ಸರ್ಕಾರ ಬೀಳಿಸಲು ಕುಮಾರಸ್ವಾಮಿ ಮಾತ್ರವಲ್ಲ ವಿಜಯೇಂದ್ರ ಅವರು ಹುನ್ನಾರ: ರಾಮಲಿಂಗಾರೆಡ್ಡಿ ಬಿಚ್ಚಿಟ್ಟ ಸತ್ಯವೇನು?
ಬೆಂಗಳೂರು, ಆಗಸ್ಟ್ 25: ಕುಮಾರಸ್ವಾಮಿ ಒಬ್ಬರೇ ಅಲ್ಲ ಬಿಜೆಪಿಯ ವಿಜಯೇಂದ್ರ ಅವರು ಆರು ತಿಂಗಳಲ್ಲಿ ಸರ್ಕಾರವನ್ನು ಬೀಳಿಸಬೇಕು ಎಂದು ತೊಂದರೆ ಕೊಟ್ಟರು, ಇದು ಆಗದ ಕೆಲಸ. ಅವರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಪ್ರಬಲವಾಗಿದ್ದಾರೆ. ಮತ್ತೆ ನಾಲ್ಕು ವರ್ಷ ಆದಮೇಲೆ ಚುನಾವಣೆ ಬರುತ್ತದೆ. ಆಗಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿಯ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶುಕ್ರವಾರ ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿ ಮಾಡಿ ಮುಡಾ, ವಾಲ್ಮೀಕಿ ಆರೋಪಗಳ ನಂತರ ಒಂದು ತಿಂಗಳಲ್ಲಿ ಯಾವ, ಯಾವ ಬೆಳವಣಿಗೆ ಆಗಿದೆ ಎಂದು ಮಾಹಿತಿ ನೀಡಿರಬಹುದು. ಬಿಜೆಪಿ, ಜೆಡಿಎಸ್ ಷಡ್ಯಂತ್ರದ ಬಗ್ಗೆ, ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆಯಾಗಿರುತ್ತದೆ ಎಂದು ತಿಳಿಸಿದರು.
ರಾಷ್ಟ್ರಪತಿಗಳನ್ನು ಭೇಟಿ ಮಾಡುವ ವಿಚಾರ ಮಾತನಾಡಿ, ರಾಜ್ಯಪಾಲರ ನಡೆಯ ಬಗ್ಗೆ ರಾಷ್ಟ್ರಪತಿಗಳ ಗಮನ ಸೆಳೆಯಬೇಕು ಎಂದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಯಿತು. ನಮ್ಮ ಒಂದಷ್ಟು ಶಾಸಕರು ಈ ಬಗ್ಗೆ ಅಭಿಪ್ರಾಯ ತಿಳಿಸಿದರು. ಇದನ್ನು ನಾವು ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದರು.

ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದೇ ರೀತಿಯ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯಪಾಲರ ಸ್ಥಾನಕ್ಕೆ ಮತ್ತು ಗೌರವಕ್ಕೆ ಸ್ಥಾನಕ್ಕೆ ಚ್ಯುತಿ ಆಗುವಂತಹ ಕೆಲಸ ಮಾಡಲಾಗುತ್ತಿದೆ. ರಾಜ್ಯಪಾಲರು ಒಳ್ಳೆಯವರಾದರೂ ಅವರಿಂದ ಈ ರೀತಿಯ ಕೆಲಸ ಮಾಡಿಸಲಾಗುತ್ತಿದೆ. ಅವರಿಗೆ ಎಷ್ಟೇ ಒತ್ತಡ ಇದ್ದರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು.
ಕರ್ನಾಟಕದ ರಾಜ್ಯಪಾಲರು ಈ ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಅವರು ಯಾವ ಸಮುದಾಯಕ್ಕೆ ಸೇರಿದವರು ಗೊತ್ತಿರಲಿಲ್ಲ. ಬಿಜೆಪಿ ವಿವಕ್ಕೆ ಜಾತಿ ಬಣ್ಣ ಬಳಿ ತೊಡಗಿದೆ. ಅವರನ್ನು ಕೇಂದ್ರ ಸಂಪುಟದಲ್ಲಿ ಕೂರಿಸಿಕೊಳ್ಳಬಹುದಿತ್ತು. ಏಕೆ ರಾಜ್ಯಪಾಲರನ್ನ ಮಾಡಿದರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗದ ನಾಯಕ ಎಂದು ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ದಲಿತ ರಾಜ್ಯಪಾಲ ಎಂದು ರಾಜಕಾರಣ ಮಾಡುತ್ತಿದೆ ಎಂದು ಪ್ರಶ್ನಿಸಿದಾಗ, ನಮಗೆ ರಾಜ್ಯಪಾಲರು ಯಾವ ಸಮುದಾಯಕ್ಕೆ ಸೇರಿದವರೆಂದು ಗೊತ್ತೇ ಇರಲಿಲ್ಲ. ಬಿಜೆಪಿಯವರು ಜಾತಿ ಬಣ್ಣ ಹಚ್ಚಿದರು. ನಾವುಗಳು ಯಾರು ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಕೇವಲ ಸಂವಿಧಾನದ ಪ್ರಕಾರ ನಡೆದುಕೊಳ್ಳಲಿ ಎಂದು ಹೇಳಿದ್ದೇವೆ ಎಂದರು.
ಸಿಎಲ್ ಪಿ ಸಭೆಯಲ್ಲಿ ಬಿಜೆಪಿ ನಾಯಕರ ಹಗರಣಗಳ ಮೇಲೂ ತನಿಖೆ ಆಗಬೇಕು ಎನ್ನುವ ಶಾಸಕರ ಅಭಿಪ್ರಾಯದ ಬಗ್ಗೆ ಮಾತನಾಡಿ, "ಹೌದು, ಬಿಜೆಪಿ ನಾಯಕರ ಹಗರಣಗಳ ಬಗ್ಗೆ ತನಿಖೆ ಆಗಲೇಬೇಕು. ಈಗಾಗಲೇ ಎಲ್ಲಾ ಪ್ರಕರಣಗಳಲ್ಲಿ ತನಿಖೆಗಳು ನಡೆಯುತ್ತಿವೆ. ಯಾವುದನ್ನೂ ಬಿಟ್ಟಿಲ್ಲ. ಕೆಲವು ಪ್ರಕರಣಗಳಲ್ಲಿ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಿಂದ ಅವರುಗಳು ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆಯಾಜ್ಞೆ ತೆರವಾದರೆ ಇನ್ನಷ್ಟು ಪ್ರಕರಣಗಳು ಹೊರಗೆ ಬರುತ್ತವೆ. ಬಿಜೆಪಿಯವರು ಅವರುಗಳನ್ನು ಸತ್ಯ ಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಾರಲ್ಲವೇ. ಇದೆಲ್ಲಾ ಜನರ ಮುಂದೆ ಬಯಲಾಗುತ್ತದೆ" ಎಂದರು.
ಬಿಜೆಪಿಯವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಹೆದರಿದೆಯೇ ಎಂದು ಕೇಳಿದಾಗ "ಕ್ರಮ ತೆಗೆದುಕೊಳ್ಳುವುದು ನಿಧಾನವಾಗಿದೆ. ಆದ ಕಾರಣ ಈ ಎಲ್ಲಾ ಘಟನೆಗಳು ನಡೆಯುತ್ತಿವೆ. ಹಗರಣ ಮಾಡಿದ ಬಿಜೆಪಿಯವರು ಏನೂ ಮಾಡದ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಈಗ ಬಿಜೆಪಿಯವರು ಸತ್ಯ ಹರಿಶ್ಚಂದ್ರ ರಂತೆ ನಟನೆ ಮಾಡುತ್ತಿದ್ದಾರೆ. ನಮಗೆ ಯಾರ ಮೇಲೂ ಮೃದು ಧೋರಣೆ ಇಲ್ಲ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ದನ್ ರೆಡ್ಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಲಾಗಿದೆ" ಎಂದರು.
ನಾವು ಭ್ರಷ್ಟಾಚಾರ ವಿರೋಧಿಗಳು ಎನ್ನುವ ಕೇಂದ್ರ ನಾಯಕರು ಕುಮಾರಸ್ವಾಮಿ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ ಎಂದು ಕೇಳಿದಾಗ "ಕುಮಾರಸ್ವಾಮಿಯವರು ಈಗ ಬಿಜೆಪಿ ಜೊತೆ ಇದ್ದಾರಲ್ಲ, ಆ ಕಾರಣಕ್ಕೆ. ಬಿಜೆಪಿ ಜೊತೆ ಇದ್ದರೆ. ಐಟಿ, ಈಡಿ, ಸಿಬಿಐ ಯಾರು ಮುಟ್ಟುವುದೇ ಇಲ್ಲ. ಅಸ್ಸಾಂ ಬಿಜೆಪಿ ಮುಖ್ಯಮಂತ್ರಿಯ ಮೇಲೂ ಆಪಾದನೆ ಇದ್ದ ಕಾರಣಕ್ಕೆ ಅವರು ಬಿಜೆಪಿ ಸೇರಿಕೊಂಡರು. ಮಹಾರಾಷ್ಟ್ರದ ಎನ್ಸಿಪಿಯ ಅಜಿತ್ ಪವಾರ್ ಮೇಲೆ ಆರೋಪ ಇತ್ತು ಅವರೂ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ಪಶ್ಚಿಮ ಬಂಗಾಳದ ಸುವಿಂದೂ ಮುಖರ್ಜಿ ಅವರ ಮೇಲು ಆರೋಪವಿತ್ತು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಬೇರೆ ಪಕ್ಷದಲ್ಲಿ ಯಾರ ಮೇಲೆ ಆರೋಪವಿದ್ದರೂ ಅವರನ್ನು ವಾಷಿಂಗ್ ಪೌಡರ್ ನಿರ್ಮಾ ಹಾಕಿ ತೊಳೆದು ಸಚ್ಚಾರಿತ್ರರನ್ನಾಗಿ ಮಾಡಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಈಗ ಅವರುಗಳ ಮೇಲೆ ಯಾವುದೇ ಆರೋಪವಿಲ್ಲ" ಎಂದರು.
ಎಂ.ಬಿ.ಪಾಟೀಲ್ ಅವರ ಮೇಲು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಮುಂದಾಗಿದ್ದಾರೆ. ಎಲ್ಲ ಸಚಿವರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆಯೇ ಎಂದು ಕೇಳಿದಾಗ "ಇಂತಹ ನಡೆಗಳು ಬಿಜೆಪಿ ಅವರಿಗೆ ತಿರುಗುಬಾಣ ಆಗಬಹುದು. ಬೇರೆ ಒಂದಷ್ಟು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ ಅಲ್ಲಿಯೂ ಸಹ ಬೇರೆ ಪಕ್ಷದವರು ಇದೇ ರೀತಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ಅರ್ಜಿ ಸಲ್ಲಿಸಬಹುದು. ನಾಳೆ ಪ್ರಧಾನಿ, ಕೇಂದ್ರ ಸಚಿವರ ಮೇಲೆ ಯಾರಾದರೂ ಅನುಮತಿ ಕೇಳಬಹುದು. ಬಿಜೆಪಿಯವರು ಅಧಿಕಾರ ಇದೆ ಎಂದು ದೌಲತ್ ತೋರಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಲ್ಪದರಲ್ಲಿ ಪರಾದರೂ ಬುದ್ಧಿ ಬಂದಿಲ್ಲ. ಮುಂದೆ ಏನಾಗಲಿದೆ ಎಂದು ಕಾದು ನೋಡೋಣ" ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಮರಳಿ ತರುವ ಪ್ರಯತ್ನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರ ರಾಜಕಾರಣದಲ್ಲೇ ಇರುತ್ತಾರೆ. ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಜವಾಬ್ದಾರಿ ಅವರ ಮೇಲಿರುತ್ತದೆ. ರಾಜಕಾರಣಕ್ಕೆ ಏಕೆ ಬರುತ್ತಾರೆ ಎಂದು ಹೇಳಿದರು.












Click it and Unblock the Notifications