ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಟಿಕೆಟ್ ಕೈತಪ್ಪಿದಕ್ಕೆ ಅಸಮಧಾನಗೊಂಡಿದ್ದ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಲಕ್ಷ್ಮಣ ಸವದಿ ಚರ್ಚೆ ಮಾಡಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್,' ಲಕ್ಷ್ಮಣ ಸವದಿ ನಮ್ಮ ಕುಟುಂಬದ ಸದಸ್ಯರಾಗಲು ಒಪ್ಪಿದ್ದಾರೆ' ಎಂದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಬೆಂಗಳೂರಿನಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದರು. ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು.

'ಲಕ್ಷ್ಮಣ್ ಸವದಿ ಅವರನ್ನು ಭೇಟಿ ಮಾಡಿದ್ದೇವೆ. ಸೌಹಾರ್ದಯುತವಾಗಿ ನಮ್ಮ ಮಾತುಕತೆ ನಡೆದಿದೆ. ಅವರು ಮಾಡಿದ ಹೋರಾಟ ನಾವೆಲ್ಲಾ ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಲಕ್ಷ್ಮಣ ಸವದಿ ನಮ್ಮ ಕುಟುಂಬದ ಸದಸ್ಯರಾಗಲು ಒಪ್ಪಿದ್ದಾರೆ' ಎಂದು ಡಿಕೆ ಶಿವಕುಮಾರ್ ಹೇಳಿದರು.
ಜೊತೆಗೆ ಇಂದು ಸಂಜೆ 4ಗಂಟೆಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರು ಹೇಳಿದರು. ನಾಲ್ಕು ಗಂಟೆಯ ನಂತರ ಹೆಚ್ಚಿ ಮಾಹಿತಿಯನ್ನು ನೀಡುತ್ತೇನೆ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ಪ್ರತಿಕ್ರಿಯೆ
ನನ್ನ ಷರತ್ತುಗಳಿಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಒಪ್ಪಿದ್ದಾರೆ. ಕಾಂಗ್ರೆಸ್ ಮುಂದೆ ನಾನು ಎರಡು ಡಿಮ್ಯಾಂಡ್ ಇಟ್ಟಿದ್ದೇನೆ. ಒಂದು ನೀರಾವರಿ ಯೋಜನೆಗಳಿಗೆ ನನ್ನ ಕ್ಷೇತ್ರಕ್ಕೆ ಅನುದಾನ ಕೊಡಬೇಕು. ಮತ್ತೊಂದು ಅಥಣಿ ಕ್ಷೇತ್ರದಿಂದ ನನಗೆ ಟಿಕೆಟ್ ಕೊಡಬೇಕು. ಇದಕ್ಕೆ ಕಾಂಗ್ರೆಸ್ ಒಪ್ಪಿದೆ. ಸಂಜೆ ನಾಲ್ಕು ಗಂಟೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನಾಲ್ಕುವರೆ ನಂತರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ಸಿದ್ದು ನಿವಾಸದಲ್ಲಿ ಲಕ್ಷ್ಮಣ ಸವದಿ ಸಭೆ ಬಳಿಕ ಹೇಳಿಕೆ ನೀಡಿದರು.
'ಬಿಜೆಪಿ ಕೊಟ್ಟ ಮಾತನ್ನು ತಪ್ಪಿದೆ. ಪಕ್ಷ ಬಿಡುತ್ತೇನೆ ಎಂದು ಹೇಳಿದಾಗಲೂ ಬಿಎಸ್ವೈ ಅವರು ನನಗೆ ಕಾಲ್ ಮಾಡಿಲ್ಲ. ನನ್ನನ್ನು ಸಂಪರ್ಕಿಸಿಲ್ಲ. ಒಂದೇ ಒಂದು ಸಮಧಾನದ ಮಾತುಗಳನ್ನು ಆಡಿಲ್ಲ. ನನಗೆ ಡಿಸಿಎಂ ಸ್ಥಾನ ನೀಡಿ ತೆಗೆದಿದ್ದು ನನಗೆ ಅವಮಾನ ಅಲ್ಲವೇ? ನಾನೇನಾದ್ರೂ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ನಾ? ಅವರು ಕೊಟ್ಟು ಯಾಕೆ? ವಾಪಸ್ಸು ಪಡೆದು ಯಾಕೆ? ಇದರಿಂದ ನನಗೆ ಬೇಸರ ಆಗುವುದಿಲ್ಲವೇ. ನಾನು ಅಥಣಿಯಿಂದಲೇ ಸ್ಪರ್ಧೆ ಮಾಡುತ್ತೇನೆ' ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
'ನನ್ನ ನಡೆಸಿಕೊಂಡ ರೀತಿ ಕೂಡ ನನಗೆ ಬೇಸರಿವಿದೆ. ಆ ಸಂದರ್ಭದಲ್ಲಿ ಸೋತಿದ್ದರೂ ದೊಡ್ಡ ಜವಬ್ದಾರಿಯನ್ನು ನೀಡಲಾಯಿತ್ತು. ಪಕ್ಷ ಬಿಡುತ್ತೇನೆ ಎಂದು ಹೇಳಿದಾಗಲೂ ಪಕ್ಷದ ಹಿರಿಯ ನಾಯಕರು ನನಗೆ ಕರೆ ಮಾಡಿ ಮಾತನಾಡಿಲ್ಲ. ಹೆಚ್ ನಾಗೇಶ್, ಶಂಕರ್ ಅವರಿಗೊಂದು ನ್ಯಾಯ. ನನಗೊಂದು ನ್ಯಾಯಾನಾ ಎಂದು ಲಕ್ಷ್ಮಣ ಸವದಿ ಪ್ರಶ್ನೆ ಮಾಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ನನಗೆ ಮೋಸವಾಗಿದೆ' ಎಂದು ಸಿಡಿಗುಂಡಿನ ಮಾತುಗಳನ್ನು ಆಡಿದ್ದಾರೆ.
ಅಥಣಿ ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ರಾಜಿನಾಮೆ ಘೋಷಿಸಿರುವ ಬೆನ್ನಲ್ಲೇ ಬೆಳಗಾವಿಯ ಇನ್ನೋರ್ವ ಬಿಜೆಪಿ ನಾಯಕ ರಾಜೀನಾಮೆಗೆ ಮುಂದಾಗಿದ್ದಾರೆ. ಬೈಲಹೊಂಗಲ ಟಿಕೆಟ್ ಆಕಾಂಕ್ಷಿಯಾಗಿದ್ದು ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಡಾ. ವಿಶ್ವನಾಥ್, ಬಿಜೆಪಿಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.












Click it and Unblock the Notifications