'ರಾಹುಲ್ ಗಾಂಧಿ ಹಣೆದ ತಂತ್ರಕ್ಕೆ ಎಲ್ಲರೂ ಬಬ್ಬೆಬ್ಬೆ': ಡಿಕೆಶಿ
ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತ ಕಾರ್ಯಕ್ರಮದ ಭಾಷಣದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಲವೊಂದು ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಾಗಿ ಇರಿ ಎಂದು ಕರೆ ನೀಡಿದ್ದಾರೆ.
ವಿದ್ಯಾರ್ಥಿ ದಿನಗಳಿಂದ ತಾನು ಬೆಳೆದ ಬಂದ ರೀತಿಯೇ ಎಲ್ಲರಿಗೂ ಮಾದರಿಯಾಗಲಿ ಎಂದ ಡಿಕೆಶಿ, ಪರಿಶ್ರಮಕ್ಕೆ ಫಲ ಇದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ. ಹುದ್ದೆಗೆ ಆಸೆ ಪಡದೇ ಕೆಲಸ ಮಾಡಿ ಹುದ್ದೆ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವುದು ಮತ್ತು ಮುಂದಿನ ಚುನಾವಣೆಗೆ ಪೂರ್ವ ತಯಾರಿ ಸಂಬಂಧ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ನಡೆಸಿದ್ದ ಸಂಭಾಷಣೆಯನ್ನೂ ಡಿಕೆಶಿ ಈ ವೇಳೆ ಬಹಿರಂಗ ಪಡಿಸಿದ್ದಾರೆ.
ಡಿಕೆಶಿ ಭಾಷಣದ ವೇಳೆ ಭಾರತ್ ಜೋಡೋ ಯಾತ್ರೆಯ ವಿಚಾರದಲ್ಲಿ ಕೆಪಿಸಿಸಿಯ ಕೆಲವು ಮುಖಂಡರ ಜೊತೆಗೆ ಸಹಮತವಿಲ್ಲ ಎನ್ನುವ ವಿಚಾರವೂ ಪರೋಕ್ಷವಾಗಿ ಬಹಿರಂಗಗೊಂಡಿದೆ.

ಅಂದು ದೇವೇಗೌಡ್ರ ಎದುರು ಸ್ಪರ್ಧಿಸಿದ್ದೆ
"ನಾನು ಫೈನಲ್ ಇಯರ್ ಸ್ಟೂಡೆಂಟ್, ವಿದ್ಯಾರ್ಥಿ ನಾಯಕನಾಗಿದ್ದ ದಿವಸದಲ್ಲಿ ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ನನಗೆ ಬಿಫಾರಂ ನೀಡಿತ್ತು. ಅಂದು ದೇವೇಗೌಡ್ರ ಎದುರು ಸ್ಪರ್ಧಿಸಿದ್ದೆ, ಇದೇ ವೀರಪ್ಪ ಮೊಯ್ಲಿಯವರು ನನಗೆ ಟಿಕೆಟ್ ನೀಡಲು ಸಹಕರಿಸಿದ್ದರು. ಅಂದಿನಿಂದ ಇಂದಿನವರೆಗೆ ಪಕ್ಷವನ್ನು ನಾನು ತಾಯಿಯಂತೆ ಪೂಜಿಸುತ್ತೇನೆ. ಪರಿಶ್ರಮಕ್ಕೆ ಫಲವಿದೆ ಎನ್ನುವುದಕ್ಕೆ ನನಗಿಂತ ದೊಡ್ಡ ಉದಾಹರಣೆ ನಿಮಗೆ ಬೇಕಾಗಿಲ್ಲ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. (ಫೈಲ್ ಫೋಟೋ)

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ
ಭಾರತ್ ಜೋಡೋ ಯಾತ್ರೆ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಡಿಕೆಶಿ," ನಿಮಗೆ ಪಕ್ಷ ಈಗ ನೀಡಿದ ಸ್ಥಾನ ಸಣ್ಣದಲ್ಲ, ನಿಮ್ಮ ಮೇಲೆ ನಂಬಿಕೆ ಇಟ್ಟು ಪಕ್ಷ ಈ ಜವಾಬ್ದಾರಿ ವಹಿಸಿದೆ. ಈ ಯಾತ್ರೆ ಮತ್ತು ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ನಾನು ಮತ್ತು ರಾಜ್ಯದ ಕೆಲವು ನಾಯಕರು ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದೆವು, ಆಗ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರವನ್ನು ಅವರು ಬಹಿರಂಗ ಪಡಿಸಿದ್ದರು"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಹುಲ್ ಅವರನ್ನು ಭೇಟಿಯಾದಾಗ ಈ ವಿಚಾರ ನಮಗೆ ತಿಳಿದು ಬಂದಿದೆ
"ಸುನೀಲ್ ಅವರ ನೇತೃತ್ವದಲ್ಲಿ ಎಐಸಿಸಿಯ ಟೀಂ ಇದೆ, ಪೊಲಿಟಿಕಲ್ ಅನಾಲಸಿಸ್ ಮಾಡಲು ತಂಡವನ್ನು ರಚಿಸಲಾಗಿದೆ. ನಾನು ಸೇರಿದಂತೆ ಹದಿನಾರು ಜನರು ರಾಹುಲ್ ಅವರನ್ನು ಭೇಟಿಯಾದಾಗ ಈ ವಿಚಾರ ನಮಗೆ ತಿಳಿದು ಬಂದಿದೆ. ಒಟ್ಟು 224 ಅಸೆಂಬ್ಲಿ ಕ್ಷೇತ್ರಗಳಲ್ಲಿ ಆರು ನೂರು ಜನ ನಮ್ಮನಮ್ಮ ಕ್ಷೇತ್ರದಲ್ಲಿದ್ದಾರೆ. ಅವರು ಯಾರೆಂದು ನಿಮಗೆ ಗೊತ್ತಾಗುವುದಿಲ್ಲ, ಅವರೂ ತಮ್ಮನ್ನು ಪರಿಚಯಿಸಿಕೊಳ್ಳುವುದಿಲ್ಲ"ಎಂದು ಡಿಕೆಶಿ ಹೊಸ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಟಿಕೆಟ್ ನೀಡುವ ವಿಚಾರದಲ್ಲಿ ಎಐಸಿಸಿಯ ಕಾರ್ಯತಂತ್ರವೇ ಬೇರೆ
"ಆ ತಂಡದ ಸದಸ್ಯರು ನಿಮ್ಮನ್ನೂ ನೋಡುತ್ತಾರೆ, ನನ್ನ ಕಾರ್ಯವೈಖರಿಯನ್ನೂ ನೋಡುತ್ತಿರುತ್ತಾರೆ. ಪ್ರತೀ ಕ್ಷೇತ್ರವನ್ನು ಮ್ಯಾಪಿಂಗ್ ಮಾಡಲಾಗಿದೆ, ಕ್ಷೇತ್ರದ ಹಾಲೀ ಶಾಸಕರು, ಕಳೆದ ಬಾರಿ ಸೋತ ಅಭ್ಯರ್ಥಿ, ಈ ಬಾರಿಯ ಟಿಕೆಟ್ ಆಕಾಂಕ್ಷಿಯ ಕಾರ್ಯವೈಖರಿಯನ್ನು ಅವರು ಅವಲೋಕಿಸುತ್ತಿದ್ದಾರೆ. ಒಂದು ಹಂತದ ವರದಿ ಈಗಾಗಲೇ ರಾಹುಲ್ ಗಾಂಧಿ ಕೈಸೇರಿದೆ. ಕೇರಳದಲ್ಲಿ ಕಳೆದ ಬಾರಿ ಗೆದ್ದಿದ್ದ ಮುಖಂಡರಿಗೆ ಟಿಕೆಟ್ ಕೊಡದೇ ಹದಿಮೂರು ಯುವಕರಿಗೆ ಟಿಕೆಟ್ ನೀಡಲಾಗಿತ್ತು, ಎಲ್ಲರೂ ಬಬ್ಬೆಬ್ಬೆ ಆಗಿ ಹೋದರು"ಎಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಟಿಕೆಟ್ ನೀಡುವ ವಿಚಾರದಲ್ಲಿ ಎಐಸಿಸಿಯ ಕಾರ್ಯತಂತ್ರವೇ ಬೇರೆ ಇರಲಿದೆ ಎನ್ನುವುದನ್ನು ಡಿಕೆಶಿ ಸೂಕ್ಷ್ಮವಾಗಿ ವಿವರಿಸಿದರು.












Click it and Unblock the Notifications