"ಕರ್ನಾಟಕದಲ್ಲಿ ಇನ್ಮುಂದೆ ಎಲ್ಇಡಿ ಬಳಕೆ ಕಡ್ಡಾಯ"
ಬೆಂಗಳೂರು, ಸೆ.29: ಲೋಡ್ ಶೆಡ್ಡಿಂಗ್, ಪವರ್ ಕಟ್ ಎಲ್ಲಾ ಪ್ರಾಬ್ಲಮ್ ಒಂದೇ ಪರಿಹಾರ ವಿದ್ಯುಚ್ಛಕ್ತಿ ಉಳಿತಾಯ ಮಾಡಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ. ಗೃಹಬಳಕೆ, ಪುರಸಭೆ, ಪಟ್ಟಣ ಪಂಚಾಯ್ತಿ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲೆಡೆ ಎಲ್ಇಡಿ ಬಲ್ಬ್ಗಳ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ಘೋಷಿಸಿದರು.
2010ರಲ್ಲಿ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಇದೇ ರೀತಿ ರಾಜ್ಯದಲ್ಲಿ ಸಿಎಫ್ ಎಲ್/ಎಲ್ ಇಡಿ ಬಳಕೆ ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂಧನ ಉಳಿತಾಯ ಹಿನ್ನೆಲೆಯಲ್ಲಿ ಎನ್ ಡಿಎ ಕೇಂದ್ರ ಸರ್ಕಾರ ಕೂಡಾ ಎಲ್ ಇಡಿ ಬಳಕೆ ಹೆಚ್ಚಳ ಮಾಡಲು ಗೃಹ ಬಳಕೆಗಾಗಿ 10 ರೂಪಾಯಿಗೆ ಒಂದು ದೀಪ ನೀಡುವುದಾಗಿ ಘೋಷಿಸಿತ್ತು.[10 ರೂ.ಗೆ ಒಂದು ಎಲ್ಇಡಿ ಬಲ್ಬ್]

ಇಡೀ ರಾಜ್ಯದಲ್ಲಿ ಎಲ್ಇಡಿ ಬಲ್ಬ್ಗಳ ಬಳಕೆ ಕಡ್ಡಾಯಗೊಳಿಸಲು ನಿರ್ಧಾರ ಮಾಡಲಾಗಿದ್ದು, ಇದರಿಂದ ಹೆಚ್ಚು ವಿದ್ಯುತ್ ಉಳಿತಾಯವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಯೋಗವನ್ನು ಕೋರಲಾಗಿದೆ. ದುಬಾರಿಯಾಗಿರುವ ಎಲ್ಇಡಿ ಬಲ್ಬ್ಗಳನ್ನು 100 ರು.ಗೆ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಅ.5ರಂದು ಎಲ್ಇಡಿ ಬಲ್ಬ್ ಉತ್ಪಾದಕರೊಂದಿಗೆ ಸಭೆ ನಡೆಸಲು ಉದ್ದೇಶಿಸಿದ್ದೇವೆ ಎಂದರು.
ಬಿಜೆಪಿ ವಾಸ್ತವಾಂಶ ಅರಿಯಬೇಕಿದೆ. ಕೇಂದ್ರ ವಿದ್ಯುತ್ ನೀಡುವಲ್ಲಿ ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ. ನಾವು 1500 ಮೆಗಾವ್ಯಾಟ್ ವಿದ್ಯುತ್ ಕೋರಿದ್ದೇವೆ ಎಂದ ಅವರು, 2238 ಮೆಗಾವ್ಯಾಟ್ ನೀಡಬೇಕಾಗಿರುವ ಕೇಂದ್ರ 1182 ಮೆಗಾವ್ಯಾಟ್ ಮಾತ್ರ ವಿದ್ಯುತ್ ನೀಡುತ್ತಿದೆ ಎಂದರು.
ರಾಜ್ಯಕ್ಕೆ 7500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 6152ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತದೆ. ಜಲಾಶಯಗಳಲ್ಲಿ ನೀರಿಲ್ಲದೆ, ಜಲವಿದ್ಯುತ್ ಉತ್ಪಾದನೆ ಕಷ್ಟವಾಗಿದೆ. 1063 ಮೆಗಾವ್ಯಾಟ್ ವಿದ್ಯುತ್ಅನ್ನು ಪ್ರತೀ ದಿನ ಖರೀದಿ ಮಾಡುತ್ತಿದ್ದೇವೆ. ಇರುವ ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications