ಡಿಕೆಶಿಗೆ ಬಿಟ್ಟು ಬಿಡದೇ ಕಾಡುತ್ತಿರುವ ಗುಮ್ಮ: 10 ದಿನಗಳಲ್ಲಿ 5 ವಿಚಾರಣೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ಸಿನಲ್ಲಿದ್ದರೆ ಮುಖ್ಯಮಂತ್ರಿಯಾಗುವುದಿಲ್ಲ, ಬಿಜೆಪಿಗೆ ಬರಲಿ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದರು. ಇದು ವ್ಯಂಗ್ಯವೋ ಅಥವಾ ಈ ಓಪನ್ ಆಫರ್ ನೈಜತೆಯಿಂದ ಕೂಡಿದೆಯೋ ಗೊತ್ತಿಲ್ಲ.
ಆದರೆ, ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪಕ್ಕೂ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟು ಬಿಡದೇ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆಗೂ ಏನಾದರೂ ಸಂಬಂಧವಿದೆಯಾ? ಇದರಿಂದೆಲ್ಲಾ ಹೊರಬರಲು ಸಚಿವ ಮುನಿರತ್ನ ಮೇಲಿನ ಹೇಳಿಕೆಯನ್ನು ನೀಡಿದರೋ?
ಸರ್ಕಾರಿ ಶಾಲೆ ಅವ್ಯವಸ್ಥೆ ಕುರಿತು ವಿಡಿಯೋ ಬಿಡುಗಡೆ ಮಾಡಿದ ಡಿಕೆಶಿ
ಚುನಾವಣಾ ವರ್ಷದಲ್ಲಿ ಕೆಪಿಸಿಸಿಯಲ್ಲಿ ಅತ್ಯಂತ ಸಕ್ರಿಯವಾಗಿರುವ ಡಿಕೆಶಿಗೆ ಮುಂದಿನ ಹತ್ತು ದಿನಗಳಲ್ಲಿ ಐದು ವಿವಿಧ ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಬೇಕಿದೆ. ಡಿಕೆಶಿ ಎದುರಿಸುತ್ತಿರುವ ಹಲವು ಕೇಸಿಗೆ ಸಂಬಂಧಿಸಿದಂತೆ ದೆಹಲಿ, ಚೆನ್ನೈ, ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಬೇಕಾಗಿದೆ.
ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಹಾದು ಹೋಗುತ್ತಿದ್ದ ಸಂದರ್ಭದಲ್ಲಿ, ಹಬ್ಬದ ವೇಳೆ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣದ ವೇಳೆಯೂ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ನೊಟೀಸ್ ನೀಡಲಾಗಿತ್ತು. ಮುಂದಿನ ಹತ್ತು ದಿನಗಳಲ್ಲಿ ಐದು ವಿಚಾರಣೆಯನ್ನು ಅವರು ಎದುರಿಸಬೇಕಾಗಿದೆ.
ಕಾಂಗ್ರೆಸ್ ಟಿಕೆಟ್ಗೆ 200 ಅರ್ಜಿ, ನವೆಂಬರ್ 15 ಅರ್ಜಿ ಹಾಕಲು ಕೊನೆ ದಿನ
ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ
ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಸೋಮವಾರ (ನ 14) ಹಾಜರಾಗಿದ್ದಾರೆ. ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿದ ವಿಚಾರದಲ್ಲಿ ಡಿಕೆಶಿ ವಿಚಾರಣೆಯನ್ನು ಎದುರಿಸಿದ್ದಾರೆ. "ಮೂರು ವಾರಗಳ ಸಮಯಾವಕಾಶವನ್ನು ಕೇಳಿದ್ದೆ, ಆದರೆ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದಾರೆ. ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತಿದ್ದು, ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ದಾಖಲೆ ಮೂಲಕ ಉತ್ತರ ನೀಡುತ್ತಿದ್ದೇನೆ" ಎಂದು ಡಿಕೆಶಿ ಹೇಳಿದ್ದಾರೆ.
ಸಿಬಿಐ ಪ್ರಕರಣದ ಹಿನ್ನಲೆಯಲ್ಲಿ ಹೈಕೋರ್ಟ್ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಇದೇ ಬರುವ ಶುಕ್ರವಾರ (ನ 18) ಸಿಬಿಐ ಪ್ರಕರಣದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾಗಬೇಕಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಡಿಕೆಶಿಯವರ ಮನೆ, ಕನಕಪುರದ ತೋಟದ ಮನೆ, ಅವರ ತಾಯಿಯ ಮನೆ, ಅವರ ಸ್ನೇಹಿತರ ನಿವಾಸ ಸೇರಿದಂತೆ ಏಕಕಾಲದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂಬಂಧ ಡಿಕೆಶಿ ವಿಚಾರಣೆಗಾಗಿ ಕೋರ್ಟ್ ಮುಂದೆ ಹಾಜರಾಗಬೇಕಿದೆ.
ಆದಾಯ ತೆರಿಗೆ ಮತ್ತು ಇತರ ಎರಡು ಕೇಸಿನ ಸಂಬಂಧ ವಿಚಾರಣೆ
ಇದಾದ ಒಂದೇ ದಿನದ ಅಂತರದಲ್ಲಿ ಅಂದರೆ ಶನಿವಾರ (ನ 19) ಆದಾಯ ತೆರಿಗೆ ಮತ್ತು ಇತರ ಎರಡು ಕೇಸಿನ ಸಂಬಂಧ ವಿಚಾರಣೆ ಎದುರಿಸಬೇಕಾಗಿದೆ. ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನ ಅನುಸಾರ 2015-16ರ ಅವಧಿಗೆ 3.14 ಕೋಟಿ ರೂಪಾಯಿ, 2016-17ರಲ್ಲಿ ಅಂದಾಜು 2.56 ಕೋಟಿ ರೂಪಾಯಿ ಮತ್ತು 2017-18ರ ಅಂದಾಜು 7.08 ಕೋಟಿ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವುದು ಐಟಿ ಅಧಿಕಾರಿಗಳ ಆರೋಪ.
ಡಿಕೆಶಿಗೆ ಬಿಟ್ಟು ಬಿಡದೇ ಕಾಡುತ್ತಿರುವ ಗುಮ್ಮ: 10 ದಿನದಲ್ಲಿ ಐದು ವಿಚಾರಣೆ
ಇದಲ್ಲದೇ ನವೆಂಬರ್ 21ರಂದು ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಮತ್ತು ನವೆಂಬರ್ 23ರಂದು ದೆಹಲಿಯಲ್ಲಿ ಮತ್ತೆ ಇಡಿ ಅಧಿಕಾರಿಗಳು ಮತ್ತು ದೆಹಲಿ ಹೈಕೋರ್ಟ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕಾಗಿದೆ. ಡಿಕೆಶಿಯವರನ್ನು ಕಟ್ಟಿ ಹಾಕಲು ಬಿಜೆಪಿಯವರು ಸಿಬಿಐ, ಐಟಿ ಮುಂತಾದ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎನ್ನುವ ಆರೋಪದ ಮಧ್ಯೆ, ಈ ವಿಚಾರ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಚುನಾವಣಾ ಅಸ್ತ್ರವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.