ನಾಮಪತ್ರ ತಿರಸ್ಕೃತವೋ, ಪುರಸ್ಕೃತವೋ: ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ಇಂದು ನಿರ್ಧಾರ
ಬೆಂಗಳೂರು, ಏಪ್ರಿಲ್. 21: ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ವಿಷಯ ಡಿಕೆ ಶಿವಕುಮಾರ್ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರ. ಎರಡು ದಿನಗಳ ಹಿಂದಷ್ಟೇ ಅಶೋಕ್ ಮತ್ತು ಡಿಕೆಸಿ ನಡುವೆ ಇದ್ದ ಪೈಪೋಟಿ ದಿಢೀರ್ ಎಂದು ಅಶೋಕ್ ಮತ್ತು ಡಿಕೆ ಸುರೇಶ್ ನಡುವೆ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಅಚ್ಚರಿಯ ಬೆಳವಣಿಗೆಯಲ್ಲಿ ಡಿಕೆ ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಹಾಗಾದರೆ, ಡಿಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸುವುದಿಲ್ಲವೆ ಎಂಬ ಪ್ರಶ್ನೆಗಳು , ಜೊತೆಗೆ ಅವರ ರಾಜಕೀಯ ಜೀವನದ ಬಗ್ಗೆ ಹಲವು ಗೊಂದಲಗಳು ಜನಸಾಮಾನ್ಯರಲ್ಲಿ ಉಂಟಾಗಿವೆ. ಈ ಗೊಂದಲಗಳಿಗೆ ಶುಕ್ರವಾರ (ಏಪ್ರಿಲ್. 21) ರಂದು ಉತ್ತರ ದೊರೆಯಲಿದೆ. ಹೌದು, ಇಂದು ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಕಾರಣ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಈ ವೇಳೆ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಡಿಕೆ ಶಿವಕುಮಾರ್ ಅವರ ನಾಮಪತ್ರ ಕೂಡ ಪರಿಶಿಲನೆ ನಡೆಯಲಿದೆ. ಈ ವೇಳೆ ನಾಮಪತ್ರ ತಿರಸ್ಕೃತವಾದರೇ ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಕೊನೆಯಾಗುವ ಸಾಧ್ಯತೆಯಿದೆ.
ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಡಿಕೆ ಬ್ರದರ್ಸ್, ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ಏಪ್ರಿಲ್ 20 ರಂದು ಸಂಸದ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆ ನಂತರ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಸಲಿದ್ದು, ಅದರಲ್ಲಿ ಲೋಪದೋಷಗಳು ಕಂಡು ಬಂದರೆ ತಿರಸ್ಕೃತ ಮಾಡಲಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆಯೇ ಡಿಕೆ ಶಿವಕುಮಾರ್ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ಆಸ್ತಿ ವಿವರದ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಿದ್ದಾರೆ. ಕಳೆದ ಐದು ವರ್ಷಗಳ ತೆರಿಗೆ ಪಾವತಿ ವಿವರವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಮಾಹಿತಿಗಳಲ್ಲಿ ವ್ಯತ್ಯಾಸ ಕಂಡುಬಂದರೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಇದೆ. ನಾಮಪತ್ರ ಪರಿಶೀಲನೆ ವೇಳೆ ಡಿಕೆಶಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರ ಇಲ್ಲವಾ ಎಂಬುದು ನಿರ್ಧಾರವಾಗಲಿದೆ.
ಮೂಲಗಳ ಮಾಹಿತಿ ಪ್ರಕಾರ ಡಿಕೆ ಶಿವಕುಮಾರ್ ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಬೇರೆಯೇ ಇದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರೋ ಮಾಹಿತಿಯೇ ಬೇರೆ ಎನ್ನಲಾಗುತ್ತಿದೆ. ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರು ನೀಡಿದರೆ ಸಂಕಷ್ಟ ಎದುರಾಗಲಿದೆ. ಇದೇ ಕಾರಣಕ್ಕೆ ಡಿಕೆಶಿ ನಾಮಪತ್ರ ತಿರಸ್ಕಾರ ಆಗುವ ಆತಂಕವಿದೆ. ಹೀಗಾಗಿಯೇ ಮುನ್ನೆಚ್ಚರಿಕೆಯಾಗಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಇಂದಿನ ನಾಮಪತ್ರ ಪರಿಶಿಲನೆ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಡಿಕೆ ಇಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಆತಂಕಗೊಳ್ಳುವಂತೆ ಮಾಡಿದೆ. ಪರಿಶೀಲನೆ ವೇಳೆ ಆಸ್ತಿ ವಿವರ, ತೆರಿಗೆ ವಿಚಾರ ಕುರಿತ ಅಂಶಗಳಲ್ಲಿ ತಪ್ಪು, ಸುಳ್ಳು ಕಂಡುಬಂದರೇ, ನಾಮಪತ್ರ ತಿರಸ್ಕಾರವಾದರೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಕನಸು ಹಾಗೆ ಮಣ್ಣಾಗಲಿದೆ.
ಒಂದು ವೇಳೆ ನಾಮಪತ್ರ ತಿರಸ್ಕಾರಗೊಂಡರೆ ಚುನಾವಣೆ ಎದುರಿಸಲು ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿ, ಕಣಕ್ಕೆ ಧುಮುಕಿದ್ದಾರೆ. ಹೀಗಾಗಿ ಕನಕಪುರವೇನೂ ಡಿಕೆ ಬ್ರದರ್ಸ್ ಕೈಯಲ್ಲಿ ಉಳಿಯಲಿದೆ. ಆದರೆ, ಇಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಜೀವನದ ಬಗ್ಗೆ ಆತಂಕ ಎದುರಾಗಿದೆ. ಇದೇ ಹಿನ್ನೇಲೆ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರ ಮತ್ತು ತಮ್ಮ ಸಹೋದರ ನಾಮಪತ್ರ ಸಲ್ಲಿಸಿದರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications