ತುಮಕೂರು ಜೆಡಿಎಸ್ ಅಭ್ಯರ್ಥಿ ಎ ಕೃಷ್ಣಪ್ಪ ವಿಧಿವಶ
ಬೆಂಗಳೂರು, ಏ 23: ಜಾತ್ಯಾತೀತ ಜನತಾದಳದ (ಜೆಡಿಎಸ್) ರಾಜ್ಯಾಧ್ಯಕ್ಷ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎ ಕೃಷ್ಣಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ತೀವ್ರ ಎದೆನೋವು ಕಂಡುಬಂದ ಹಿನ್ನಲೆಯಲ್ಲಿ ಕೃಷ್ಣಪ್ಪ ಅವರನ್ನು ನಗರದ ಕೆ ಆರ್ ಪುರಂನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಬುಧವಾರ (ಏ 23) ರಾತ್ರಿ 7.40ಕ್ಕೆ ಕೃಷ್ಣಪ್ಪ ಕೊನೆಯುಸಿರೆಳೆದರು.

ಆಸ್ಪತ್ರೆಗೆ ದಾಖಲಿಸುವಾಗಲೇ ಕೃಷ್ಣಪ್ಪ ಅವರು ಕೋಮಾ ಸ್ಥಿತಿಗೆ ಬಂದಿದ್ದರು. 68 ವರ್ಷದ ಕೃಷ್ಣಪ್ಪ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಹುಟ್ಟೂರು ಮೂಲದವರು. ಈ ಹಿಂದೆ ಐಟಿಐ ಕಾರ್ಖಾನೆಯಲ್ಲಿ ಯೂನಿಯನ್ ಮುಖಂಡರಾಗಿದ್ದ ಕೃಷ್ಣಪ್ಪ ಯಾದವ ಸಮುದಾಯದ ಪ್ರಭಾವಿ ಮುಖಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಕೃಷ್ಣಪ್ಪ, ಸೆಪ್ಟಂಬರ್ 13, 2013ರಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ನಾಲ್ಕು ಬಾರಿ ಕಾಂಗ್ರೆಸ್ಸಿನ ಶಾಸಕರಾಗಿದ್ದ ಕೃಷ್ಣಪ್ಪ ವೀರಪ್ಪ ಮೊಯ್ಲಿ ಸರಕಾರದಲ್ಲಿ ಸಚಿವರಾಗಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಕೃಷ್ಣಪ್ಪ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.
ಹದಿನಾರನೇ ಲೋಕಸಭೆಗೆ ತುಮಕೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ ಕೃಷ್ಣಪ್ಪ ಲೋಕಸಭೆಗೆ ಆಯ್ಕೆ ಬಯಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸವರಾಜ್ ಮತ್ತು ಕಾಂಗ್ರೆಸ್ಸಿನಿಂದ ಮುದ್ದಹನುಮೇಗೌಡ ಕಣದಲ್ಲಿದ್ದಾರೆ.
ಕೃಷ್ಣಪ್ಪ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಎ ಕೃಷ್ಣಪ್ಪ ಅವರ ನಿಧನಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕೃಷ್ಣಪ್ಪ ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೇ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದ ಎಚ್ ಡಿ ಕುಮಾರಸ್ವಾಮಿ ಪ್ರವಾಸ ಮೊಟಕುಗೊಳಿಸಿ ಗುರುವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಂತಾಪ: ಕೃಷ್ಣಪ್ಪ ಅವರ ನಿಧನಕ್ಕೆ ಸಂತಾಪಗಳ ಮಹಾಪೂರವೇ ಹರಿದುಬರುತ್ತಿದೆ. ಪಕ್ಷಭೇದ ಮೆರೆತು ಎಲ್ಲರೂ ಕೃಷ್ಣಪ್ಪ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.











Click it and Unblock the Notifications