ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲಾಟದಲ್ಲಿ ಗೆದ್ದಿದ್ದು ಸಿದ್ದರಾಮಯ್ಯ ಹಠನೇ?
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಯ್ಕೆಯ ವಿಚಾರದಲ್ಲೂ ಕೊನೆಗೂ ಗೆದ್ದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಠ?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಮತ್ತು ರಾಜ್ಯ ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಕಿಡಿಕಾರಿದ್ದ ಮುಖಂಡರನ್ನೆಲ್ಲಾ ಸಂತುಷ್ಟಗೊಳಿಸುವ ಹೈಕಮಾಂಡ್ ಕಾರ್ಯತಂತ್ರ ಸದ್ಯಕ್ಕೆ ಫಲಿಸಿದೆ.
ಹೊಸ ಹುದ್ದೆಗಳನ್ನು ಸೃಷ್ಟಿಸಿ ಎಲ್ಲಾ ಜಾತಿಗಳಿಗೂ, ಎಲ್ಲಾ ಭಾಗಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ, ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವ ಈ ವೇಳೆ ಪೈಪೋಟಿಯಲ್ಲಿದ್ದ ಎಲ್ಲಾ ನಾಯಕರ ಹೊಟ್ಟೆ ತಣ್ಣಗಾಗುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.[ಕಾಂಗ್ರೆಸ್ ಜಾತಿ ಸಮೀಕರಣ, ನೆನಪಿಸುತ್ತಿದೆ ದೇವೇಗೌಡರ ರಾಜಕಾರಣ]
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಎನ್ನುವುದು ಕಳೆದ ಕೆಲವು ವರ್ಷಗಳಿಂದ ಪ್ರಹಸನದಂತೆ ನಡೆದುಬರುತ್ತಿತ್ತು. ಇನ್ನೇನು ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವಷ್ಟರಲ್ಲಿ ಸುದ್ದಿ ತಣ್ಣಗಾಗುತ್ತಿತ್ತು.
ಆದರೆ, ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಹೈಕಮಾಂಡ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದವಿಲ್ಲದೇ ಕೊನೆಗೂ ಡಾ. ಪರಮೇಶ್ವರ್ ಅವರಿಗೆ ಮರು ಪಟ್ಟಾಭಿಷೇಕ ಮಾಡಿದೆ. ಆ ಮೂಲಕ, ಕಾರ್ಯಕರ್ತರು ಮತ್ತು ಮುಖಂಡರಿಗಿದ್ದ ಗೊಂದಲ, ಕುತೂಹಲಕ್ಕೆ ತೆರೆಬಿದ್ದಿದೆ.[ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ]
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಯ್ಕೆಯ ವಿಚಾರದಲ್ಲಿ ಹಲವಾರು ಸುದ್ದಿಗಳು ಹರಿದಾಡುತ್ತಿದ್ದವು. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ, ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಸುತರಾಂ ಸಿದ್ದರಾಮಯ್ಯ ಒಪ್ಪುವುದಿಲ್ಲ ಎಂದೆಲ್ಲಾ ಸುದ್ದಿಯಾಗಿತ್ತು. ಮುಂದೆ ಓದಿ

ಲಿಂಗಾಯಿತ ಸಮುದಾಯದವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ
ಲಿಂಗಾಯಿತ ಸಮುದಾಯದ ಎಸ್ ಆರ್ ಪಾಟೀಲ್ ಅಥವಾ ತಮ್ಮ ಸಚಿವ ಸಂಪುಟದ ಸಹದ್ಯೋಗಿ ಎಂ ಬಿ ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು. ಯಾವ ಕಾರಣಕ್ಕೂ ಡಿ ಕೆ ಶಿವಕುಮಾರ್ ಅವರಿಗೆ ಆ ಹುದ್ದೆ ಕೊಡಬಾರದೆಂದು ಸಿದ್ದರಾಮಯ್ಯ, ಹೈಕಮಾಂಡ್ ಬಳಿ ಮತ್ತು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಬಳಿ ಹೇಳಿಕೊಂಡಿದ್ದರು ಎನ್ನಲಾಗುತ್ತಿತ್ತು.

ಯಡಿಯೂರಪ್ಪ ಪ್ರಾಬಲ್ಯ ತಡೆಯಬಹುದು
ಲಿಂಗಾಯಿತ ಸಮುದಾಯದವರನ್ನು ಆ ಸ್ಥಾನಕ್ಕೆ ಆರಿಸಿದರೆ, ಯಡಿಯೂರಪ್ಪನವರ ಪ್ರಾಬಲ್ಯವನ್ನು ತಡೆಯಲು ಸಾಧ್ಯ. ಜೊತೆಗೆ, ಉತ್ತರ ಕರ್ನಾಟಕದ ಭಾಗದಲ್ಲೂ ಪಕ್ಷಕ್ಕೆ ಉಪಯೋಗವಾಗಲಿದೆ ಎನ್ನುವುದು ಸಿದ್ದರಾಮಯ್ಯನವರ ವಾದವಾಗಿತ್ತು.[ಸಿದ್ಧರಾಮಯ್ಯ ಮಹಾನ್ ಸುಳ್ಳುಗಾರ, ವಿಶ್ವಾಸ ದ್ರೋಹದಲ್ಲಿ ನಂ.1 - ವಿಶ್ವನಾಥ್]

ಪರಮೇಶ್ವರ್ ಅವರೇ ಓಕೆ ಎಂದ ಸಿದ್ದರಾಮಯ್ಯ
ಒಂದು ವೇಳೆ ಇಬ್ಬರ ಹೆಸರಿಗೆ ಹೈಕಮಾಂಡ್ ಸಮ್ಮತಿ ಸೂಚಿಸದೇ ಇದ್ದಲ್ಲಿ, ಪರಮೇಶ್ವರ್ ಅವರೇ ಓಕೆ, ಡಿಕೆಶಿ ಮಾತ್ರ ಬೇಡ ಎನ್ನುವ ನಿಲುವನ್ನು ಸಿದ್ದರಾಮಯ್ಯ ತಾಳಿದ್ದರು. ಇನ್ನು ಈ ಹುದ್ದೆಯ ರೇಸಿನಲ್ಲಿ ಹಿರಿಯ ಮುಖಂಡ ಕೆ ಎಚ್ ಮುನಿಯಪ್ಪ ಅವರ ಹೆಸರು ನಾಮಕೇವಾಸ್ತೆಯಾಗಿ ಇದ್ದಿದ್ದರಿಂದ ಅವರ ಬಗ್ಗೆ ಸಿದ್ದರಾಮಯ್ಯ ಹೆಚ್ಚು ತಲಕೆಡಿಸಿಕೊಂಡಿರಲಿಲ್ಲ ಎನ್ನುವ ಮಾತು ಕೇಳಿಬರುತ್ತಿತ್ತು.

ಡಿಕೆಶಿ ಆಕ್ರಮಣ ಶೀಲ ವರ್ತನೆ
ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿರುವ, ಜೊತೆಗೆ ಉಪಚುನಾವಣೆಯಲ್ಲಿ ವಹಿಸಿದ್ದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಡಿ ಕೆ ಶಿವಕುಮಾರ್ ನಿರ್ವಹಿಸಿದ್ದರೂ, ಅವರ ಆಕ್ರಮಣಶೀಲ ವರ್ತನೆಯ ಬಗ್ಗೆ ಸಿದ್ದರಾಮಯ್ಯ, ಹಲವಾರು ಬಾರಿ ಹೈಕಮಾಂಡ್ ಬಳಿ ಬಿನ್ನವಿಸಿಕೊಂಡಿದ್ದರು ಎನ್ನಲಾಗುತ್ತಿದೆ.

ಕೊನೆಗೂ ಗೆದ್ದಿದ್ದು ಸಿದ್ದು ಹಠ
ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದ್ದ ಮೇಲಿನ ಎಲ್ಲಾ ಮಾತುಗಳನ್ನು ಒಪ್ಪುವುದಾದರೆ, ಮುಖ್ಯಮಂತ್ರಿಯಾದ ನಂತರ ಇಂದಿನವರೆಗೂ, ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಯ್ಕೆಯ ವಿಚಾರದಲ್ಲೂ ಕೊನೆಗೂ ಗೆದ್ದಿದ್ದು ಸಿದ್ದರಾಮಯ್ಯನವರ ಹಠವೇ ಅಲ್ಲದೇ ಮತ್ತಿನ್ನೇನು?












Click it and Unblock the Notifications