KSRTC Strike: ಸಾರಿಗೆ ಬಸ್ಗಳ ಸಂಚಾರ ಯಥಾಸ್ಥಿತಿ, ಮುಷ್ಕರದ ಬಗ್ಗೆ ನಿಲ್ಲದ ಆತಂಕ
KSRTC Strike: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸಾರಿಗೆ ಬಸ್ಗಳ ಸಂಚಾರ ಯಥಾಸ್ಥಿತಿ ಮುಂದುವರಿದಿದೆ. ಆದರೆ ಮುಷ್ಕರದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮುಂದುವರಿದಿದೆ. 38 ತಿಂಗಳ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು.
ಇಂದಿನಿಂದ (ಫೆಬ್ರವರಿ 19 ಗುರುವಾರ) ಮುಷ್ಕರ ಪ್ರಾರಂಭವಾಗಬೇಕಾಗಿತ್ತು. ಆದರೆ ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಮುಷ್ಕರದ ತೀವ್ರತೆ ಕುಸಿದಿದೆ. ಆದರೆ ಸರ್ಕಾರದ ನಿರ್ಧಾರಗಳನ್ನು ನಿಗಮಗಳ ನೌಕರರು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಇರುವುದರಿಂದ ಗೊಂದಲ ಮುಂದುವರಿದಿದೆ. ಈ ನಡುವೆ ಸಾರಿಗೆ ಸೇವೆಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ.

ಕರ್ನಾಟಕದ ಸಾರಿಗೆ ನೌಕರರು 38 ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿದ್ದರು. ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇದೀಗ 26 ತಿಂಗಳ ಹಿಂಬಾಕಿ ಪಾವತಿ ಮಾಡುವುದಕ್ಕೆ ಸಮ್ಮತಿ ಸೂಚಿಸಿದೆ. ಇನ್ನು ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಚಲೋ ನಡೆಯಲಿದೆ. ಆದರೆ ಬಸ್ ಸಂಚಾರ ಎಂದಿನಂತೆಯೇ ಇರಲಿದೆ. ಗುರುವಾರ ಸಂಜೆಯ ವೇಳೆಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎನ್ನುವ ಆಧಾರದ ಮೇಲೆ ನಾವು ಮುಂದೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಮಿತಿಯು ತಿಳಿಸಿದೆ.












Click it and Unblock the Notifications