ಭೂ ಹಗರಣ ಪ್ರಕರಣ, ಜನಪ್ರಿಯ ನಟನಿಗೆ ಬಂಧನದಿಂದ ರಿಲೀಫ್
ತಿರುವನಂತಪುರಂ, ಏಪ್ರಿಲ್ 24: ಭೂ ಹಗರಣ ಪ್ರಕರಣವೊಂದರಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಜನಪ್ರಿಯ ನಟ ಬಾಬುರಾಜ್ಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬುರಾಜ್ ಬಂಧನಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೋಥಮಂಗಲಂ ಮೂಲದ ಎಸ್ ಅರುಣ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಟ ಬಾಬುರಾಜ್ ಬಂಧನಕ್ಕೆ ಮುಂದಾಗಿದ್ದರು. ಆದರೆ, ಬಾಬುರಾಜ್ ಪರ ವಕೀಲರು ಬಂಧನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು.
ಬಾಬುರಾಜ್ ಅವರು ಸುಮಾರು 40 ಲಕ್ಷ ರು ಗಳಿಗೆ ಮುನ್ನಾರ್ ಬಳಿಯ ಕಂಬಿಲಿನ್ ರೆಸಾರ್ಟ್ ಭೋಗ್ಯಕ್ಕೆ ಬಿಟ್ಟಿದ್ದರು. ಆದರೆ, ರೆಸಾರ್ಟ್ ಜಾಗದ ಮೇಲಿದ್ದ ಕೇಸ್ ಹಾಗೂ ಸಿವಿಎಲ್ ಕಟ್ಲೆಗಳ ವಿವರಗಳನ್ನು ಮುಚ್ಚಿಟ್ಟರು ಎಂದು ಅರುಣ್ ಕುಮಾರ್ ಆರೋಪಿಸಿದ್ದಾರೆ.

ಅಸಲಿಗೆ ರೆಸಾರ್ಟ್ ಇರುವ ಜಾಗವನ್ನು ಲೀಸ್ ಮೇಲೆ ಕೊಡಲು ಪಲ್ಲಿವಾಸಲ್ ಪಂಚಾಯಿತಿಯ ಅನುಮತಿ ಬೇಕು. ಆದರೆ, ಪಂಚಾಯಿತಿ ಇದಕ್ಕೆ ನಿರ್ಬಂಧ ವಿಧಿಸಿದೆ. ಆದರೆ, ಈ ವಿಷಯ ಮುಚ್ಚಿಟ್ಟು 11 ತಿಂಗಳ ಅವಧಿಗೆ ಎಂದು ಫೆಬ್ರವರಿ 2020ರಲ್ಲಿ ಲೀಸ್ ಮೇಲೆ ಕೊಟ್ಟಿದ್ದರು.
1993ರಲ್ಲಿ ವೃಂದಾವನ್ ಪಟ್ಟಯಾಮ್ಸ್ ಕೈವಶವಾಗಿದ್ದ ಈ ಜಾಗ ಹಲವು ಕೇಸ್ ಎದುರಿಸಿದೆ. ಇಡುಕ್ಕಿ ಮೂಲದ ಲಾಡ್ಜ್ ವೊಂದರ ಹೆಸರಿನಲ್ಲಿ ಬೋಗಸ್ ಟೈಟಲ್ ಡೀಡ್ ಮಾಡಿ, ನಕಲಿ ದಾಖಲೆ ನೀಡೀ ಕಂದಾಯ ಇಲಾಖೆಗೂ ವಂಚನೆ ಮಾಡಲಾಗಿದೆ.
ಇಷ್ಟಾದರೂ ಲೀಸ್ ಒಪ್ಪಂದವನ್ನು ಮುರಿದುಕೊಳ್ಳಲು ಬಾಬುರಾಜ್ ಸಿದ್ಧರಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಕಳೆದ 11 ತಿಂಗಳುಗಳಿಂದ ರೆಸಾರ್ಟ್ ಕಡೆಯಿಂದ ಯಾವುದೇ ಮೊತ್ತ ಕೈ ಸೇರಿಲ್ಲ, ನನಗೆ ವಂಚನೆಯಾಗಿದೆ ಎಂದು ನಟ ಬಾಬುರಾಜ್ ಪ್ರತಿವಾದ ಮಾಡಿದ್ದಾರೆ. ಮಾನಹಾನಿ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಬಾಬುರಾಜ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications