ಪೊಲೀಸ್ ಇಲಾಖೆಯನ್ನು ಬಾಧಿಸುತ್ತಿದೆ ಗ್ರೂಪ್ ಸಿ-ಡಿ ವರ್ಗಾವಣೆಯ ನೀತಿ!
ಬೆಂಗಳೂರು, ಸೆಪ್ಟೆಂಬರ್ 29: ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ಹೈರಾಣಾಗಿ ಹೋಗಿದ್ದಾರೆ. ನೇಮಕಾತಿ ಹೊಂದಿದ ಜಿಲ್ಲೆಯಲ್ಲೇ ಜೀವಮಾನವನ್ನು ಕಳೆಯಬೇಕಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ಪೊಲೀಸ್ ಇಲಾಖೆಯ ಸಿಬ್ಬಂದಿ ಬಳಲಿಹೋಗಿದ್ದಾರೆ.
ಪತಿಯೊಂದು ಕಡೆ ಪತ್ನಿಯೊಂದು ಕಡೆ ಕೆಲಸವನ್ನು ಮಾಡುತ್ತಿದ್ದರೂ ನೆಮ್ಮದಿಯ ಜೀವನ ಮಾಡಲು ವರ್ಗಾವಣೆ ಸಿಗದಂತ ದುಸ್ಥಿತಿ ಎದುರಾಗಿದೆ. ಪೊಲೀಸ್ ಇಲಾಖೆಯಲ್ಲಂತೂ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರ ಪಾಡು ವರ್ಗಾವಣೆಗೆ ಅವಕಾಶವೇ ಇಲ್ಲದೇ ನಾಯಿ ಪಾಡಂತಾಗಿದೆ.
1977ರಿಂದಲೂ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಆದರೆ 2021ರಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮದಿಂದ 16 ಎ ಅನ್ನು ತೆಗೆದುಹಾಕಲಾಯಿತು. ಈ ನಿಯಮವನ್ನು ತೆಗೆದುಹಾಕಿದ್ದರಿಂದ ಕುಟುಂಬದಿಂದ ದೂರವಿರುವ ಪೊಲೀಸರು ತಮ್ಮ ಪತ್ನಿಯ ಜೊತೆ ಸ್ವಂತ ಊರಿನಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯದ ಬಳಲುವ ತಂದೆತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಿತರ ಕಾರಣಗಳಿಂದ ಸ್ವಂತ ಜಿಲ್ಲೆಗೆ ವರ್ಗಾವಣೆಯನ್ನು ಕೇಳಿದರು ಅವಕಾಶವಿಲ್ಲ. ಇದರಿಂದ ಪೊಲೀಸರ ಮನೋಸ್ಥೈರ್ಯವೇ ಕುಂದು ಕೊಗುತ್ತಿದೆ.

ಕಾಲಹರಣ ಮಾಡುತ್ತಿರುವ ಸರ್ಕಾರ
ಉನ್ನತ ಹುದ್ದೆಯ ವಿಚಾರವಾದರೇ ತಕ್ಷಣವೇ ಸ್ಪಂದಿಸೋ ಸರ್ಕಾರ ಗ್ರೂಪ್ ಸಿ ಮತ್ತು ಗ್ರೂಡಿ ನೌಕರರ ಪಾಲಿಗೆ ವಿಲನ್ ಆಗುತ್ತಿದೆ. ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ 16ಎ ಅನ್ನು ಮರುಜಾರಿಗೆ ಯತ್ನಗಳು ನಡೆದಿದ್ದರು ಸರ್ಕಾರ ಮಾತ್ರ ಜಾಣಮೌನವನ್ನು ವಹಿಸಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಗ್ರೂಪ್ ಸಿ, ಮತ್ತು ಗ್ರೂಪ್ ಡಿ ನೌಕರರು ಪೈಕಿ ಕೆಲವು ಸಿಬ್ಬಂದಿ ನೆಮ್ಮದಿಯನ್ನು ಕಳೆದುಕೊಂಡು ಮನೋಸ್ಥೈರ್ಯವನ್ನು ಕಳೆದುಕೊಂಡು ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿಯಿಂದ ಮನವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಗೃಹ ಖಾತೆಯನ್ನು ನಿರ್ವಹಿಸಿದ ಅನುಭವವನ್ನು ಉಳ್ಳವರಾಗಿದ್ದಾರೆ. ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977ರ ತಿದ್ದುಪಡಿಯಿಂದಾಗಿ ಗ್ರೂಪ್ ಸಿ ಮತ್ತು ಡಿ ನೌಕರರು ಪರದಾಡುತ್ತಿದ್ದಾರೆ. ಬೊಮ್ಮಾಯಿಯವರು ನಮ್ಮ ಪಾಲಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಕಾಯುತ್ತಿದ್ದ ನೌಕರರಿಗೆ ನಿರಾಸೆಯಾಗಿದೆ. ನಿಯಮ 16ಎ ಅನ್ನು ತೆಗೆದುಹಾಕಿದ್ದರಿಂದ ಪತಿ ಪತ್ನಿ ದೂರಾಗುವ ಪ್ರಸಂಗ ಎದುರಾಗಿದೆ. ಈ ಸಂಬಂಧ ಕೋಟಾ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆದು ನಿಯಮ 16ಎ ಮರು ಜಾರಿಗೆ ಒತ್ತಾಯವನ್ನು ಮಾಡಿದರು ಮುಖ್ಯಮಂತ್ರಿಗಳು ತಿದ್ದುಪಡಿ ರದ್ದಿಗೆ ಮನಸ್ಸು ಮಾಡಿಲ್ಲ.

ಮಕ್ಕಳ ವರ್ಗಾವಣೆಗಾಗಿ ಹೆತ್ತವರ ಹೋರಾಟ
ಪೊಲೀಸ್ ಇಲಾಖೆಯ ನಿಯಮಾನುಸಾರ ಪೊಲೀಸರು ಪ್ರತಿಭಟನೆಯನ್ನು ಮಾಡುವಂತಿಲ್ಲ. ಪ್ರತಿಭಟನೆಯನ್ನು ಮಾಡಿದ್ದೇ ಆದರೆ ಕೆಲಸಕ್ಕೆ ಕುತ್ತು ಎದುರಾಗಲಿದೆ. ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977ರ ತಿದ್ದುಪಡಿಯನ್ನು ಮಾಡಿ 16ಎ ಅನ್ನು ತೆಗೆದುಹಾಕಿದ್ದರಿಂದ ಕುಟುಂಬಸ್ಥರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರ ಪೋಷಕರೇ ಮಕ್ಕಳ ವರ್ಗಾವಣೆ ಅನುಕೂಲವಾಗುವ 16ಎ ಮರು ಜಾರಿಗೆ ಒತ್ತಾಯಿಸಿ ಬೀದಿಗಳಿದು ಹೋರಾಡಲು ಅಣಿಯಾಗುತ್ತಿದ್ದಾರೆ.

ಕಾನೂನು ಹೋರಾಟವನ್ನು ನಡೆಸಲಾಗುತ್ತದೆ
ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು "2006ರಲ್ಲಿ ಪ್ರಕಾಶ್ ಸಿಂಗ್ ಕೇಸಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ. ಈ ತೀರ್ಪಿನಂತೆ ದೇಶದ ಎಲ್ಲಾ ರಾಜ್ಯವು ಸಿಬ್ಬಂದಿ ಮಂಡಳಿ ರಚಿಸಬೇಕು. ಪೊಲೀಸರ ವರ್ಗಾವಣೆ ಮಂಡಳಿ ಮೂಲಕ ಆಗಬೇಕು ಎಂದು ವಿವರವಾದ ತೀರ್ಪನ್ನು ನೀಡಿದೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಗ್ರೂಪ್ ಸಿ , ಗ್ರೂಪ್ ಡಿ ನೌಕರರಿಗೆ ನಿಜಕ್ಕೂ ಅನಾನುಕೂಲವಾಗುತ್ತಿದೆ. ಸರ್ಕಾರ ವರ್ಗಾವಣೆ ವಿಚಾರದಲ್ಲಿ ಈ ಬಗ್ಗೆ ಕೂಡಲೇ ತೀರ್ಮಾನವನ್ನು ಮಾಡಿ ನಿಯಮ 16 ಎ ಮರು ಜಾರಿ ಮಾಡಲು ಆಗ್ರಹಿಸುತ್ತೇನೆ. ಸರ್ಕಾರ ಈ ತೀರ್ಮಾನವನ್ನು ಮಾಡದಿದ್ದರೆ ಕಾನೂನು ಹೋರಾಟವನ್ನು ಮಾಡುತ್ತೇವೆ. ಇದರಿಂದ ಸರ್ಕಾರಕ್ಕೆ ಮುಖಭಂಗವಾಗಲಿದೆ.

ಪೊಲೀಸರಿಗೆ ಆಗ್ತಿರೋ ತೊಂದರೆಗಳೇನು?
*ಅತಿ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡತ್ತಿರುವ ಇಲಾಖೆ ಪೊಲೀಸ್ ಇಲಾಖೆ.
*ಬೇರೆ ಇಲಾಖೆ ಶನಿವಾರ, ಭಾನುವಾರ ಸೇರಿದಂತೆ ಸರ್ಕಾರಿ ರಜೆಗಳಲ್ಲಿ ರೆಜೆ ತೆಗೆದುಕೊಂಡು ಊರುಕೇರಿಗೆ ಹೋಗಿ ಬರುತ್ತಾರೆ. ಕುಟುಂಬಕ್ಕೆ ಸಮಯವನ್ನು ಮೀಸಲಿಡುತ್ತಾರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಸರಿಯಾಗಿ ರಜೆ ಸಿಗುವುದಿಲ್ಲ.*ವಿಶೇಷ ಸಮಯಗಳಲ್ಲಿ , ಹಬ್ಬ, ಸಾವು ಸಂಭವಿಸಿದರೆ, ವಿಐಪಿಗಳ ಭದ್ರತೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ದಣಿವರಿಯದಂತೆ ಕೆಲಸವನ್ನು ಮಾಡಬೇಕಿದೆ.*ಕೆಲಸಕ್ಕೆ ಅರ್ಜಿಹಾಕುವಾಗ ಹೊರಡಿಸುವ ನೋಟಿಫಿಕೇಷನ್ನಲ್ಲಿಲ್ಲದ ನಿಯಮವನ್ನು ಕೆಲಸಕ್ಕೆ ಸೇರಿದ ಮೇಲೆ ಜಾರಿ ಮಾಡಿದರೆ. ಸ್ವಂತ ಜಿಲ್ಲೆಗೆ ಹೋಗುವುದು ಹೇಗೆ?
*ಹೆತ್ತವರು ಸ್ವಂತ ಊರನ್ನು ಬಿಟ್ಟು ಬರಲ್ಲ. ಪೊಲೀಸರು ಊರಿಗೆ ಹೋಗುವುದಿಲ್ಲ ಇದರಂದ ಸಂಬಂಧಗಳಿಗೆ ಕಡಿವಾಣ ಬೀಳುತ್ತಿದೆ.
*ಪೊಲೀಸರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದಕ್ಕಾಗಿ ಕಡೆಯ ಪಕ್ಷ ಪೊಲೀಸ್ ಇಲಾಖೆಗಾದರು ಈ ನಿಯಮಗಳಿಂದ ವಿನಾಯ್ತಿ ನೀಡಿ ವರ್ಗಾವಣೆಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಕೆಳಹಂತದ ಪೊಲೀಸ್ ಅಧಿಕಾರಿಗಳ ಆಗ್ರಹವಾಗಿದೆ.











Click it and Unblock the Notifications