ಜೂ.1 ರಂದೇ ಸಿಇಟಿ ಪರೀಕ್ಷೆ 2015 ಫಲಿತಾಂಶ
ಬೆಂಗಳೂರು, ಮೇ.31: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಪರೀಕ್ಷೆ ಫಲಿತಾಂಶ ಜೂನ್ 1 ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿ ಗಂಗಾಧರಯ್ಯ ಘೋಷಿಸಿದ್ದಾರೆ. ಈ ಮೊದಲು ಮೇ 26ರಂದು ಸಿಇಟಿ ಫಲಿತಾಂಶ ಪ್ರಕಟವಾಗಬೇಕಿತ್ತು.
2ನೇ ಪಿಯುಸಿ ಫಲಿತಾಂಶ ಗೊಂದಲ ಹಾಗೂ ಅನಿವಾರ್ಯ ಕಾರಣಗಳಿಂದ ಮೇ.26ರಂದು ಪರೀಕ್ಷೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಲಿಲ್ಲ. ಜೂ,1 ರಂದು ಮಧ್ಯಾಹ್ನ 12 ಗಂಟೆ ನಂತರ ಅಧಿಕೃತ ವೆಬ್ ತಾಣಗಳಾದ (http://kea.kar.nic.in/cet_2015.htm ಹಾಗೂ http://karresults.nic.in/) ಸೇರಿದಂತೆ ಕೆಲ ವೆಬ್ ಸೈಟ್ ಗಳಲ್ಲಿ ಮಾತ್ರ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಗಂಗಾಧರಯ್ಯ ಹೇಳಿದ್ದಾರೆ. [ಸಿಇಟಿಗೂ ಗ್ರೇಸ್ ಮಾರ್ಕ್, ತಾತ್ಕಾಲಿಕ ಉತ್ತರ ಇಲ್ಲಿದೆ]
ಫಲಿತಾಂಶದ ಜೊತೆಗೆ ಮುಂದಿನ ಪ್ರಕ್ರಿಯೆಗಳ ವೇಳಾಪಟ್ಟಿಯೂ ಕೂಡಾ ಬದಲಾಗಿದ್ದು, ಎಲ್ಲಾ ವಿವರಗಳು ಸದ್ಯದಲ್ಲೇ ಸಿಇಟಿ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. [ಪಿಯು ಫಲಿತಾಂಶ ಗೊಂದಲವಿದ್ದರೆ ಅರ್ಜಿ ಸಲ್ಲಿಸಿ]

ಈ ಬಾರಿ ಕರ್ನಾಟಕ ಸಿಇಟಿ ಮೇ 12 ಹಾಗೂ 13 ರಂದು ನಡೆಸಲಾಯಿತು. ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ಮೆಡಿಕಲ್, ಡೆಂಟಲ್ ಅಥವಾ ಇಂಜಿನಿಯರಿಂಗ್ ಪೂರ್ಣಾವಧಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. [ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]
ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳು ಕಂಡು ಬಂದಿದ್ದರಿಂದ ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಕೃಪಾಂಕ ನೀಡಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿತ್ತು. ಪ್ರಾವಿಷನಲ್ ಕೀ ಉತ್ತರಗಳನ್ನು ಪಡೆಯಲು ಪ್ರಾಧಿಕಾರದ ಅಧಿಕೃತ ವೆಬ್ ತಾಣದಲ್ಲಿ ಲಭ್ಯವಿದೆ.
ಪಿಯು ಗೊಂದಲಕ್ಕೆ ಸಹಾಯವಾಣಿ: ಪಿಯುಸಿ ಪರೀಕ್ಷೆ ಬಗ್ಗೆ ಗೊಂದಲವಿದ್ದಲ್ಲಿ ಬಗೆಹರಿಸುವ ಸಂಬಂಧ ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 080 - 2308 3900ಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.
ರೈತರ ಮಕ್ಕಳಿಗೆ ಕೃಷಿ ಕೋಟಾ ಮೀಸಲಾತಿಯನ್ನು ಶೇ.23.8ರಿಂದ ಶೇ.40ಕ್ಕೆ ಹೆಚ್ಚಿಸಲಾಗಿದೆ.ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಕೇಂದ್ರ ಆರಂಭಿಸಿದ್ದು , 080-2346 0460ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.(ಒನ್ ಇಂಡಿಯಾ ಸುದ್ದಿ)












Click it and Unblock the Notifications