ಬಹುಮತ ಬರದಿದ್ರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ-ಆರ್.ಅಶೋಕ್
ಬೆಂಗಳೂರು, ಮೇ 11: ಎಕ್ಸಿಟ್ ಪೋಲ್ ಅವರು ಒಬ್ಬೊಬ್ಬರು ಒಂದೊಂದು ರೀತಿ ಕೊಟ್ಟಿದ್ದಾರೆ. ಕೆಲವರು ಕಾಂಗ್ರೆಸ್ ಅಂದ್ರೆ, ಕೆಲವರು ಬಿಜೆಪಿ ಎಂದಿದ್ದಾರೆ, ಅಲ್ಲದೇ ಕೆಲವರು ಜೆಡಿಎಸ್ಗೆ ೪೦ ಸೀಟ್ ಕೂಡ ಕೊಟ್ಟಿದ್ದಾರೆ. ಸಮೀಕ್ಷೆಗಳಲ್ಲಿ ಅಜಗಜಾಂತರ ವ್ಯತ್ಯಾಸಗಳನ್ನು ನೋಡುತ್ತಿದ್ದೇವೆ ಎಂದು ಸಚಿವ ಆರ್.ಅಶೋಕ್ ಚುನಾವಾಣೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಅಲ್ಲೂ ಕೂಡ ಬಿಜೆಪಿಗೆ ಸರಳ ಬಹುಮತ ಎಂದು ಸಮೀಕ್ಷೆ ಕೊಟ್ಟಿದ್ದರು. ಆದರೆ ಅಲ್ಲಿ ಬಹುಮತವೇ ಬಂತು. ನಾನು ಇಡೀ ಸಮೀಕ್ಷೆನೇ ಸುಳ್ಳು ಎಂದು ಹೇಳಲ್ಲ. ಆದರೆ ನಿಜವಾದ ಫಲಿತಾಂಶ ಗೊತ್ತಾಗುವುದು 13ನೇ ತಾರೀಕು. ನಮಗೆ ಬಂದಿರುವ ವರದಿ ಪ್ರಕಾರ ನಮಗೆ ಬಹುಮತ ಸಿಕ್ಕೇ ಸಿಗುತ್ತದೆ. ಮ್ಯಾಜಿಕ್ ನಂಬರ್ 112ನ್ನು ನಾವು ದಾಟುತ್ತೇವೆ. ಅಕಸ್ಮಾತ್ ಏನಾದರೂ ಹೆಚ್ಚು ಕಮ್ಮಿ ಆದರೆ ನಮ್ಮ ಕೇಂದ್ರದ ನಾಯರಿದ್ದಾರೆ, ಈ ಬಾರಿ ಸರ್ಕಾರ ಮಾಡಲು ಏನು ಕಸರತ್ತು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಕಳೆದ ಬಾರಿ ಬಹುಮತ ಬರದಿದ್ದರೂ ಸರ್ಕಾರ ಮಾಡಿದ್ದೇವೆ. ನಮ್ಮದು ಬಹುಮತ ಬಂದೇ ಬರುತ್ತದೆ. ಒಂದು ವೇಳೆ ಬರದೇ ಇದ್ದರೆ ಬೇಕಾದ ಚುನಾವಣಾ ತಂತ್ರಗಾರಿಕೆಯನ್ನು ನಾವು ಮಾಡೇ ಮಾಡುತ್ತೇವೆ. ಆಪರೇಷನ್ ಕಮಲ ಅಂತೆನಿಲ್ಲ. ನಾವು ಮಾಡಿದರೇ ಆಪರೇಷನ್ ಕಮಲನಾ, ಜೆಡಿಎಸ್ ಕಾಂಗ್ರೆಸ್ ಮಾಡಿದರೆ ಏನು ಎಂದು ಪ್ರಶ್ನಿಸಿದ್ದಾರೆ.
ಇನ್ನು ಜನ ಹಾಗೂ ಎಲ್ಲಾ ರಾಜಕೀಯ ವ್ಯಕ್ತಿಗಳಿಗೂ ಗೊತ್ತಿದೆ. ಬಿಜೆಪಿ ಒಂದೇ ಸ್ಥಿರ ಆಡಳಿತ ಕೊಡುವುದು ಎಂದು ಜನರಿಗೆ ಗೊತ್ತಿದೆ. ಇದು ದೇಶದಲ್ಲಿರುವ ಮಾತು. ಆ ದೃಷ್ಟಿಯಿಂದ ಮೇ 13ರ ನಂತರ ನಮ್ಮ ಕೇಂದ್ರದ ನಾಯಕರು ಏನು ಸೂಚನೆ ಕೊಡುತ್ತಾರೋ ಅದನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಕೆಲಸ ನಾವು ಮಾಡುತ್ತೇವೆ ಎಂದರು.












Click it and Unblock the Notifications