BJP ನಾಯಕರಿಗೆ ತಾಂಡಾಗಳಲ್ಲಿ ನಿಷೇಧ: ಕೇಸರಿ ಪಕ್ಷದ ಧ್ವಜಗಳನ್ನು ಕಿತ್ತೆಸೆದು 'ನಿಷೇಧ' ಬಿತ್ತಿಪತ್ರಗಳನ್ನು ಅಂಟಿಸಿದ ಲಂಬಾಣಿಗಳು
ಬಾಗಲಕೋಟೆ, ಮಾರ್ಚ್ 28: ಎಸ್ಸಿ ಮೀಸಲಾತಿ ( SC internal reservation ) ಮರು ಹಂಚಿಕೆ ವಿಚಾರವಾಗಿ ಬಸವರಾಜ ಬೊಮ್ಮಾಯಿ ( Basavaraj Bommai ) ಸರ್ಕಾರವು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಿವಿಧ ಸಮುದಾಯಗಳು ಬೀದಿಗಿಳಿದಿವೆ. ಮಂಗಳವಾರ ಬಾಗಲಕೋಟೆ ಜಿಲ್ಲೆಯಲ್ಲಿ ಲಂಬಾಣಿ ಸಮುದಾಯದವರು ಸರ್ಕಾರದ ( Karnataka Government ) ನಿರ್ಧಾರವನ್ನು ಖಂಡಿಸಿ ಬಿಜೆಪಿ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ರಾಜ್ಯ ಸರಕಾರ ಘೋಷಿಸಿರುವ ಒಳಮೀಸಲಾತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಲಂಬಾಣಿ ತಾಂಡಾಗಳಿಗೆ ಬಿಜೆಪಿ ಮುಖಂಡರ ಪ್ರವೇಶ ನಿಷೇಧಿಸಿ ಸಮುದಾಯದವರು ಭಿತ್ತಿಪತ್ರಗಳನ್ನು ಹಾಕಿದರು.

ತಾಂಡಾಗಳಲ್ಲಿನ ಹಲವು ಮನೆಗಳ ಮೇಲೆ ಹಾರಿಸಿದ್ದ ಬಿಜೆಪಿ ಧ್ವಜಗಳನ್ನು ಲಂಬಾಣಿ ಸಮುದಾಯದವರು ತೆಗೆದು ಎಸೆದರು. ಸಮುದಾಯದವರು ಕೇಸರಿ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶೇ.17 ಮೀಸಲಾತಿಯನ್ನು ವಿವಿಧ ಸಮುದಾಯಗಳಿಗೆ ಹಂಚುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ. ರಾಜ್ಯವು ಎಸ್ಸಿ ( ಎಡ ) ಶೇ 6, ಎಸ್ಸಿ ( ಬಲ ) ಶೇ 5.5, ಎಸ್ಸಿ ( ಸ್ಪೃಶ್ಯ ) ಶೇ 4.5, ಮತ್ತು ಎಸ್ಸಿ ( ಇತರರು ) ಶೇ 1 ಮೀಸಲಾತಿಯನ್ನು ಶಿಫಾರಸು ಮಾಡಿದೆ.
ಸೋಮವಾರ ಸಂಜೆ ಶಿಕಾರಿಪುರದಲ್ಲಿ ಬಂಜಾರ ಮತ್ತು ಭೋವಿ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಚೇರಿ ಮತ್ತು ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಶಿವಮೊಗ್ಗ ಜಿಲ್ಲಾಡಳಿತವೂ ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಂಜಾರ ಹಾಗೂ ಬೋವಿ ಸಮುದಾಯದವರ ಜೊತೆ ಮಾತನಾಡುತ್ತೇನೆ, ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮನೆ ನಡೆದ ದಾಳಿ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳೀಯ ಕಾಂಗ್ರೆಸ್ ಮುಖಂಡರತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯವನ್ನು ಬಿಜೆಪಿ ನೀಡುತ್ತಿದೆ. ಇದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ನಿಂದ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇದು ಬಿಜೆಪಿಯವರದ್ದೇ ಕುತಂತ್ರವೆಂದು ಹೇಳಿದ್ದಾರೆ. ಬಿಜೆಪಿಯು ಬಿಎಸ್ವೈ ಅವರನ್ನು ದ್ವೇಷಿಸುತ್ತಿದೆ. ಅವರನ್ನು ರಾಜಕೀಯವಾಗಿ ಮುಗಿಸಲು ಆಂತರಿಕವಾಗಿ ಕುತಂತ್ರ ನಡೆಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಮೀಸಲಾತಿ ಹಂಚಿಕೆ ನಿರ್ಧಾರವನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಶಿವಮೊಗ್ಗ, ಬಾಗಲಕೋಟೆ, ಗದಗ, ಕೊಪ್ಪಳ, ಬೆಳಗಾವಿ, ಹೊಸಪೇಟೆ, ಬಳ್ಳಾರಿ ಸೇರಿದಂತೆ ವಿವಿದೆಡೆ ಆಕ್ರೋಶ ವ್ಯಕ್ತವಾಗಿದೆ. ರಸ್ತೆಗಳಲ್ಲಿ ಟಾಯರ್ಗಳನ್ನು ಇಟ್ಟು ಬೆಂಕಿ ಹಚ್ಚಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಬ್ಯಾನರ್ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications