Karnataka CM Crisis: ನಾನಾಗದಿದ್ದರೂ ಪರವಾಗಿಲ್ಲ, ಸಿದ್ದು ಸಿಎಂ ಆಗ್ಬಾರ್ದು ಅನ್ನೋ ನಿರ್ಧಾರಕ್ಕೆ ಬಂದ್ರಾ ಡಿಕೆಶಿ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ಗೆ ಇದೀಗ ಮುಖ್ಯಮಂತ್ರಿ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಮೂರು ದಿನಗಳಿಂದ ಸಿಎಂ ಆಯ್ಕೆ ಕಗ್ಗಂಟು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.
ಚುನಾವಣಾ ಫಲಿತಾಂಶ ಬಂದು ನಾಲ್ಕು ದಿನಗಳು ಕಳೆದರೂ ನೂತನ ಸಿಎಂ ಆಯ್ಕೆಯಾಗದಿರುವ ಬಗ್ಗೆ ರಾಜ್ಯದ ಜನರಲ್ಲಿ ಬೇಸರ ಮೂಡಿರುವುದಂತೂ ಸತ್ಯ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ಸಂಧಾನಕ್ಕೆ ಯಾರೊಬ್ಬರೂ ಬಗ್ಗದೇ ಬಿಗಿಪಟ್ಟು ಮುಂದುವರೆಸಿದ್ದಾರೆ.

ಒಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ತಮಗೇ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಬಾರಿ ಸಿಎಂ ಸ್ಥಾನವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬುಧವಾರ ಬೆಳಗ್ಗೆಯಿಂದ ಮಾಡಿದ ಸಂಧಾನ ವಿಫಲವಾಗಿದ್ದು, ಸಿದ್ದರಾಮಯ್ಯ 2:3 ಸಂಧಾನ ಸೂತ್ರಕ್ಕೆ ಒಪ್ಪಿದರೂ, ಡಿಕೆ ಶಿವಕುಮಾರ್ ಒಪ್ಪುತ್ತಿಲ್ಲ. ತನಗೆ ಸಿಎಂ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯಗೆ ಸಿಗಬಾರದು ಅನ್ನುವ ನಿರ್ಧಾರಕ್ಕೆ ಡಿ.ಕೆ. ಶಿವಕುಮಾರ್ ಬಂದಂತಿದೆ.
ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುಂದಿಟ್ಟು ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಚೆಕ್ಮೇಟ್ ನೀಡಲು ಮುಂದಾಗಿದ್ದಾರೆ.

ಬುಧವಾರ ಬೆಳಗ್ಗೆ ರಾಹುಲ್ ಗಾಂಧಿ ನಿವಾಸದಲ್ಲಿ ಸಿದ್ದರಾಮಯ್ಯ ಮಾತುಕತೆ ನಡೆಸಿದ ಬಳಿಕ ಬೆಂಬಲಿಗರ ಜೊತೆ ಹೊರನಡೆದರು. ಈ ವೇಳೆ ಸಿದ್ದರಾಮಯ್ಯ ಬೆಂಬಲಿಗರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು. ಇದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಯಿತು. ಸಿದ್ದರಾಮಯ್ಯನವರೇ ಸಿಎಂ ಆಗಿ ನೇಮಕವಾಗಿದ್ದಾರೆ ಎಂದು ಅವರ ಪರ ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮಿಸಿದರು.
ಅತ್ತ ದೆಹಲಿಯಲ್ಲಿ ಸಿದ್ದರಾಮಯ್ಯ ಭೇಟಿ ಬಳಿಕ ರಾಹುಲ್ ಗಾಂಧಿ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದರು. ಈ ವೇಳೆ ಹೈಕಮಾಂಡ್ನ ಸಂಧಾನಕ್ಕೆ ಸೂತ್ರಕ್ಕೆ ಒಪ್ಪಿಗೆ ಸೂಚಿಸದೆ, ತನಗೇ ಸಿಎಂ ಪಟ್ಟ ನೀಡಬೇಕೆಂದು ಪಟ್ಟು ಹಿಡಿದರು.
ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದ್ದೇವೆ. ಇದರಲ್ಲಿ ಎಲ್ಲರ ಶ್ರಮವಿದೆ. ಕೊನೆಯ ಮೂರು ವರ್ಷಕ್ಕೆ ನಾನು ಸಿಎಂ ಆಗಲಾರೆ. ಈ ಹಿಂದೆ ಸಿದ್ದರಾಮಯ್ಯ ಒಂದು ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಈ ಬಾರಿ ನನಗೆ ಒಂದು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು.

ಒಂದು ವೇಳೆ ನನಗೆ ಸಿಎಂ ಸ್ಥಾನ ಸಿಗದಿದ್ದರೆ, ಸಿದ್ದರಾಮಯ್ಯ ಸಿಎಂ ಆಗುವುದನ್ನು ನಾನು ಒಪ್ಪಲಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ನನ್ನ ಸಂಪೂರ್ಣ ಬೆಂಬಲವಿದೆ ಎಂಬ ಹೊಸ ದಾಳವನ್ನು ರಾಹುಲ್ ಗಾಂಧಿಯೆದುರು ಹೊಸ ದಾಳ ಉರುಳಿಸಿದರು.
ಇದೆ ವೇಳೆ ಡಿ.ಕೆ. ಶಿವಕುಮಾರ್ ಕೆಲವು ಭಾವನಾತ್ಮಕ ವಿಚಾರಗಳನ್ನು ಹೊರಹಾಕಿದ್ದಾರೆ. ಬಳಿಕ ಸಹೋದರ ಡಿ.ಕೆ. ಸುರೇಶ್ ಅವರನ್ನು ತನ್ನ ನಿವಾಸಕ್ಕೆ ರಾಹುಲ್ ಗಾಂಧಿ ಕರೆಸಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಿದರೆ, ನನಗೆ ಡಿಸಿಎಂ ಸ್ಥಾನವೂ ಬೇಡ್, ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ನಾನು ಸರ್ಕಾರದ ಭಾಗವಾಗಿ ಇರಲ್ಲ. ಕೇವಲ ಶಾಸಕನಾಗಿಯೇ ಮುಂದುವರೆಯುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತರುವ ಮೂಲಕ ಸಿದ್ದರಾಮಯ್ಯಗೆ ಸಿಎಂ ಸ್ಥಾನವನ್ನು ತಪ್ಪಿಸಲು ಹೊಸ ದಾಳ ಬಿಟ್ಟಿದ್ದಾರೆ. ತನಗೆ ಸಿಗದ ಸಿಎಂ ಸ್ಥಾನ, ಸಿದ್ದರಾಮಯ್ಯಗೂ ಸಿಗುವುದು ಬೇಡ ಎನ್ನುವ ಲೆಕ್ಕಕ್ಕೆ ಡಿ.ಕೆ. ಶಿವಕುಮಾರ್ ಬಂದಿದ್ದಾರಾ ಎನ್ನುವ ಅನುಮಾನಗಳು ಮೂಡಿವೆ.
ಇತ್ತ ರಾಜ್ಯದ ಜನ ಸಿಎಂ ಕುರ್ಚಿ ಕಿತ್ತಾಟ ನೋಡಲಾಗದೇ ರೋಸಿ ಹೋಗಿದ್ದಾರೆ. ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದರೂ ಇನ್ನೂ ಸರ್ಕಾರ ರಚನೆಯಾಗಿಲ್ಲ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಪ್ರಮುಖ ಐದು ಉಚಿತ ಭರವಸೆಗಳನ್ನು ಯಾವಾಗ ಜಾರಿಗೆ ತರುತ್ತಾರೋ ಎಂದು ಕಾದು ಕುಳಿತ್ತಿದ್ದಾರೆ.












Click it and Unblock the Notifications