ಜಯಾ ಅರ್ಜಿ ವಿಚಾರಣೆ, ಕೋರ್ಟ್ನಲ್ಲಿ ಲಿಂಬೆಹಣ್ಣು ಪತ್ತೆ!
ಬೆಂಗಳೂರು, ಮಾ.6 : ಕರ್ನಾಟಕದ ರಾಜಕಾರಣದಲ್ಲಿ ಕೆಲವು ದಿನಗಳಿಂದ ಲಿಂಬೆಹಣ್ಣಿನದ್ದೇ ಚರ್ಚೆ. ಸದ್ಯ ಇದು ಹೈಕೋರ್ಟ್ ಆವರಣಕ್ಕೂ ಕಾಲಿಟ್ಟಿದೆ. ಜಯಯಲಿತಾ ಅರ್ಜಿ ವಿಚಾರಣೆ ನಡೆಯುತ್ತಿರುವ ವಿಶೇಷ ಪೀಠದ ಕೋರ್ಟ್ಹಾಲ್ನಲ್ಲಿ ಲಿಂಬೆಹಣ್ಣು ಸಿಕ್ಕಿದ್ದು, ಕುತೂಹಲ ಮೂಡಿಸಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ಮೇಲ್ಮನವಿ ವಿಚಾರಣೆ ಕರ್ನಾಟಕ ಹೈಕೋರ್ಟ್ನ ವಿಶೇಷ ಪೀಠದಲ್ಲಿ ನಡೆಯುತ್ತಿದೆ. ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. [ಆಸ್ತಿಗಳಿಕೆ ಪ್ರಕರಣ : ಜಯ ಅರ್ಜಿ ವಿಚಾರಣೆ ಆರಂಭ]

ಜಯಲಲಿತಾ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಭವಾಸಿ ಸಿಂಗ್ ಅವರು ಕುಳಿತುಕೊಳ್ಳುವ ಕುರ್ಚಿಯ ಪಕ್ಕದಲ್ಲಿ ಕಂಡುಬಂದ ಲಿಂಬೆಹಣ್ಣು ಕುತೂಹಲಕ್ಕೆ ಕಾರಣವಾಗಿದೆ. ಇದು ಮಂತ್ರಿಸಿ ತಂದ ಲಿಂಬೆಹಣ್ಣು, ಮಧುರೈನಿಂದ ಇದನ್ನು ತರಲಾಗಿದೆ ಎಂಬ ಸುದ್ದಿಗಳೂ ಹಬ್ಬಿವೆ. [ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿವರ]
ಲಿಂಬೆಹಣ್ಣು ಯಾರದ್ದು : ಹಲವು ಸುತ್ತಿನ ಚರ್ಚೆಗಳ ಬಳಿಕ ಆ ಲಿಂಬೆಹಣ್ಣು ವಕೀಲರೊಬ್ಬರಿಗೆ ಸೇರಿದ್ದು, ಅದು ಆಕಸ್ಮಿಕವಾಗಿ ಭವಾನಿ ಸಿಂಗ್ ಅವರು ಕುಳಿತುಕೊಳ್ಳುವ ಕುರ್ಚಿಯ ಸಮೀಪ ಬಂದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲವು ವಕೀಲರು ಲಿಂಬೆಹಣ್ಣಿನ ಕಥೆ ಕೇಳಿದ್ದಾರೆ. ಆದರೆ, ಅದನ್ನು ನೋಡಿದವರು ಕಡಿಮೆ. [ದೇವೇಗೌಡ, ಪರಮೇಶ್ವರ ಲಿಂಬೆಹಣ್ಣು ಕಿತ್ತಾಟ]
ಹೈಕೋರ್ಟ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪ್ರಕಾರ ಲಿಂಬೆಹಣ್ಣು ವಕೀಲರಿಗೆ ಸೇರಿದ್ದು, ಕೆಲವು ವಕೀಲರಿಗೆ ಲಿಂಬೆಹಣ್ಣು ಹಿಡಿದುಕೊಂಡು ಬರುವ ಅಭ್ಯಾಸವಿದೆ. ಕೋಟ್ನಲ್ಲಿ ಇಟ್ಟುಕೊಳ್ಳುವ ಲಿಂಬೆಹಣ್ಣು ಆಕಸ್ಮಿಕವಾಗಿ ಭವಾನಿ ಸಿಂಗ್ ಅವರು ಕೂರುವ ಸ್ಥಳದಲ್ಲಿ ಬಿದ್ದಿದೆ. [ನಿಂಬೆಹಣ್ಣು ಸುಖ ದುಃಖ ತೋಡಿಕೊಂಡಾಗ..]
ಲಿಂಬೆಹಣ್ಣಿನ ಮಹತ್ವ : ಕರ್ನಾಟಕದಲ್ಲಿ ಮಾಟ, ಮಂತ್ರ, ಲಿಂಬೆಹಣ್ಣಿನ ಬಗ್ಗೆ ಹಲವಾರು ಕಥೆಗಳಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಲಿಂಬೆಹಣ್ಣು ಪತ್ತೆಯಾಗಿತ್ತು. ಜೆಡಿಎಸ್ ಮಾಟ ಮಾಡಿಸಿ ಲಿಂಬೆಹಣ್ಣು ತಂದುಹಾಕಿದೆ ಎಂದು ಆಗ ಬಿಜೆಪಿ ಆರೋಪ ಮಾಡಿತ್ತು.
ಕೆಲವು ದಿನಗಳ ಹಿಂದೆ ಜೆಡಿಎಸ್ ಸುಪ್ರೀಂಕೋರ್ಟ್ ಆದೇಶದ ಅನ್ವಯ ತನ್ನ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಮೇಲೆ ಕಚೇರಿ ಮುಂಭಾಗದಲ್ಲಿ ಲಿಂಬೆಹಣ್ಣು, ಹಳೆ ಬಟ್ಟೆ ಪತ್ತೆಯಾಗಿ ಭಾರೀ ಸುದ್ದಿಯಾಗಿತ್ತು. ಕಾಂಗ್ರೆಸ್ ಜೆಡಿಎಸ್ ಪಕ್ಷ ಮಾಟ ಮಾಡಿಸಿದೆ ಎಂದು ದೂರಿತ್ತು.












Click it and Unblock the Notifications