ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ
'ಈ ಬಾರಿ ವೋಟ್ ಮಾಡಲು ಕಾತರದಿಂದ ಕಾಯುತ್ತಿದ್ದೇನೆ, ಏಕೆಂದರೆ ಇದು ನಾನು ಚಲಾಯಿಸುತ್ತಿರುವ ಮೊಟ್ಟಮೊದಲ ವೋಟ್. ಮತದಾನ ಮಾಡುವುದು ನನ್ನ ಹಕ್ಕು. ಅದರಲ್ಲೂ ನಾನು ಮತದಾನ ಮಾಡಿರುವ ಬಗ್ಗೆ ಗ್ಯಾರಂಟಿ ನೀಡಲು ಹೊಸದಾಗಿ ವಿವಿಪ್ಯಾಟ್ ಯಂತ್ರ ಬಂದಿದೆಯಲ್ಲಾ... ಮೋಸ ಮಾಡೋದಂತೂ ಸಾಧ್ಯವೇ ಇಲ್ಲ. ಅದಕ್ಕೆ ನಾನು ವೋಟ್ ಮಾಡುವುದನ್ನು ತಪ್ಪಿಸುವುದಿಲ್ಲ." ಚಿಕ್ಕಮಗಳೂರು ಜಿಲ್ಲೆಯ ಗೋಪಾಲಪುರ ಗ್ರಾಮದ 23 ವರ್ಷದ ಪ್ರಮೋದ್ ಹೇಳಿದ ಮಾತುಗಳಿವು.
'ಕಳೆದ ಚುನಾವಣೆಯ ಸಂದರ್ಭದಲ್ಲಿಯೇ ಎಪಿಕ್ ಕಾರ್ಡ್ ಮಾಡಿಸಿದ್ದರೂ, ವೋಟ್ ಮಾಡಿ ಪ್ರಯೋಜನವೇನು ಎಂಬ ಉದಾಸೀನತೆಯಿಂದ ಮತದಾನ ಮಾಡುವ ಗೋಜಿಗೇ ಹೋಗಿರಲಿಲ್ಲ. ತುಂಬಾ ಜನ ಅದೇನೋ ಇವಿಎಂ ಮಶೀನ್ ನಲ್ಲಿ ಯಾರಿಗೆ ಮತಹಾಕಿದೆ ಗೊತ್ತಾಗೋಲ್ಲ ಅಂತಿದ್ರು'
'ಆದರೆ ವಿವಿಪ್ಯಾಟ್ ಅಂತ ಹೊಸ ಮಶೀನ್ ಒಂದು ಬಂದಿದ್ಯಂತೆ, ನಾನು ಯಾರಿಗೆ ಮತ ಹಾಕಿದೆ ಅಂತ ಸ್ಕ್ರೀನ್ನಲ್ಲಿ ಕಾಣ್ಸುತ್ತೇ, ಎಟಿಎಂ ಸ್ಲಿಪ್ ಬರುತ್ತಲ್ಲ, ಆ ಥರ ಚೀಟಿ ಮೆಷಿನ್ ನ ಡಬ್ಬದೊಳಗೆ ಬೀಳುತ್ತೆ. ಅದಕ್ಕೆ ನಾನು ಈ ಸರ್ತಿ ವೋಟ್ ಖಂಡಿತ ಮಾಡ್ತೀನಿ. ಇವಿಎಂ ಮೆಷಿನ್ ನಲ್ಲಿ ನಾವು ಯಾರಿಗ್ ಮತ ಹಾಕಿದ್ರೂ ಕೂಡ, ಒಂದೇ ಪಕ್ಷಕ್ಕೆ ಮತ ಬೀಳುವ ರೀತಿ ಮಾಡಿಕೊಳ್ಳಬಹುದು ಅಂತ ಎಲ್ರೂ ಮಾತಾಡ್ತಿದ್ದರು. ಇವಿಎಂ ಜೊತೆ ವಿವಿಪ್ಯಾಟ್ ಮೆಷಿನ್ ನಿಂದ ನನಗೆ ಇದ್ದ ಅನುಮಾನ ದೂರ ಆಗಿದೆ'.
ಗೋಪಾಲ ಗ್ರಾಮದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಸ್ವೀಪ್ (ಸಮಗ್ರ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಆಂದೋಲನ( SVEEP ) ಸಮಿತಿ ವತಿಯಿಂದ ವಿವಿಪ್ಯಾಟ್(Voter Verifiable Paper Audit Trail ) ಕುರಿತು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಪ್ರಮೋದ್ ಭಾಗವಹಿಸಿದ್ದ. ಮತದಾನದ ಮಹತ್ವ ಬಗ್ಗೆ ಈ ಕಾರ್ಯಕ್ರಮದಲ್ಲಿ ಅರಿತುಕೊಂಡಿರುವ ಪ್ರಮೋದ್ ತನ್ನೆಲ್ಲಾ ಗೆಳೆಯರು ಹಾಗೂ ಊರಿನವರನ್ನೆಲ್ಲಾ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾನೆ! ಇದು ಒಂಥರಾ ಮತದಾನ ಕ್ರಾಂತಿಯೇ ತಾನೇ?

ಮತದಾನದ ಕುರಿತು ಅರಿವು ಮೂಡಿಸುವ ಯತ್ನ
ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವಿನ ಕೊರತೆ ಇನ್ನೂ ಇದೆ ಎಂಬ ಅಂಶ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯದ 4 ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಮತದಾರರ ಅರಿವು, ಮನೋಭಾವ ಮತ್ತು ಅಭ್ಯಾಸಗಳ (KAP ) ಕುರಿತು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿತು. ಸಮೀಕ್ಷೆಯಲ್ಲಿ ಕಂಡು ಬಂದ ಅಂಶಗಳ ಆಧಾರದ ಮೇಲೆ ಅಗತ್ಯ ಸಂವಹನ ವಿಧಾನ ಮತ್ತು ಮಧ್ಯಸ್ಥಿಕೆಗಳನ್ನು ಸ್ವೀಪ್ ಮುಖಾಂತರ ಚುನಾವಣಾ ಆಯೋಗ ಕೈಗೊಂಡಿದೆ.
ಸಮೀಕ್ಷೆಯ ಪ್ರಕಾರ ರಾಜ್ಯದ ಶೇ. 72.4 ರಷ್ಟು ಮಂದಿಗೆ ವಿವಿಪ್ಯಾಟ್ ಬಗ್ಗೆ ತಿಳಿವಳಿಕೆ ಇಲ್ಲದಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವೀಪ್ ವತಿಯಿಂದ ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮತದಾನ ಖಾತ್ರಿ ಪಡಿಸಿಕೊಳ್ಳುವುದು ಹೇಗೆ?
ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ಡಿಸ್ಪ್ಲೇ ಸೆಕ್ಷನ್ ನಲ್ಲಿ ವೀಕ್ಷಿಸಬಹುದು. ತದನಂತರ ಆ ಚೀಟಿಯು ಡ್ರಾಪ್ ಬಾಕ್ಸ್ ಒಳಗೆ ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ). ಈ ಮೂಲಕ ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ / ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ.

ಚೀಟಿ ಕಾಣಿಸದಿದ್ದರೆ ಏನು ಮಾಡಬೇಕು?
ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು. ಇವಿಎಂ ಯಂತ್ರಗಳು ಅತ್ಯಂತ ಸುರಕ್ಷಿತವಾಗಿವೆ. ಈ ಯಂತ್ರದಲ್ಲಿ ಮೈಕ್ರೋ ಕಂಟ್ರೋಲರ್ ಚಿಪ್ ಅಳವಡಿಸಲಾಗಿದ್ದು, ಇವಿಎಂ ನ್ನು ಒಮ್ಮೆ ಮಾತ್ರ ಪ್ರೊಗ್ರಾಂ ಮಾಡಲು ಸಾಧ್ಯ. ಚಿಪ್ನಲ್ಲಿರುವ ಸಾಫ್ಟ್ವೇರ್ ಕೋಡ್ ರೀಡ್ ಅಥವಾ ರೀರೈಟ್ ಮಾಡಲು ಸಾಧ್ಯವಿಲ್ಲ. ಈ ತಂತ್ರಾಂಶವನ್ನು ಸರ್ಕಾರದ ಅಂಗಸಂಸ್ಥೆಯಾದ ಬಿಇಎಲ್ ಮತ್ತು ಇಸಿಐಇಲ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇವಿಎಂ ಯಂತ್ರಗಳನ್ನು ಅಂತರ್ಜಾಲ ಅಥವಾ ಇನ್ಯಾವುದೇ ನೆಟ್ವರ್ಕ್ ಸಂಪರ್ಕದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಯಂತ್ರದಲ್ಲಿ ಯಾವುದೇ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡದಿರುವುದರಿಂದ ವೈರಸ್ ದಾಳಿ ಉಂಟಾಗುವ ಭಯವೂ ಇಲ್ಲ.

ತರಬೇತಿಗೆ ವಿಶೇಷ ತಂಡ
ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಪ್ರಾತ್ಯಕ್ಷಿಕೆಗಾಗಿ ಒದಗಿಸಲಾಗಿದೆ. ಈ ತಂಡಗಳು ವಿಧಾನಸಭಾ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಸಂಚರಿಸಿ ಈ ಯಂತ್ರದ ಕಾರ್ಯನಿರ್ವಹಣೆ ಬಗ್ಗೆ ವಿವರಿಸುತ್ತದೆ. ಮತದಾರರು ಸಹ ಈ ಯಂತ್ರವನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಇದಲ್ಲದೆ ಸ್ಥಳೀಯ ಟಿವಿ ಹಾಗೂ ಕೇಬಲ್ ವಾಹಿನಿಗಳು, ಸಮುದಾಯ ರೇಡಿಯೋ, ಎಫ್ಎಂ ರೇಡಿಯೋ, ಆಕಾಶವಾಣಿ, ದೂರದರ್ಶನದ ಮೂಲಕ ಮಹಿಳೆಯರು, ಹಿರಿಯ ನಾಗರಿಕರನ್ನೊಳಗೊಂಡಂತೆ ಅಕ್ಷರಸ್ಥ ಹಾಗೂ ಅನಕ್ಷರಸ್ಥರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮತದಾರರನ್ನು ತಲುಪುವ ಯತ್ನ
ಸಂತೆ, ಜಾತ್ರೆ ಹಾಗೂ ಜನನಿಬಿಡ ಸ್ಥಳಗಳಲ್ಲಿ ಬೀದಿ ನಾಟಕಗಳು ಹಾಗೂ ಜಾಥಾಗಳನ್ನು ಹಾಗೂ ಮೊಬೈಲ್ ಎಲ್ಇಡಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಅನಕ್ಷರಸ್ಥ ಹಾಗೂ ಗ್ರಾಮೀಣ ಮತದಾರರನ್ನು ತಲುಪಲಾಗುತ್ತಿದೆ. ಮೊಬೈಲ್ ಬಳಕೆದಾರರು ಹಾಗೂ ಯುವಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ದಿನಪತ್ರಿಕೆಗಳು, ಕರಪತ್ರ ಬ್ಯಾನರ್ , ಕೈಪಿಡಿ, ಜಾಹಿರಾತು ಹಾಗೂ ಮೂಲಕ ಯುವಜನತೆ , ದಿನಪತ್ರಿಕೆ ಓದುಗರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಇವಿಎಂ ಹಾಗೂ ವಿವಿಪ್ಯಾಟ್ ಕುರಿತ ಕಿರುಚಿತ್ರ ಹಾಗೂ ಸ್ಲೈಡ್ ಗಳನ್ನು ಥಿಯೇಟರ್ಸ್ ಹಾಗೂ ಸಿನಿಮಾ ಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಚುನಾವಣಾ ಸಂದೇಶ ತಲುಪಿಸುವ ಯತ್ನ
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕದ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೈಜೋಡಿಸಿದ್ದು, ವಿವಿಧ ಮಾಧ್ಯಮಗಳ ಮೂಲಕ ಚುನಾವಣಾ ಸಂದೇಶಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಕಂದಾಯ ಇಲಾಖೆ, ಬಿಬಿಎಂಪಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳು ಒಗ್ಗೂಡಿ ನಗರ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿವೆ.

2 ಕೋಟಿ ಜನರನ್ನು ತಲುಪಿದ ಪ್ರಚಾರ ಕಾರ್ಯ
ಈ ಪ್ರಚಾರ ಕಾರ್ಯವು ಈಗಾಗಲೇ 2 ಕೋಟಿ ಜನರನ್ನು ತಲುಪಿದೆ. ಇವಿಎಂ-ವಿವಿಪ್ಯಾಟ್ ಬಗ್ಗೆ ಸ್ಪಷ್ಠತೆಯೊಂದಿಗೆ ಕಡೇ ಕ್ಷಣದವರೆಗೂ ಮತದಾನಕ್ಕೆ ಉತ್ತೇಜನ ನೀಡಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ.
ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಚುನಾವಣಾ ಆಯೋಗ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications