ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಸಾರಿಗೆ ನೌಕರರ ಜೊತೆ ಸಂಧಾನ ಯಶಸ್ವಿಯಾದ ಹಿನ್ನೆಲೆ ಅವರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇನ್ನು ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಳಿಕ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವರು ಹಾಗೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿ ಚರ್ಚಿಸಿದೆ. ಸಾರಿಗೆ ನೌಕರರು ತಮ್ಮ ವಿವಿಧ 13 ಬೇಡಿಕೆಗಳನ್ನು ಮುಂದಿಟ್ಟು, ಮುಷ್ಕರಕ್ಕೆ ಕರೆ ನೀಡಿದ್ದರು. ಈ ಎಲ್ಲ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಸಮಾಲೋಚಿಸಿ, ಪರಿಹರಿಸುವ ನಿರ್ಧಾರಕ್ಕೆ ನಮ್ಮ ಸರ್ಕಾರ ಬಂದಿದ್ದು, ಇದರಿಂದ ನೌಕರರು ಮುಷ್ಕರ ಕೈಬಿಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಿರುವ ಹಣದಲ್ಲಿ 5,900 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ. ನೌಕರರ ಕಷ್ಟವನ್ನು ಮನಗಂಡು ನಮ್ಮ ಸರ್ಕಾರ 2,000 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಮುಂಬರುವ ಬಜೆಟ್ನಲ್ಲಿ ಬಾಕಿ ಉಳಿದಿರುವ ಹಣವನ್ನು ಬಿಡುಗಡೆಗೊಳಿಸಿ ನೌಕರರ ಹಿತ ಕಾಪಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಮುಷ್ಕರ ನಿರ್ಧಾರದಿಂದ ಹಿಂದೆ ಸರಿದಿರುವ ಸಾರಿಗೆ ನೌಕರರಿಗೆ ಧನ್ಯವಾದಗಳು. ನಿಮ್ಮ ಅಹವಾಲುಗಳನ್ನು ಸಮಚಿತ್ತದಿಂದ ಆಲಿಸಿ ಪರಿಹರಿಸಲು ನಮ್ಮ ಸರ್ಕಾರ ಮುಕ್ತವಾಗಿದೆ ಎಂದು ಸಿಎಂ ಅಭಯ ನೀಡಿದ್ದಾರೆ.
ರಾಜ್ಯ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಬಿಜೆಪಿ ಟೀಕೆ ಮಾಡಿತ್ತು. ಅವೈಜ್ಞಾನಿಕ ನೀತಿಗಳಿಂದ ರಾಜ್ಯವನ್ನು ಕರ್ನಾಟಕ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದ್ದರಿಂದ ಸಾರಿಗೆ ಇಲಾಖೆ ಸೊರಗುತ್ತಿದೆ. ಶಕ್ತಿಯಿಂದ ಸಾರಿಗೆ ಇಲಾಖೆ ನಿಶ್ಯಕ್ತವಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಮುಂದೆ ಚಲಿಸದಷ್ಟು ನಷ್ಟಕ್ಕೆ ಒಳಗಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದರು.

ಸಿಬ್ಬಂದಿಗೆ ಬಾಕಿ ವೇತನ, ತುಟ್ಟಿಭತ್ಯೆ ಬಾಕಿ, ರಜೆ ನಗದೀಕರಣ ಹಾಗೂ ಪಿಎಫ್ ನೀಡುವುದಕ್ಕೂ ಸಿದ್ದರಾಮಯ್ಯ ನವರ ಸರ್ಕಾರದ ಬಳಿ ದುಡ್ಡಿಲ್ಲ.!ಶಕ್ತಿಯಿಂದ ಲಾಭವಾಗಿದೆ ಎಂದು ಪುಟಗಟ್ಟಲೆ ಜಾಹಿರಾತು ಕೊಡುತ್ತೀರಲ್ಲ ರಾಮಲಿಂಗಾರೆಡ್ಡಿಯವರೇ..? ಇಲಾಖೆ ಲಾಭದಲ್ಲಿದ್ದರೆ ಸಾರಿಗೆ ನೌಕರರಿಗೆ ಒಟ್ಟು ನಷ್ಟ 6,468.3 ಕೋಟಿ ರೂಪಾಯಿ ಬಾಕಿ ಯಾಕೆ ಉಳಿಸಿಕೊಂಡಿದ್ದೀರಿ? ಇಲಾಖೆ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ, ತುಟ್ಟಿಭತ್ಯೆ, ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ತಲುಪಿದ್ಯಾಕೆ? ಎಂದು ಪ್ರಶ್ನಿಸಿದ್ದರು.
ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ದುರ್ಬಲಗೊಳಿಸಿದ ಅಪಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನಿಗಮದ ನಾಲ್ಕೂ ಸಂಸ್ಥೆಗಳಿಂದ ಬರೋಬ್ಬರಿ 6,468 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಹೊರೆಯಿದ್ದು, ನಾಲ್ಕು ನಿಗಮಗಳೂ ನಷ್ಟದ ಹಾದಿ ಹಿಡಿದಿರುವ ದುರ್ದೈವವೇ ಸರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದರು.
ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದರೂ ಬಾಕಿ ಪಾವತಿಸಿಲ್ಲದಿರುವುದು ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನಿಶಕ್ತಿಗೊಂಡು ದಿವಾಳಿಯ ಅಂಚಿಗೆ ಸಾಗಿರುವುದನ್ನು ಸಾಕ್ಷೀಕರಿಸುತ್ತಿದೆ. ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಿ, ನೌಕರರ ಬಾಕಿ ಹಣ ಪಾವತಿ ಮಾಡದಿದ್ದರೆ, ಸದ್ಯದಲ್ಲೇ ಸಾರಿಗೆ ನೌಕರರ ಮುಷ್ಕರದ ಬಿಸಿ ಕರ್ನಾಟಕ ಸರ್ಕಾರಕ್ಕೆ ತಟ್ಟಲಿದೆ. ನಾಡಿನ ಜನರಿಂದಲೇ ಹಾದಿ ಬೀದಿಯಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದರು. ಆದರೆ, ಸಾರಿಗೆ ನೌಕರರ ಮುಷ್ಕರಕ್ಕೂ ಮುನ್ನವೇ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಇದರಿಂದ ಮುಷ್ಕರವನ್ನು ಕೈಬಿಟ್ಟಿದ್ದಾರೆ.












Click it and Unblock the Notifications