ಕರ್ನಾಟಕ ಚುನಾವಣೆ: ಇವಿಎಂ ಮೇಲೆ ಭವಿಷ್ಯ ನುಡಿದ ಕೋಡಿಶ್ರೀ
Recommended Video

ಒಗಟಿನ ಮೂಲಕ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳಲ್ಲಿ, ನೀವು ಹೇಳಿದ್ದು ಏನೂ ಅರ್ಥವಾಗಿಲ್ಲ, ಸ್ವಲ್ಪ ಬಿಡಿಸಿ ಹೇಳಿ ಸ್ವಾಮಿ.. ಅಂದರೆ ಉತ್ತರ ಕೊಡದೇ ಮುಗುಳ್ನಗುತ್ತಾ ಕಾರು ಹತ್ತಿಕೊಂಡು ಹೋದ ಹಲವು ನಿದರ್ಶನಗಳಿವೆ.
ಅಂದು ಹೇಳಿದ್ದ ಭವಿಷ್ಯದ ಬಗ್ಗೆ ನಾನು ವಿವರಿಸಿರಲಿಲ್ಲ, actually ನಾನು ನುಡಿದದ್ದು ಸತ್ಯವಾಯಿತು ನೋಡಿ ಎಂದು ಘಟನೆ ನಡೆದ ನಂತರ ಹೇಳಿದ ಉದಾಹರಣೆಗಳೂ ಇವೆ. ಅಂತಹ ಉದಾಹರಣೆಗಳಿಗೊಂದು ಮತ್ತೊಂದು ಸೇರ್ಪಡೆಯಾಗಿದೆ.
ಕಳೆದ ಭಾನುವಾರ (ಜ 7) ಚನ್ನರಾಯಪಟ್ಟಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಶ್ರೀಗಳು, ಒಂದು ವರ್ಷದ ಹಿಂದೆ ನಾನು ಹೇಳಿದ ಭವಿಷ್ಯ ನಿಜವಾಗಿದೆ. ಆ ಭವಿಷ್ಯ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ಹಾಸನದಲ್ಲಿ ಒಂದು ವರ್ಷದ ಹಿಂದೆ, 'ಬಿತ್ತಿದ ಬೆಳಸು ಪರರು ಕುಯ್ದಾರು' ಎಂದು ನುಡಿದಿದ್ದೆ. ನಾನು ಗುಜರಾತ್ ಮತ್ತು ಉತ್ತರಪ್ರದೇಶದ ಚುನಾವಣೆಯನ್ನು ಉಲ್ಲೇಖಿಸಿ ಆ ಮಾತನ್ನು ಹೇಳಿದ್ದು ಎಂದು ಕೋಡಿಶ್ರೀಗಳು ನುಡಿದಿದ್ದಾರೆ.
ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿದ ನಂತರ, ಮತಯಂತ್ರದ ಮೇಲೆ ಗುಮಾನಿಯಿಟ್ಟುಕೊಂಡು ವಿರೋಧ ಪಕ್ಷಗಳು ಭಾರೀ ಗುಲ್ಲೆಬ್ಬಿಸಿದ್ದವು. ನಂತರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿಗೆ ಕ್ಲೋಸ್ ಫೈಟ್ ನೀಡಿದ ನಂತರ ಇವಿಎಂ ಮೇಲಿನ ಶಂಕೆ ಸ್ವಲ್ಪ ಕಮ್ಮಿಯಾಗಿತ್ತು. ಕೋಡಿಶ್ರೀಗಳು ಹೇಳಿದ್ದು, ಮುಂದೆ ಓದಿ...

ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು
ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ಮುಖಂಡರು ಈಗಾಗಲೇ ಒಂದು ಸುತ್ತಿನ ಧ್ವನಿಯೆತ್ತಿದ್ದಾರೆ, ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕೂಡಾ ಕಾಂಗ್ರೆಸ್ ಆಗ್ರಹಕ್ಕೆ ಧ್ವನಿಗೂಡಿಸಿದ್ದರು.

ದುಡಿಯುವವರು ಒಬ್ಬರು, ಲಾಭ ತೆಗೆದುಕೊಳ್ಳುವವರು ಇನ್ನೊಬ್ಬರು
'ಬಿತ್ತಿದ ಬೆಳಸು ಪರರು ಕುಯ್ದಾರು' ಎಂದು ನುಡಿದಿದ್ದೆ. ಅದರರ್ಥ ಕಷ್ಟಪಟ್ಟು ದುಡಿಯುವವರು ಒಬ್ಬರು, ಅದರ ಲಾಭವನ್ನು ತೆಗೆದುಕೊಳ್ಳುವವರು ಇನ್ನೊಬ್ಬರು ಎಂದು ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯನ್ನು ಉಲ್ಲೇಖಿಸಿ ಶ್ರೀಗಳು ಹೇಳಿದ್ದಾರೆ. ಇವಿಎಂ ಯಂತ್ರಗಳು ದೋಷಪೂರಿತ ಎನ್ನುವುದು ನನ್ನ ಮಾತಿನ ಉದ್ದೇಶ ಎಂದು ಶ್ರೀಗಳು ಹೇಳಿದ್ದಾರೆ.

ಗೊಂದಲ ಮತ್ತು ಸಂಶಯವನ್ನು ದೂರಪಡಿಸಬೇಕಾಗಿದೆ
ಕರ್ನಾಟಕ ಚುನಾವಣೆಯಲ್ಲೂ ಇದೇ ಆಗುವ ಸಾಧ್ಯತೆಯಿದೆ. ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು, ಜನರಿಗೆ ಮತ್ತು ಹಲವು ಪಕ್ಷಗಳಿಗೆ ಇರುವ ಗೊಂದಲ ಮತ್ತು ಸಂಶಯವನ್ನು ದೂರಪಡಿಸಬೇಕಾಗಿದೆ, ನಂತರ ಈ ಬಗ್ಗೆ ದೂರಿದರೆ ಪ್ರಯೋಜನವಿಲ್ಲ ಎಂದು ಶ್ರೀಗಳು ನುಡಿದು, ಇವಿಎಂ ಮೇಲಿನ ಶಂಕೆ ಇನ್ನಷ್ಟು ಜಾಸ್ತಿ ಆಗುವ ಹಾಗೆ ಮಾಡಿದ್ದಾರೆ

ಗಡಿಯಲ್ಲಿ ಬಿಗುವಿನ ವಾತಾವರಣ
ಗಡಿಯಲ್ಲಿ ಬಿಗುವಿನ ವಾತಾವರಣ ಮುಂದುವರಿಯಲಿದೆ ಎಂದು ಹೇಳಿರುವ ಶ್ರೀಗಳು, ಈ ವರ್ಷ ಸುಖ: ಮತ್ತು ದು:ಖ ಸಮನಾಗಿ ಸಾಗಲಿದೆ. ಈ ಬಾರಿ ಮಳೆ ಕೈಕೊಡುವ ಸಾಧ್ಯತೆಯಿಲ್ಲ ಎಂದು ಕೋಡಿಶ್ರೀಗಳು ಕಾಲಜ್ಞಾನ ನುಡಿದಿದ್ದಾರೆ.

ಅನಿರೀಕ್ಷಿತ ವ್ಯಕ್ತಿ ಸಿಎಂ, ಕುಮಾರಸ್ವಾಮಿ ಎಂದು ವ್ಯಾಖ್ಯಾನ
ಹಾಸನದಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಹೇಳಿದ್ದರು. ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು. ಪ್ರಮುಖ ಪಕ್ಷದ ರಾಜಕೀಯ ನಾಯಕ ಸಿಎಂ ಆಗದೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆ, ಅದು ಎಚ್ ಡಿ ಕುಮಾರಸ್ವಾಮಿ ಎಂದು ವ್ಯಾಖ್ಯಾನಿಸಲಾಗಿತ್ತು.












Click it and Unblock the Notifications