Karnataka Election Results 2023: ಈ ಬಾರಿ ವಿಧಾನಸಭೆಗೆ ಪ್ರವೇಶ ಪಡೆದ ಮಹಿಳಾಮಣಿಗಳು
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಕ್ರಿಯೆಗೆ ತೆರೆಬಿದ್ದಿದ್ದು, ಮೇ 13ರಂದು ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಇದೇ ವೇಳೆ 2019ರ ಜುಲೈನಿಂದ ಈವರೆಗೆ ಅಧಿಕಾರದಲ್ಲಿದ್ದ ಬಿಜೆಪಿಯನ್ನು ರಾಜ್ಯದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈ ಬಾರಿ ಬಿಜೆಪಿ 66 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, 12 ಸಚಿವರು ಸೇರಿದಂತೆ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ.

ಇನ್ಮುಂದೆ ಬಿಜೆಪಿಗೆ ಅಧಿಕೃತ ವಿರೋಧ ಪಕ್ಷ ಸ್ಥಾನ ಸಿಗಲಿದ್ದರೆ, ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕನ ಸ್ಥಾನ ಹೊಂದುವ ಸಾಧ್ಯತೆ ಇದೆ. ಈಗಾಗಲೇ ಶನಿವಾರ ಸಂಜೆಯೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದಿಂದ ನೂತನ ಸಿಎಂ ಆಗುವವರೆಗೆ ನಿಯೋಜಿತ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಅತಂತ್ರ ವಿಧಾನಸಭೆಯ ಕನಸಿನಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ 19 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದೇ ವೇಳೆ ಗಂಗಾವತಿ, ಮೇಲುಕೋಟೆ, ಗೌರಿಬಿದನೂರು ಮತ್ತು ಹರಪನಹಳ್ಳಿಯಲ್ಲಿ 4 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದ ಒಂಬತ್ತು ಮಹಿಳೆಯರು ಗೆಲುವು ಸಾಧಿಸಿ, ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನಾಲ್ವರು ಮಹಿಳೆಯರು ಗೆಲುವು ಕಂಡಿದ್ದಾರೆ.

ಬಿಜೆಪಿಯಿಂದ ಇಬ್ಬರು ಮಹಿಳೆಯರು ಜಯ ಕಂಡಿದ್ದಾರೆ. ಇನ್ನು ಜೆಡಿಎಸ್ನಿಂದ ಇಬ್ಬರು ಮಹಿಳೆಯರು ಶಾಸಕಿಯರಾಗಿದ್ದಾರೆ. ಇದೇ ವೇಳೆ ಪಕ್ಷೇತರ ಶಾಸಕಿಯಾಗಿ ಏಕೈಕ ಮಹಿಳೆ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಪ್ರವೇಶಿಸಿದ ಒಂಬತ್ತು ಮಹಿಳೆಯರು:
| ಅಭ್ಯರ್ಥಿ | ಪಕ್ಷ | ಕ್ಷೇತ್ರ |
| ರೂಪ ಶಶಿಧರ್ | ಕಾಂಗ್ರೆಸ್ | ಕೆಜಿಎಫ್ |
| ಕನೀಜ್ ಫಾತೀಮಾ | ಕಾಂಗ್ರೆಸ್ | ಕಲಬುರಗಿ |
| ಲಕ್ಷ್ಮೀ ಹೆಬ್ಬಾಳ್ಕರ್ | ಕಾಂಗ್ರೆಸ್ | ಬೆಳಗಾವಿ ಗ್ರಾಮೀಣ |
| ನಯನಾ ಮೋಟಮ್ಮ | ಕಾಂಗ್ರೆಸ್ | ಮೂಡಿಗೆರೆ |
| ಶಶಿಕಲಾ ಜೊಲ್ಲೆ | ಬಿಜೆಪಿ | ನಿಪ್ಪಾಣಿ |
| ಭಾಗೀರಥಿ ಮುರುಳ್ಯ | ಬಿಜೆಪಿ | ಸುಳ್ಯ |
| ಶಾರದಾ ಪೂರ್ಯನಾಯಕ್ | ಜೆಡಿಎಸ್ | ಶಿವಮೊಗ್ಗ ಗ್ರಾಮಾಂತರ |
| ಜಿ. ಕರೆಮ್ಮ | ಜೆಡಿಎಸ್ | ದೇವದುರ್ಗ |
| ಲತಾ ಮಲ್ಲಿಕಾರ್ಜುನ | ಪಕ್ಷೇತರ | ಹರಪನಹಳ್ಳಿ |
ಮುಂದಿನ ಸಿಎಂ ಯಾರು?
2013ರ ನಂತರ ಮತ್ತೊಮ್ಮೆ ಪೂರ್ಣ ಬಹುಮತ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಹಲವು ನಾಯಕರು ಸಿಎಂ ಆಕಾಂಕ್ಷಿಯಾಗಿದ್ದರೂ, ರೇಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರ ಸಭೆ ಇಂದು ಸಂಜೆ (ಭಾನುವಾರ, ಮೇ 14) 5.30ಕ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಅನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ ನಾಯಕ ನೂತನ ಮುಖ್ಯಮಂತ್ರಿಯಾಗಿ ನಾಳೆ (ಸೋಮವಾರ, ಮೇ 15) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications