KSRTC: ಜನಹಿತವಲ್ಲದ ವ್ಯವಸ್ಥೆಯ ವಿರುದ್ಧ, ಜನರೇ ಪ್ರಶ್ನಿಸಲು ಪರಸ್ಪರ ಕೈ ಜೋಡಿಸಿದರೆ ಬದಲಾವಣೆ: ಐವರ ಡಿಮ್ಯಾಂಡ್‌ಗೆ ಬಸ್

KSRTC: ಜನಹಿತವಲ್ಲದ ವ್ಯವಸ್ಥೆಯ ವಿರುದ್ಧ, ಜನರೇ ಪ್ರಶ್ನಿಸಲು ಪರಸ್ಪರ ಕೈ ಜೋಡಿಸಿ ಮುಂದಾದರೆ ಸಾಧ್ಯವಾದ ಮಟ್ಟಿಗೆ ಬದಲಾವಣೆಗಳಾಗುತ್ತವೆ - ಕೃಷ್ಣ ಕೆ.ಎನ್ ಅವರ ಬರಹ ಇಲ್ಲಿದೆ.

ಜನಹಿತವಲ್ಲದ ವ್ಯವಸ್ಥೆಯ ವಿರುದ್ಧ, ಜನರೇ ಪ್ರಶ್ನಿಸಲು ಪರಸ್ಪರ ಕೈ ಜೋಡಿಸಿ ಮುಂದಾದರೆ ಸಾಧ್ಯವಾದ ಮಟ್ಟಿಗೆ ಬದಲಾವಣೆಗಳಾಗುತ್ತವೆ. ಇದಕ್ಕೆ ಎರುಡು ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ.

ಒಂದು: ಕೊನೆಗೆ ಉಳಿದಿದ್ದು ನಾವಿಷ್ಟೆ ಜನ

ಇತ್ತೀಚಿಗೆ ಕುಟುಂಬದೊಂದಿಗೆ ಬೆಳಗ್ಗೆ ಬೆಳಗ್ಗೆ ಊರಿಗೆ ಹೋಗಿ, ಅದೇ ದಿನ ಮಧ್ಯಾಹ್ನ ಹಿಂತಿರುಗಿ ಬೆಂಗಳೂರಿಗೆ ಬರಲೇಬೇಕಿತ್ತು. ಹಾಗಾಗಿ ಸಿರಾ KSRTC ಬಸ್ ಸ್ಟಾಂಡ್‌ಗೆ ತಲುಪಿ, ಅಲ್ಲಿಂದ ಬೆಂಗಳೂರಿಗೆ ksrtc ಬಸ್‌ನಲ್ಲಿ ಹೊಗುವ ಯೋಜನೆಯಲ್ಲಿದ್ದೆವು. ಅವತ್ತು ಭಾನುವಾರ ಬೇರೆ, ಜನವೋ ಜನ. ಖಾಲಿ ಸೀಟಿನ ಬಸ್ಸುಗಳು ಮಾತ್ರ ಒಂದೂ ಇಲ್ಲ. ಬರುವ ವಾಯುವ್ಯ ಸಾರಿಗೆ ಬಸ್ ಗಳೆಲ್ಲಾ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ... ಕಡೆಯಿಂದ ಜನರಿಂದ ತುಂಬಿ ತುಂಬಿಯೇ ಬರುತ್ತಿದ್ದವು. ಬಸ್ಸಿಂದ ಇಳಿಯುವವರು ಮಾತ್ರ ಒಬ್ಬರೂ ಇಲ್ಲ, ಒಂದಿಬ್ಬರು ಇಳಿದರೂ ಸೀಟುಗಳೇನು ಖಾಲಿಯಾಗುತ್ತಿರಲಿಲ್ಲ.

ಅಂತದರಲ್ಲಿ ನಿಂತಾದರೂ ಸರಿಯೇ ಬೆಂಗಳೂರು ತಲುಪಲು ಬಸ್ಸು ಹತ್ತಿದರೆ ಸಾಕು ಎಂದು ಮಕ್ಕಳು, ಮಹಿಳೆಯರು, ವಯಸ್ಸಾದ ಜನ ಮುಗೀಬೀಳುತ್ತಿದ್ದರು. ಬಸ್‌ ಸ್ಟ್ಯಾಡ್‌ಗೆ ಬಂದ ಸ್ವಲ್ಪ ಹೊತ್ತಿಗೆ ಇಂತಹ ಚಿತ್ರಣ ಕಂಡು, ಈ ಪರಿ ತುಂಬಿ ಬರುತ್ತಿರುವ ಬಸ್‌ಗಳಲ್ಲಿ ನಾವು ಬೆಂಗಳೂರಿಗೆ ಹೋಗೋದು ಸಾಧ್ಯವಿಲ್ಲ ಎಂದೆನಿಸಿತು.

KSRTC

ಅಲ್ಲೇ ಇದ್ದ ಟಿಸಿಯವರನ್ನ ವಿಚಾರಿಸಲಾಗಿ, ಅವರು 'ಡಿಪೋ ಬಸ್ಸುಗಳು 3:30ಕ್ಕೆ ಲಾಸ್ಟ್, ಇನ್ನು ಯಾವು ಬಸ್ಸು ಇಲ್ಲ' ಅಂತ ಹೇಳಿದ್ರು. ಸಮಯ ಆಗಲೆ ನಾಲ್ಕನ್ನು ಮೀರಿಯಾಗಿತ್ತು. ಜನರು, ಬಂದ ಬಂದ ಬಸ್ಸುಗಳಿಗೆಲ್ಲ ಸೀಟಿಗಾಗಿ ಓಡುತ್ತಿದ್ದರೆ ಹೊರತು, ಯಾರೂ ಕೂಡ ಅಲ್ಲಿನ TC, ಮ್ಯಾನೇಜೆರ್‌ಗಳನ್ನಾಗಲಿ ಕೇಳುತ್ತಿರಲಿಲ್ಲ. ಕೇಳಿದ್ದರು ಟಿಸಿ ಅಥವಾ ಮ್ಯಾನೇಜರ್ ಹೇಳಿದ ಮಾತಿಗೆ ತಲೆ ಗುಣುಕಾಕಿಯೋ ಇಲ್ಲ ತಮ್ಮಷ್ಟಕ್ಕೆ ತಾವು ಗೊಣಗಿಕೊಂಡೊ ಬಸ್ಸಿಗಾಗಿ ಕಾಯೋದು, ಇಲ್ಲಂದ್ರೆ ಸೀಟ್ ಖಾಲಿಯೇ ಇಲ್ಲದ ಬಸ್ಗಳು ಬಂದ್ರೆ ಹತ್ತೋದು ಮಾಡುತ್ತಿದ್ದರು. ಇಷ್ಟೊಂದು ಜನ ಇಲ್ಲಿದ್ದೇವೆ ಡಿಪೋದಿಂದಲೇ ಖಾಲಿ ಬಸ್ ಬಿಡಿ ಎಂದು ಯಾರೂ ಕೂಡ ಯಾಕೆ ಕೇಳುತ್ತಿಲ್ಲ, ಯಾಕೆ ಜನರು ಗಟ್ಟಿಯಾಗಿ ಕೇಳದೆ ಈ ರೀತಿ ಒಗ್ಗಿದ್ದಾರೆ. ಎಂದು ನಾನು ಜನರನ್ನೇ ದೂರುತ್ತ ನಿಂತಿದ್ದೆ.

ಆಗತಾನೆ ಬಂದಿದ್ದ ಪ್ರಯಾಣಿಕ ಹುಡುಗನೊಬ್ಬ ನನ್ನ ಬಳಿಯೇ ಬಂದು, 'ಬೆಂಗಳೂರಿಗೆ ಇಲ್ಲಿಂದ ಯಾವು ಬಸ್ಸು ಇಲ್ವಾ ಸರ್' ಅಂತ ಕೇಳಿದ. ಬಸ್ಸು ಈಗ ಇಲ್ಲ ಅಂತ ಹೇಳ್ತಿದ್ದಾರೆ, ಯಾಕೆ ಬಸ್ ಬಿಡ್ತಿಲ್ಲ ಕೇಳೋಣ ಬನ್ನಿ. ಒಂದಷ್ಟು ಜನರನ್ನ ಕರೀರಿ ಎಂದು, ಅಲ್ಲಿದ್ದವರನ್ನೆಲ್ಲ 'ಎಲ್ಲರೂ ಬನ್ನಿ ಕೇಳೋಣ' ಅಂತ ಏರು ದನಿಯಲ್ಲಿ ಒಮ್ಮೆ ನಾನೇ ಕರೆದೆ. ಜನರು ಮಖಮಖ ನೋಡ್ಕೊಂಡು ಒಂದ್ ಹದಿನೈದು ಜನ ಬಂದು ಸೇರಿದ್ರು.

ನಂತರ ಎಲ್ಲರೂ ಒಗ್ಗೂಡಿ TC ಯವರ ಬಳಿ ಹೋಗಿ ಕೇಳಿದ್ವಿ. ಅವರು, ಅದೇ ಮಾತನ್ನ ಮತ್ತೊಮ್ಮೆ, 'ಮೂರುವರೆಗೆ ಡಿಪೋ ಬಸ್ಸುಗಳು ಲಾಸ್ಟ್' ಅಂತ ಹೇಳಿದ್ರು. 'ಯಾಕೆ ಲಾಸ್ಟ್, ಇಷ್ಟೊಂದ್ ಜನ ಇದಾರೆ ಇಲ್ಲಿಂದ ಒಂದು ಬಸ್ ಬಿಡೋಕಾಗಲ್ವಾ ಕರೀರಿ ನಿಮ್ಮ ಮೇಲಧಿಕಾರಿ ಯಾರಿದ್ದಾರೆ' ಅಂತ ಕೇಳಿದ್ವಿ. ಆಗ ಟಿಸಿಯವರು ತಮ್ಮ ರೂಡಿಗತವಾಗಿದ್ದ 'ಬಸ್ ಇಲ್ಲ' ಎಂಬುದರ ಬದಲಿಗೆ ತಮ್ಮ ಮೇಲಧಿಕಾರಿಯವರನ್ನೂ ಕಾಲ್ ಮಾಡಿ ಕರೆದ್ರು. ಜನರೆಲ್ಲಾ ಒಂದು ಹಂತಕ್ಕೆ ಜೋರು ಮಾತಲ್ಲೇ ಇಲ್ಲಿಂದ ಒಂದು ಬಸ್ ಬಿಡಿ ಅಂತ ಧ್ವನಿ ಎತ್ತರಿಸಿಯೇ ಕೇಳಿದರು. ಬೇರೆ ಸಬೂಬು ಹೇಳಲು ಅವರಿಗೆ ಆಯ್ಕೆಗಳೇ ಇರಲಿಲ್ಲ. ಸರಿ ಆಯ್ತು ಬಸ್ ಬರುತ್ತೆ, ಸ್ವಲ್ಪ ಹೊತ್ತು ತಡಿರಿ. ಅಂತೇಳಿ ಜನರ ಒತ್ತಡ ಎದುರಿಸಲಾಗದೆ ಆ ಮೇಲಾಧಿಕಾರಿ ಮ್ಯಾನೇಜರ್ ಅಲ್ಲಿಂದ ಹೊರಟರು.

ಜನ ಮಾತ್ರ ಖಾಲಿ ಬಸ್ ಇನ್ನೇನು ಬರುತ್ತೆ ಅಂತ ಕಾಯ್ತಿದ್ರು, ಆದ್ರೆ ಮತ್ತೆ ಅರ್ಧ ಗಂಟೆಯಾದ್ರೂ ಡಿಪೋದಿಂದ ಖಾಲಿ ಬಸ್ಸು ಬರಲಿಲ್ಲ. ಅದೇ ತುಂಬಿದ ವಾಯುವ್ಯ ಸಾರಿಗೆಗಳೇ ಬರ್ತಿದ್ವು. ದಾವಂತದಲ್ಲಿದ್ದವರು, ಮಾಮೂಲಿನವರು ಮತ್ತದೇ ಪರದಾಟದಿಂದ, ಬಸ್ ಹತ್ತಿ ಎಷ್ಟೋ ಜನ ಹೋಗಿದ್ರು. ಅದ್ರಲ್ಲಿ ನಮ್ಮ ಜತೆಗೆ ಖಾಲಿ ಬಸ್ ಬಿಡಿ ಅಂತ ಕೇಳಲು ಬಂದಿದ್ದ ಹದಿನೈದು ಜನರಲ್ಲಿ ಸುಮಾರು ಜನ ಖಾಲಿಯಾಗಿದ್ರು.

ಹೊಸ ಪ್ರಯಾಣಿಕರು ಬಂದು ಸೇರ್ತಿದ್ರು. ಆ ಹೊಸಬರಿಗೆ ಮತ್ತೆ ಮತ್ತೆ ಹೇಳುವ ಕೆಲಸಕ್ಕೂ ನಾವು ಮುಂದಾಗಲಿಲ್ಲ. ಈ ಡಿಪೋದಿಂದ ಖಾಲಿ ಬಸ್ ತರಿಸಿಯೇ ಸಿದ್ಧ ಎಂಬಂತೆ ನಿಂತವರು ನಾವು ಐದು ಜನ (ನಾನು, Pallavi Krishnappa, ಮುಸ್ಲಿಂ ತಾಯಿ-ಮಗಳು ಮತ್ತು ಒಬ್ಬ ಹುಡುಗ) ಮಾತ್ರವೇ ಆಗಿದ್ದೆವು. ನಾವೆಲ್ಲರು, ಮ್ಯಾನೇಜರ್ ಮೊಬೈಲ್ ನಂಬರ್ ಪಡೆದು ಒಬ್ಬರಾದ ಮೇಲೆ ಒಬ್ಬರು ಕಾಲ್ ಮಾಡಿ 'ಇನ್ನು ಯಾಕೆ ಬಸ್ ಬಂದಿಲ್ಲ, ಜನರಿಗೆ ಈ ರೀತಿ ತೊಂದರೆ ಕೊಡೊ ನಿಮ್ಮ ವರ್ತನೆಯನ್ನ MD ವರೆಗೂ ತಲುಪಿಸುತ್ತೇವೆ. ಇದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತೆ' ಎನ್ನುವಂತ ಕೋಟ್ ಅನ್ನು ಪದೇ ಪದೇ ನೆನಪಿಸಿಕೊಂಡುವಂತೆ ಕಾಲ್ ಮಾಡಿ ಹೇಳುತ್ತಿದ್ದೆವು. ಆತ ಕೂಡ ಇಲ್ಲಿಂದ ಬೆಂಗಳೂರಿಗೆ ಖಾಲಿ ಬಸ್ಸನ್ನು ಬಿಡುವ ಪ್ರಯತ್ನಕ್ಕೆ ನಿಜಕ್ಕೂ ಮುಂದಾಗಿದ್ದರು.

ಅಂತೂ 5:30ರ ಅಷ್ಟೊತ್ತಿಗೆ ಬಸ್ ಬಂತು. ಆ ಬಸ್ಸು ಬರುವ ಹೊತ್ತಿಗೆ ಮತ್ತೊಂದಷ್ಟು ಜನ ಬಂದು ಸೇರಿದ್ದರು. ಒಟ್ಟಾರೆ ಬೆಂಗಳೂರಿಗೆ ಹೋಗಲು ಕಾಯುತ್ತಿದ್ದ ಅಷ್ಟೂ ಜನ ನಾ ಮೊದಲು ತಾ ಮೊದಲೆಂದು ಹತ್ತಿದವರು ತಮಗೂ ತಮ್ಮ ಕಡೆಯವರಿಗೂ ಸೀಟು ಗಳನ್ನು ಹಿಡಿದು ಕೂತಿರುತ್ತಾರೆ. ಬಸ್ಸು ಹತ್ತುವಾಗ ಜನರ ನೂಕು ನುಗ್ಗುಲಿನಲ್ಲಿ ನಾನು ಹಿಂದೆಯೇ ಉಳಿದುಬಿಟ್ಟೆ. ಮುಸ್ಲಿಂ ತಾಯಿ ಮಗಳು ಮೊದಲೇ ಹತ್ತಿ ಪ್ರತ್ಯೇಕ ಒಂದೊಂದು ಸೀಟು ಹಿಡಿದುಕೊಂಡಿದ್ದರು. ಆ ಹೆಣ್ಣುಮಗಳು ನನ್ನತ್ತ ಕೈ ಬೀಸಿ ನೀವು ಇಲ್ಲಿ ಬನ್ನಿ ಸೀಟು ಹಿಡಿದುಕೊಂದಿದ್ದೇನೆ ಎಂದು ನನ್ನತ್ತ ಕೈಬೀಸಿ ಕರೆಯುತ್ತಿದ್ದರು. ಪಲ್ಲವಿ ಕೂಡ ಮುಂಚೆಯೇ ಹತ್ತಿದ್ದರಿಂದ ನನಗೂ ಸೇರಿಸಿ ಸೀಟು ಹಿಡಿದುಕೊಂಡಿದ್ದರು. ಹಾಗಾಗಿ, ಸೀಟು ಈಗಾಗಲೇ ಹಿಡಿದುಕೊಳ್ಳಲಾಗಿದೆ.

ಪರವಾಗಿಲ್ಲ ಬಿಡಿ ಎಂದು ಆ ತಾಯಿ ಮಗಳಿಗೆ ನಗುಬೀರಿ ಧನ್ಯವಾದ ಹೇಳಿದೆ. ಅವರು ಸಿರಾದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಬಂದು ಮುಂದೆ ಹೋಗುವವರಿದ್ದರು. ಮತ್ತು ಅವರು ಖಾಲಿ ಬಸ್ ಬರದೆ ಬೆಂಗಳೂರಿಗೆ ಹೋಗೋದೇ ಇಲ್ಲ ಎಂದು ನಿರ್ಧರಿಸಿದವರು. ಹಾಗಾಗಿ, ಹೇಗೂ ಖಾಲಿ ಬಸ್ ಬರುವ ಹಾಗೆ ಆಯ್ತಲ್ಲ ಎಂಬ ಕೃತಜ್ಞತೆಯಿಂದ ಆ ತಾಯಿ ಮಗಳಿಬ್ಬರು ನನಗೊಂದು ಸೀಟನ್ನು ಹಿಡಿದಿಟ್ಟುಕೊಂಡಿದ್ದರು. ಇವರು ಕೂಡ ಎಲ್ಲರಂತೆ ಹೋಗಬಹುದಿತ್ತು, ಆದರೆ ಬಸ್ ಗಾಗಿ ಪರಸ್ಪರ ಕೈ ಜೋಡಿಸಿ ಕೊನೆವರೆಗು ನಿಂತರು.

ಎಲ್ಲ ಜನರು ಸೀಟ್ ಹಿಡಿದು ಕುಳಿತ ಮೇಲೆ, ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಡ್ರೈವರಾತ "ಈ ಬಸ್ ಜಾಲಹಳ್ಳಿ ಕ್ರಾಸ್ ಮಾತ್ರ ಹೋಗೋದು" ಅಂತಲೇ ಹಿಂದಿನಿಂದ ಟಿಕೆಟ್ ಕೊಡುತ್ತ ಬರ್ತಿದ್ದರು. ಈಗ ನನ್ನ ಸರದಿ, ಟಿಕೇಟ್ ತಗೋಳ್ಳೋದು ಬಂತು. ಇಲ್ಲಿ ಈತನೊಂದಿಗೆ ಇನ್ನೊಂದು ಸುತ್ತಿನ ಮಾತು-ಕತೆಗೆ ಮುಂದಾಗಬೇಕಾಯಿತು. ಯಾಕೆಂದರೆ, ಬಸ್ಸಲ್ಲಿದ್ದ ಅಷ್ಟೂ ಜನ ಜಾಲಹಳ್ಳಿ ಕ್ರಾಸ್ ಮಾತ್ರ ಅಲ್ಲ ಮುಂದಿನ ಹಲವು ನಿಲ್ದಾಣಗಳಿಂದ ಮೆಜೆಸ್ಟಿಕ್ ವರೆಗೂ ಹೋಗುವವರಿದ್ದರು.

ನಾನೂ ಕೂಡ ಮೆಜೆಸ್ಟಿಕ್ ಹೋಗಬೇಕಿತ್ತು. ಆದರೆ, ಡ್ರೈವರ್ ಅವರು ಮಾತ್ರ ಜಾಲಹಳ್ಳಿ ಕ್ರಾಸ್ ಮಾತ್ರ ಹೋಗೋದು ಎಂದು ನಿರ್ಧರಿಸಿದ್ದರು. ಪುನಃ ಆತನೊಂದಿಗೆ ವಾಗ್ವಾದ ಮಾಡಿ ಅದೇಗೆ ಮೆಜೆಸ್ಟಿಕ್ ಬರೋದಿಲ್ಲ ನೋಡೆಬಿಡ್ತೀವಿ' ಎಂದು ಜನರನ್ನ ಉದ್ದೇಶಿಸಿ "ಎಲ್ಲರೂ ಇದನ್ನ ಖಂಡಿಸಬೇಕು ಬಸ್‌ಗಳು ಜನರ ಅನುಕೂಲಕ್ಕೆ ಇರೋದು ಇವರಿಗೆ ಬೇಕಾದಂಗೆ ಇರೋದಲ್ಲ ಮತ್ತು ಇವರ ಲಾಭಕ್ಕಾಗಿ ಅಲ್ಲ".

ನಿಮ್ಮ ಮ್ಯಾನೇಜರ್ ರೊಂದಿಗೆ ಮಾತನಾಡುತ್ತೇನೆ" ಎಂದು ಹೇಳುತ್ತಾ, ಅವರಿಗೆ ಕಾಲ್ ಮಾಡಿ, ಡಿಪೋಯಿಂದ ಜಾಲಹಳ್ಳಿ ಕ್ರಾಸ್ ವರೆಗೂ ಅಲ್ಲ ಮೆಜೆಸ್ಟಿಕ್ ವರೆಗೂ ನಾವು ಹೋಗಬೇಕು. ಅಲ್ಲಿವರೆಗೂ ಬಸ್ ಕಳಿಸಿಕೊಡಿ. ಅಂತೇಳಿ ಒತ್ತಾಯಿಸಿದೆ. ಈಗಾಗಲೇ ಖಾಲಿ ಬಸ್ ಬಿಡಬೇಕೆಂಬ ನಮ್ಮ ಪ್ರಯತ್ನದ ಬಗ್ಗೆ ಗೊತ್ತಿದ್ದ ಅವರು ತನ್ನ ಚೌಕಾಸಿತನವನ್ನು ನಮ್ಮ ಬಳಿ ತೋರಿಸದೆ, ಮೆಜೆಸ್ಟಿಕ್ ವರೆಗೂ ಹೋಗಿಬರುವಂತೆ ಡ್ರೈವರ್ ರವರಿಗೆ ಹೇಳಿದರು.

ಡಿಪೋ ದವರು ನಿಗದಿತವಾಗಿ ಬಿಟ್ಟಿರುವ ಬಸ್ ಅಲ್ಲ ಇದು, ಬದಲಿಗೆ ನಮ್ಮಗಳ ಒತ್ತಾಯದಿಂದ ನಾವು ಕೆಲವರು ಎತ್ತಿದ ಧ್ವನಿಯಿಂದಾಗಿ ಬಿಟ್ಟಿರುವ ಬಸ್ಸಾಗಿತ್ತು. ಹಾಗಾಗಿ ಈ ಡ್ರೈವರ್ ರನ್ನ ಇದೊಂದು ಟ್ರಿಪ್ ಜಾಲಹಳ್ಳಿ ಕ್ರಾಸ್ ವರೆಗಾದರು ಹೋಗಿ ಬಾ ಅಂತ, ತಕ್ಷಣಕ್ಕೆ ಹೊಂದಿಸಿ ಕಳಿಸಿದ್ದರೋ ಏನೋ, ಕೊನೆಗು ಡ್ರೈವರ್ ಮೆಜೆಸ್ಟಿಕ್ ವರೆಗೂ ಹೋಗುವ ಕೆಲವರಿಗೆ ಟಿಕೆಟ್ ಕೊಟ್ಟು ಬೆಂಗಳೂರು ಕಡೆ ಬಸ್ ಸ್ಟಾರ್ಟ್ ಮಾಡಿಕೊಂಡು ಹೊರಟರು.

ಬಸ್ ಮೆಜೆಸ್ಟಿಕ್ ಬರೋ ಅಷ್ಟೊತ್ತಿಗೆ, ಸಿರಾದಲ್ಲಿ ಬಸ್ ಹತ್ತಿದ ಎಲ್ಲರೂ ಅಲ್ಲೇದಲ್ಲೇ ತಮ್ಮ ತಮ್ಮ ಮನೆಗಳಿಗೆ ಹತ್ತಿರವಾದ ಬಸ್ ನಿಲ್ದಾಣಗಳಲ್ಲಿ ಇಳಿದು ಹೋಗಿದ್ದರು. ನಾವು ಯಾರೆಲ್ಲ ಬಸ್‌ಗಾಗಿ ಒತ್ತಾಯಿಸಿ ಮಾತನಾಡಿದ್ದೆವೋ ಅವರಷ್ಟೇ ಕೊನೆವರೆಗು ಉಳಿದಿದ್ದೆವು. ಬಸ್ ಇಳಿದು ಹೋಗುವಾಗ ನಾವೆಲ್ಲ ಪರಸ್ಪರ ಅಭಿಮಾನದಿಂದ ಹೇಳಿ ನಮ್ಮ ನಮ್ಮ ದಾರಿ ಇಡಿದೆವು.

ಬರಹ: ಕೃಷ್ಣ ಕೆ.ಎನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+