ನಿವೃತ್ತ ಸಿಎಸ್ ತಾಯಿ ಹೆಸರಲ್ಲಿ ಭೂ ಕಬಳಿಕೆ: ಸರ್ಕಾರಕ್ಕೆ 1 ಲಕ್ಷ ದಂಡ
ಬೆಂಗಳೂರು, ಜೂ.14: ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ತಾಯಿ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಒಂದು ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು ಒಂದು ವಾರದಲ್ಲಿ ದಂಡ ಮೊತ್ತವನ್ನು ಠೇವಣಿ ಇಡಬೇಕು. ಆ ಹಣವನ್ನು ಆರೋಪಿ ವಿರುದ್ಧ ಪ್ರಾಸಿಕ್ಯೂಷನ್ಗಾಗಿ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ಕೇಂದ್ರ ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ರವಾನಿಸದ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಒಂದು ವೇಳೆ ದಂಡ ಮೊತ್ತವನ್ನು ಪಾವತಿಸದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.
ಆರೋಪಿಯಾಗಿರುವ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್ಗಾಗಿ ಪೂರ್ವಾನುಮತಿ ಪಡೆಯಲು ವಿಳಂಬ ಮಾಡಿದ್ದಕ್ಕಾಗಿ ದಂಡದ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧದ ಭ್ರಷ್ಟಾಚಾರ ತನಿಖಾ ದಳ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಆರೋಪಿ, ಬೆಂಗಳೂರಿನ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಡಿ.ಬಿ. ಗಂಗಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಯಪೀಠ ಈ ಆದೇಶ ಹೊರಡಿಸಿದೆ.
ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪ್ರಕರಣದ ಎಂಟನೇ ಆರೋಪಿಯಾದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್ಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ತರಾಟೆಗೆ ತೆಗೆದುಕೊಂಡು ದಂಡ ವಿಧಿಸಿತು.
ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಕಾಲ ಕಾಲಕ್ಕೆ ಎಸಿಬಿಯಿಂದ ತನಿಖಾ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತ್ತು. ಜತಗೆ, ಪ್ರಕರಣದಲ್ಲಿ ಆರೋಪಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ಪಡೆಯುವ ವಿಚಾರವನ್ನು ಮೇಲ್ವಿಚಾರಣೆ ನಡೆಸುತ್ತಿತ್ತು.
ಸರ್ಕಾರಕ್ಕೆ ಚಾಟಿ: ಅರ್ಜಿವಿಚಾರಣೆ ವೇಳೆ, ಈ ವಿಚಾರದಲ್ಲಿ ಯಾವುದೇ ಪ್ರಗತಿ ಆಗದಿರುವುದನ್ನು ಗಮನಿಸಿದ ನ್ಯಾಯಪೀಠ, ಸೂಕ್ತ ಕಾಲಾವಕಾಶ ಕಲ್ಪಿಸಿದ್ದರೂ ಎಂಟನೇ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ಪಡೆಯಲು ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಇದು ಜಡತ್ವದ ನಡೆಯಾಗಿದೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸರ್ಕಾರದ 66 ಎಕರೆಯನ್ನು ಕಬಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ 2018ರಲ್ಲಿ ದೂರು ದಾಖಲಾಗಿದ್ದರೂ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಆಸ್ತಿಯನ್ನು ಸಂರಕ್ಷಿಸಲು ಕ್ರಮ ಕೈಗೊಂಡಿಲ್ಲ. ಈ ನಡೆ ಸರಿಯಲ್ಲ ಎಂದು ಕಟುವಾಗಿ ಹೇಳಿತು.
Recommended Video
ಪ್ರಕರಣದ ಹಿನ್ನೆಲೆ: ಆನೇಕಲ್ ತಾಲೂಕಿನ ರಾಮನಾಯಕನಹಳ್ಳಿ ಗ್ರಾಮದ ಸರ್ವೇ 96ರ 66 ಸರ್ಕಾರಿ ಜಮೀನನ್ನು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಅವರ ತಾಯಿ ಒತ್ತುವರಿ ಮಾಡಿದ್ದರು. ಅರವಿಂದ ಜಾದವ್ ಅವರು ಕೆಲ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಆ ಸರ್ಕಾರಿ ಜಮೀನಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ತಮ್ಮ ತಾಯಿ ಹೆಸರು ನಮೂದಿಸಿದ್ದಾರೆ ಎಂದು ಆರೋಪಿಸಿ 2018ರ ಆ.23ರಂದು ಎಸ್.ಭಾಸ್ಕರನ್ ಎಂಬಾತ ಎಸಿಬಿಗೆ ದೂರು ನೀಡಿದ್ದರು. ತನಿಖೆಯಲ್ಲಿ ಅರ್ಜಿದಾರ ಡಿ.ಬಿ.ಗಂಗಯ್ಯ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಎಸಿಬಿ 2018ರ ಸೆ.15ರಂದು ಎಫ್ಐಆರ್ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಲು ಕೋರಿ ಡಿ.ಬಿ. ಗಂಗಯ್ಯ ಹೈಕೋರ್ಟ್ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.