3ದಿನ ಸಿಎಂ ಆಗಿದ್ದ ಯಡಿಯೂರಪ್ಪ, ಮೊದಲು ಮಾಡಿದ್ದ ಕೆಲಸವೇನು ಗೊತ್ತಾ?
ಬೆಂಗಳೂರು, ಜುಲೈ 26: ಒಂದು ವಾರದೊಳಗೆ ಬಹುಮತ ಸಾಬೀತು ಪಡಿಸಬೇಕು ಎನ್ನುವ ರಾಜ್ಯಪಾಲರ ಸೂಚನೆಯ ನಡುವೆ, ಯಡಿಯೂರಪ್ಪ ಆಷಾಢ ಶುಕ್ರವಾರ ಸಂಜೆ ಆರು ಗಂಟೆಗೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಳೆದ ವರ್ಷ ಅಸೆಂಬ್ಲಿ ಚುನಾವಣೆ ಮುಗಿದ ನಂತರ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ರಾಜ್ಯಪಾಲರು ಸರಕಾರ ರಚಿಸುವಂತೆ ಆಹ್ವಾನಿಸಿದ್ದರು. ಈಗಿನಂತೆ ಆಗಲೂ, ಬಿಜೆಪಿಗೆ ಸಂಖ್ಯಾಬಲದ ಕೊರತೆಯಿತ್ತು. ಆದರೂ, ಯಡಿಯೂರಪ್ಪ 17.05.2018ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟಿದ್ದರು. ಮೂರೇ ದಿನದಲ್ಲಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಬಿಎಸ್ವೈ ರಾಜೀನಾಮೆ ನೀಡಿದ್ದರು.
ಆ ಮೂರು ದಿನಗಳಲ್ಲಿ, ಯಡಿಯೂರಪ್ಪ ಪ್ರತಿಜ್ಞಾವಿಧಿಗೆ ಸಹಿಹಾಕಿದ ಕೂಡಲೇ, ಮೊದಲು ಕೈಹಾಕಿದ್ದು IPS ಅಧಿಕಾರಿಗಳ ವರ್ಗಾವಣೆಗೆ. ಬಹುಮತ ಸಾಬೀತು ಪಡಿಸುವ ಮುನ್ನ, ಯಡಿಯೂರಪ್ಪನವರು ಅದು ಹೇಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆಂದು, ಪೊಲೀಸ್ ವರ್ಗಾವಣೆ ವಿಚಾರ ಭಾರೀ ಚರ್ಚೆ ಮತ್ತು ಟೀಕೆಗೊಳಗಾಗಿತ್ತು.

ಕಳೆದ ವರ್ಷ ಬಿಎಸ್ವೈ ಬಹುಮತ ಸಾಬೀತಿಗೆ ಮುನ್ನ, ಕಾಂಗ್ರೆಸ್ ತಮ್ಮ ಶಾಸಕರನ್ನು ಈಗಲ್ಟನ್ ರೆಸಾರ್ಟಿನಲ್ಲಿ ಇರಿಸಿತ್ತು, ಜೊತೆಗೆ ಭಾರೀ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಬಿಎಸ್ವೈ ಅಧಿಕಾರ ಸ್ವೀಕರಿಸಿದ ಕೂಡಲೇ, ರೆಸಾರ್ಟಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿದ್ದರು.
ಇದಲ್ಲದೇ, ದಕ್ಷ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಅಣ್ಣಾಮಲೈ ಅವರು ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಚಿಕ್ಕಮಗಳೂರಿನಿಂದ ರಾಮನಗರಕ್ಕೆ ಯಡಿಯೂರಪ್ಪ ವರ್ಗಾವಣೆ ಮಾಡಿದ್ದರು.
ಬೀದರ್ ಜಿಲ್ಲೆಯ ಎಸ್ಪಿಯಾಗಿದ್ದ ಡಿ ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಜೂತೆಗೆ, ಬೆಂಗಳೂರು ಸಿಟಿ ಎಸಿಬಿ ಮುಖ್ಯಸ್ಥರಾಗಿದ್ದ ಎಸ್ ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ ಡಿಸಿಪಿಯಾಗಿ ಟ್ರಾನ್ಸ್ ಫರ್ ಮಾಡಲಾಗಿತ್ತು.
ರೈಲ್ವೆ ಎಡಿಜಿಪಿಯಾಗಿದ್ದ ಅಮರ್ ಪಾಂಡೆಯವರನ್ನು ಗುಪ್ತಚರದಳದ ಎಡಿಜಿಪಿ, ಕೆಎಸ್ಆರ್ಪಿ ಡಿಐಜಿಯಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಗುಪ್ತಚರದಳದ ಡಿಐಜಿಯನ್ನಾಗಿ ಯಡಿಯೂರಪ್ಪ ನೇಮಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications