ ಒಂದು ಪ್ರಶ್ನೆ ಕೇಳದವರು ಈಗ ತಪ್ಪಿಸಿಕೊಂಡು ಸುಳ್ಳು ಸಮಜಾಯಿಷಿ ನೀಡುತ್ತಿದ್ದಾರೆ.
* ರಾಜಕೀಯ ಎಂದರೆ ಫುಟ್ಬಾಲ್ ಆಟವಲ್ಲ, ಇದು ಚದುರಂಗದಾಟ
* ಪಾಪ ಜೆಡಿಎಸ್ ಗೆ ವಿರೋಧ ಪಕ್ಷದ ಸ್ಥಾನವೂ ಇಲ್ಲ, ಕಚೇರಿ ಕೂಡಾ ಕೈ ತಪ್ಪಿ ಹೋಗಿದೆ.
* ಜೆಡಿಎಸ್ ನಲ್ಲಿ ಭವಿಷ್ಯವಿಲ್ಲ ಎಂದು ಎಲ್ಲರೂ ಕಾಂಗ್ರೆಸ್ ಹಾದಿ ಹಿಡಿದಿದ್ದಾರೆ. ಕೊನೆ ಯಾರು ಉಳಿಯುತ್ತಾರೆ ಎಲ್ಲರಿಗೂ ಗೊತ್ತೇ ಇದೆ.
* ದೇವೇಗೌಡರು ಪ್ರಧಾನಿಯಾಗಲು ಕಾಂಗ್ರೆಸ್ ಕೂಡಾ ಕಾರಣ ಎಂಬುದನ್ನು ಮರೆಯಬಾರದು.
* ದೇವೇಗೌಡರಿಗೆ ಭವಿಷ್ಯವಿಲ್ಲವೆಂದ ಮೇಲೆ ತೃತೀಯರಂಗ ಎಂಬುದಕ್ಕೆ ಭವಿಷ್ಯವಿರಲು ಸಾಧ್ಯವೇ?
* ಮಂಡ್ಯ ಆದ ಮೇಲೆ ಹಾಸನ ಕಾಂಗ್ರೆಸ್ ವಶವಾಗುವುದು ಸತ್ಯ.












Click it and Unblock the Notifications