ರಾಜ್ಯದಲ್ಲಿ 'ನಾನೂ ಸಿಎಂ' ಫೈಟ್; ದೆಹಲಿಯಲ್ಲಿ ಹೆಚ್ಡಿಕೆ ಭೇಟಿಯಾದ ಎಂ.ಬಿ.ಪಾಟೀಲ್
ರಾಜ್ಯ ಕಾಂಗ್ರೆಸ್ ನಲ್ಲಿ ನಾನೂ ಸಿಎಂ ಆಗಬೇಕು ಎನ್ನುವವರ ಪಟ್ಟಿ ಬೆಳೆಯುತ್ತಲೇ ಇದೆ. ಈ ಸಾಲಿನಲ್ಲಿ ಭಾರೀ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಕೂಡ ಒಬ್ಬರು. ಇತ್ತೀಚೆಗಷ್ಟೇ ಈ ಬಗ್ಗೆ ಆಸೆ ಬಿಚ್ಚಿಟ್ಟಿದ್ದ ಅವರು, ʼನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ನನಗೂ ಸಿಎಂ ಆಗುವ ಆಸೆ ಇದೆʼ ಎಂದು ರಾಜಕಾರಣದಲ್ಲಿ ಸಖತ್ ಸದ್ದು ಮಾಡಿದ್ದರು. ಅಲ್ಲದೆ ಈ ಬಗ್ಗೆ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಮಾತನಾಡಲಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತು.
ಸದ್ಯ ದೆಹಲಿಗೆ ತೆರಳಿರುವ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಹೆಚ್ಡಿಕೆ-ಎಂಬಿ ಪಾಟೀಲ್ ಅವರ ಭೇಟಿ ಬಗ್ಗೆಯೂ ಗಾಳಿಮಾತುಗಳು ಹರಿದಾಡುತ್ತಿವೆ. ಆದರೆ ಅಸಲಿಗೆ ಇವರಿಬ್ಬರ ಭೇಟಿ ಬೇರೆ ವಿಚಾರಕ್ಕೆ ಆಗಿದೆ.

ಹೂಡಿಕೆದಾರರನ್ನು ನಮ್ಮ ರಾಜ್ಯದತ್ತ ಆಕರ್ಷಿಸುವ ಮತ್ತು #GIM2025ರಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಎಂ.ಬಿ.ಪಾಟೀಲ್ ಅವರು ಇಂದಿನಿಂದ ನವದೆಹಲಿ ಪ್ರವಾಸದಲ್ಲಿದ್ದು, ಈ ವೇಳೆ ಕೇಂದ್ರ ಸಚಿವರಾದ ಕರ್ನಾಟಕದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೂಡ ಸೌಹಾರ್ದಯುತವಾಗಿ ಭೇಟಿಯಾಗಿ ಬಂದಿದ್ದಾರೆ.
ಎಂ.ಬಿ.ಪಾಟೀಲ್ ಹಾಗೂ ಉನ್ನತ ಅಧಿಕಾರಿಗಳ ನಿಯೋಗವು ನವದೆಹಲಿಯ ಸಚಿವಾಲಯದಲ್ಲಿ ಹೆಚ್ಡಿಕೆ ಅವರನ್ನು ಭೇಟಿಯಾಗಿ ರಾಜ್ಯದ ಕೈಗಾರಿಕಾಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಪರಿಪೂರ್ಣ ಸಹಕಾರ ಇರುತ್ತದೆ ಎಂಬ ಭರವಸೆಯನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಈ ಮೂಲಕ ಎಂ.ಬಿ.ಪಾಟೀಲ್ ಅವರು ರಾಜಕೀಯವಾಗಿ ಹರಿದಾಡುತ್ತಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

ಬಳಿಕ ಎಂ.ಬಿ.ಪಾಟೀಲ್ ಅವರು ಸಿಂಗಾಪುರ್ ಹೈ ಕಮಿಷನರ್ ಸೈಮನ್ ವಾಂಗ್ ವೈ ಕುಯೆನ್ ಅವರನ್ನು ಭೇಟಿಯಾಗಿ, ಸೆಮಿಕಂಡಕ್ಟರ್ಗಳು, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ ಮತ್ತು ಸಿಂಗಾಪುರದ ನಡುವಿನ ಇತ್ತೀಚಿನ ಒಪ್ಪಂದಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಬಳಿಕ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಕೂಡ ಭೇಟಿಯಾಗಿರುವ ಎಂ.ಬಿ.ಪಾಟೀಲ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ರಕ್ಷಣಾ ಕಾರಿಡಾರ್ಗಳನ್ನು ಸ್ಥಾಪಿಸುವುದು.
ರಕ್ಷಣಾ ಕಂಪನಿಗಳ ದೇಶೀಯ ಉತ್ಪಾದನೆ ಮತ್ತು ರಫ್ತಿನ ಮೇಲಿನ ನಿರ್ಬಂಧಗಳ ಕುರಿತು. ರಾಜ್ಯದಲ್ಲಿ ಹೂಡಿಕೆ ಮಾಡಲು ಮತ್ತು ವ್ಯವಹಾರ ವಿಸ್ತರಿಸಲು CPSUಗಳನ್ನು ಉತ್ತೇಜಿಸುವುದು. ಕಾರವಾರ ನೌಕಾ ವಿಮಾನ ನಿಲ್ದಾಣದ ರನ್ ವೇಯನ್ನು 2000ಮೀ.ನಿಂದ 2,700ಮೀ.ವರೆಗೆ ವಿಸ್ತರಿಸುವ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ.
ʼರಾಜ್ಯವು ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಉತ್ಪಾದನೆ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಹಲವು ದಶಕಗಳಿಂದ ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದನ್ನು ಮತ್ತಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.












Click it and Unblock the Notifications