ಮೈಸೂರು: ಚುನಾವಣೆಯಲ್ಲಿ ನಡೆಯುತ್ತಾ ಮಹಿಳಾ ಅಭ್ಯರ್ಥಿಗಳ ದರ್ಬಾರ್?!
ಮೈಸೂರು, ಮಾರ್ಚ್ 9 : ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈದು, ಪುರುಷರಷ್ಟೇ ಸಮರ್ಥರು ಎಂದು ಸಾಬೀತು ಮಾಡಿರುವ ಮಹಿಳೆ ರಾಜಕೀಯ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಹಿಳೆ ಕುಟುಂಬ ನಿರ್ವಹಣೆಯಷ್ಟೇ ಅಲ್ಲದೇ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾಳೆ. ಕರ್ನಾಟಕದಲ್ಲೂ ಇಂತಹ ಹಲವು ಸಾಧಕ ಮಹಿಳೆಯರಿದ್ದಾರೆ, ಅದರಲ್ಲೂ ನಮ್ಮ ಮೈಸೂರು ಭಾಗದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಸ್ಪರ್ಧಿಸಿ ಗೆದ್ದ ಮಹಿಳಾ ಮಣಿಗಳ ಸಂಪೂರ್ಣ ವಿವರ ಇಲ್ಲಿದೆ.
ಮೈಸೂರು ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಆರು ದಶಕಗಳಲ್ಲಿ ಆಯ್ಕೆಯಾಗಿದ್ದು, ಕೇವಲ ನಾಲ್ವರು ಮಹಿಳೆಯರು ಮಾತ್ರ. ಹುಣಸೂರು ಕ್ಷೇತ್ರದಿಂದ ಚಂದ್ರಪ್ರಭಾ ಅರಸು ಎರಡು ಬಾರಿ ಗೆಲುವು ಸಾಧಿಸಿದ್ದರು. ಹೆಚ್. ಡಿ ಕೋಟೆ ಕ್ಷೇತ್ರದಿಂದ ಸುಶೀಲ ಚೆಲುವರಾಜು, ನರಸಿಂಹರಾಜ ಕ್ಷೇತ್ರದಿಂದ ಮುಕ್ತರುನ್ನೀಸಾ ಬೇಗಂ ಹಾಗೂ ಬನ್ನೂರು ಕ್ಷೇತ್ರದಿಂದ ಸುನೀತಾ ವೀರಪ್ಪಗೌಡ ಚುನಾವಣೆಗೆ ಆಯ್ಕೆಯಾಗಿದ್ದರು.
ಕಾಂಗ್ರೆಸ್ ನಿಂದ ಮೂವರು, ಜನತಾ ಪರಿವಾರ ಹಾಗೂ ಬಿಜೆಪಿಯಿಂದ ತಲಾ ಒಬ್ಬೊಬ್ಬರು ಗೆದ್ದಿದ್ದಾರೆ. ಇದರಲ್ಲಿ ಚಂದ್ರಪ್ರಭಾ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜನತಾ ಪರಿವಾರದಿಂದ ಜಯಗಳಿಸಿದ್ದರು. ಮುಂಬರುವ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಹಲವು ಮಹಿಳೆಯರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಎಷ್ಟು ಮಂದಿಗೆ ಟಿಕೆಟ್ ಸಿಕ್ಕಬಹುದು ಎಂಬುದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಹಿಳೆಯರ ಕಡೆಗಣನೆ
ಪುರುಷರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧರಿರುತ್ತಾರೆ. ಮಹಿಳೆಯರ ವಿಷಯ ಬಂದಾಗ ಟಿಕೆಟ್ ನೀಡಲು ಹಿಂದೆ - ಮುಂದೆ ನೋಡುತ್ತಾರೆ. ಪುರುಷರಷ್ಟೇ ರಾಜಕೀಯ ಜ್ಞಾನ ಮಹಿಳೆಯರಿಗಿದೆ. ಆಡಳಿತ ವೈಖರಿಯೂ ಚೆನ್ನಾಗಿ ಗೊತ್ತು. ಅದನ್ನು ಪ್ರದರ್ಶಿಸಲು ವೇದಿಕೆ ಸಿಗಬೇಕು ಅಷ್ಟೆ. ಆದರೆ ಸದ್ಯದ ಸ್ಥಿತಿಯಲ್ಲಿ ಶಾಸಕನಾಗಿದ್ದ ಗಂಡ ಸತ್ತರೆ ಅನುಕಂಪ ಗಿಟ್ಟಿಸಲು ಪತ್ನಿಗೆ ಟಿಕೆಟ್ ನೀಡುವ ಪರಿಸ್ಥಿತಿ ಇದೆ ಎಂದು ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ ತಿಳಿಸುತ್ತಾರೆ.
ನಾಲ್ಕು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯೆ, ಎರಡು ಬಾರಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುವ ಅವರು ಬನ್ನೂರು ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿ ವಿಧಾನಸಭೆ ಪ್ರವೇಶಿಸಿದ್ದರು. 2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಮುನ್ನೂರು ಬನ್ನೂರು ಕ್ಷೇತ್ರ ರದ್ದಾಯಿತು.

ಮೊದಲ ಶಾಸಕಿ ಯಾರು?
ಅವಿಭಜಿತ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಿಂದ 1957ರಲ್ಲಿ ಕೆ. ಎಸ್ ನಾಗರತ್ನಮ್ಮ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ಈಗಿನ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಗೆಲುವು ಸಾಧಿಸಿದ್ದು ಸುಶೀಲಾ ಚೆಲುವರಾಜ್. ಅವರು ಹೆಚ್. ಡಿ ಕೋಟೆ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರು.
ಮಾಜಿ ಮುಖ್ಯಮಂತ್ರಿ ದೇವರಾಜು ಅರಸುವರವರ ಪುತ್ರಿ ಚಂದ್ರಪ್ರಭಾ ಅರಸು ಹುಣಸೂರು ಕ್ಷೇತ್ರದಲ್ಲಿ 1983ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದರು. ಅಷ್ಟೇ ಅಲ್ಲ, ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ರೇಷ್ಮೆ ಸಚಿವೆಯಾಗಿದ್ದರು. 1985ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ಅವರು, 1989ರಲ್ಲಿ ಅದೇ ಪಕ್ಷದಿಂದ ಗೆದ್ದು, ವಿಧಾನಸಭೆ ಪ್ರವೇಶಿಸಿದ್ದರು. 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎದುರು ಜಯಗಳಿಸಿದ್ದರು.
ಅರಸು ಅವರ ಮತ್ತೊಬ್ಬ ಪುತ್ರಿ ಭಾರತಿ ಅರಸು 1998ರಲ್ಲಿ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ - ಲೋಕಶಕ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
1984ರಲ್ಲಿ ಅಜೀಜ್ ಸೇಠ್ ಅವರು ಧಾರವಾಡ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಕ್ತರುನ್ನೀಸಾ ಬೇಗಂ. 2013ರ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ತೃತೀಯ ಲಿಂಗಿ ಚಾಂದಿನಿ ಪ್ರತ್ಯೇಕವಾಗಿ ಸಹ ಸ್ಪರ್ಧಿಸಿದ್ದರು.

ಮಾಳವಿಕ ಬಿಜೆಪಿ ಟಿಕೇಟ್ ಆಕಾಂಕ್ಷಿ?
ಈಗಾಗಲೇ ಎಲ್ಲರ ಕಣ್ಣಿರುವ ಈ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಾಗಿ ಬಹು ಬೇಡಿಕೆಯೇ ಇದೆ. ಅದರಲ್ಲೂ ಮಹಿಳೆಯರು ತಾಮುಂದು, ನಾಮುಂದು ಎಂಬಂತೆಯೇ ತುದಿಗಾಲಲ್ಲಿ ನಿಂತಂತಿದೆ. ಇದಕ್ಕೆ ಅನುಗುಣವಾಗಿ ನಟಿ ಮಾಳವಿಕಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದರೇ, ನಟಿ ರೂಪಾ ಅಯ್ಯರ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇದರ ನಡುವೆ ಪ್ರೇಮಕುಮಾರಿ ಅವರ ಹೆಸರು ಸಹ ಕೇಳಿ ಬರುತ್ತದೆ.
ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಮಾಳವಿಕಾ ಅವಿನಾಶ್, ಹೌದು. ನಾನು ಟಿಕೆಟ್ ಆಕಾಂಕ್ಷಿ. ಐದು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಈ ವಿಚಾರವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎನ್ನುತ್ತಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಎಸ್. ಎ ರಾಮದಾಸ್, ಎಚ್.ವಿ ವಿಜಯ್, ಎಸ್. ಎಂ ಶಿವಪ್ರಕಾಶ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ ಹೀಗಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಹಜ. ಆದರೆ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ ಎನ್ನುತ್ತಾರೆ ನಟಿ ಮಾಳವಿಕ.

ರೂಪಾ ಅಯ್ಯರ್ ಸ್ಪರ್ಧೆ?
ಇತ್ತ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ನಟ ಉಪೇಂದ್ರ ಇದುವರೆಗೂ ಬಹಿರಂಗಗೊಳಿಸಿಲ್ಲ. ನಾನು ಸ್ಪರ್ಧಿಸುವ ಆಸೆಯಿದೆ. ಮೈಸೂರಿನಲ್ಲಿ ಸಮೀಕ್ಷೆ ಸಹ ನಡೆಯುತ್ತಿದೆ. ಅದರ ಉಸ್ತುವಾರಿಯನ್ನು ರೂಪಾ ಅಯ್ಯರ್ ಹೊತ್ತಿದ್ದಾರೆ. ಆದರೆ ಸ್ಪರ್ಧೆ ಬಗ್ಗೆ ಇನ್ನೂ ಗೊಂದಲವಿದೆ. ಸಿನಿಮಾ ಕೂಡ ಮಾಡುತ್ತಿದ್ದೇನೆ. ಉಪೇಂದ್ರ ಅವರ ನಿರ್ಧಾರದ ಮೇಲೆ ನನ್ನ ಸ್ಪರ್ಧೆ ನಿಂತಿದೆ ಎನ್ನುತ್ತಾರೆ ಈ ಹಿಂದೆ ಕೆಪಿಜೆಪಿಯಲ್ಲಿದ್ದ ರೂಪಾ ಅಯ್ಯರ್.
ಬಿಜೆಪಿ ಮುಖಂಡ ರಾಮದಾಸ್ ವಿರುದ್ಧ ನಂಬಿಕೆ ದ್ರೋಹದ ಆರೋಪ ಮಾಡಿ ಸುದ್ದಿಯಾಗಿದ್ದ ಪ್ರೇಮಕುಮಾರಿ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆದರೆ ಈಗ ಹಿಂದೇಟು ಹಾಕುತ್ತಿದ್ದಾರೆ. ಸ್ಪರ್ಧಿಸಬೇಕೆಂಬ ಆಸೆ ಇದ್ದದ್ದು ನಿಜ. ಆದರೆ ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ತುಂಬಾ ಬೇಸರವಾಗುತ್ತದೆ. ಕೆ. ಆರ್ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಂದುಕೊಂಡಿದ್ದೆ. ಪೋಷಕರು ಬೇಡ ಎನ್ನುತ್ತಿದ್ದಾರೆ. ಅವಕಾಶ ಲಭಿಸಿದರೆ ಮುಂದೆ ಯೋಚನೆ ಮಾಡುತ್ತೇನೆ ಎನ್ನುತ್ತಿದ್ದಾರೆ ಪ್ರೇಮಕುಮಾರಿ.
ಇನ್ನು ಮತ್ತೊಂದೆಡೆ ಆಪ್ ನಿಂದ ಚಾಮಕ್ಷೇತ್ರದಲ್ಲಿ ಸಾಫ್ಟ್ ವೇರ್ ಇಂಜಿನಯರ್ ಮಾಲವಿಕ ಗುಬ್ಬಿವಾಣಿ ಕೂಡ ಸ್ಫರ್ಧಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಮೈಸೂರಿನ ಪ್ರತಿಷ್ಠಿತ ಕ್ಷೇತ್ರ ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಏಕೈಕ ಮಹಿಳೆ ಮುಕ್ತರುನ್ನೀಸಾ ಬೇಗಂ. ಅವರು 1985ರಲ್ಲಿ ನರಸಿಂಹ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇನ್ನುಳಿದಂತೆ ಕೆ. ಆರ್ ಕ್ಷೇತ್ರ ಹಾಗೂ ಚಾಮರಾಜ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಗಳ ಗೆದ್ದ ನಿದರ್ಶನವೇ ಇಲ್ಲ. ಒಟ್ಟಾರೆ ಮೈಸೂರು ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ತೆರನಾದ ಮಹಿಳಾ ಪೈಪೋಟಿ ನಡೆಯುತ್ತಿರುವುದು ವಿಶೇಷ.












Click it and Unblock the Notifications