ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು
ಬೆಂಗಳೂರು, ಮಾ.11 : ರಾಷ್ಟ್ರಗೀತೆ ನುಡಿಸುವ ವೇಳೆ ವೇದಿಕೆಯಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ಕೆಳಗಿಳಿದು ಹೋದ ಘಟನೆ ಮಂಗಳವಾರ ನಡೆದಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರಮಾಣ ವಚನ ಸಮಾರಂಭದ ವೇಳೆ ಈ ಪ್ರಸಂಗ ನಡೆದಿದೆ.
ಮಂಗಳವಾರ ಬೆಳಗ್ಗೆ 9.30ಕ್ಕೆ ರಾಜಸ್ಥಾನ ಹೈಕೋರ್ಟ್ನಿಂದ ವರ್ಗಾಣೆಯಾಗಿ ಬಂದಿರುವ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಿತು.

ಪ್ರಮಾಣ ವಚನದ ಬಳಿಕ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸಲು ಆರಂಭಿಸಿತು. ಆಗ ರಾಜ್ಯಪಾಲ ವಜುಭಾಯಿ ವಾಲಾ ವೇದಿಕೆ ಬಿಟ್ಟು ಕೆಳಗಿಳಿದು ಹೊರಟರು. ಕೆಲವು ಹೆಜ್ಜೆ ಹಾಕಿ ಮುಂದೆ ಹೋದ ಅವರು ತಕ್ಷಣ ಮರಳಿ ವೇದಿಕೆಯೇರಿ ತಮ್ಮ ಸ್ಥಾನಕ್ಕೆ ಬಂದು ನಿಂತರು. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ಆದರೆ, ರಾಜ್ಯಪಾಲರು ವಾಪಸ್ ಬಂದು ನಿಂತುಕೊಳ್ಳುವಷ್ಟರಲ್ಲಿ ರಾಷ್ಟ್ರಗೀತೆಯ ಕೊನೆಯ ಸಾಲು ಕೇಳಿ ಬರುತ್ತಿತ್ತು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರಾಜಭವನದಲ್ಲಿ ನಡೆಯುವ ಕಾರ್ಯಕ್ರಮಗಳ ಮೊದಲು ಮತ್ತು ನಂತರ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಈ ಸಮಯದಲ್ಲಿ ಶಿಷ್ಟಾಚಾರದಂತೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸುತ್ತಾರೆ. ಆದರೆ, ರಾಜ್ಯಪಾಲರು ವೇದಿಕೆಯಿಂದ ಇಳಿದು ಹೋಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದರು.












Click it and Unblock the Notifications