ಮನರೇಗಾ ಹೊರಗುತ್ತಿಗೆ ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ
ಬೆಂಗಳೂರು, ಜನವರಿ 17: ಮನರೇಗಾ ಅಡಿಯಲ್ಲಿ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಾಗಿ ಸಮೂಹ ಆರೋಗ್ಯ ವಿಮಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ , ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGS) ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ನಮ್ಮ ಅಮೂಲ್ಯ ಮಾನವ ಸಂಪನ್ಮೂಲವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ ಎಂದಿದ್ದಾರೆ.

ಮನರೇಗಾ ಅಡಿಯಲ್ಲಿ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ 3,352ಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿಗಾಗಿ ಸಮೂಹ ಆರೋಗ್ಯ ವಿಮಾ ಯೋಜನೆಗೆ ಅನುಮೋದನೆ ನೀಡಿದ ಸಂಪುಟಕ್ಕೆ ಕೃತಜ್ಞನಾಗಿದ್ದೇನೆ. ಈ ಯೋಜನೆಗೆ ಅಂದಾಜು ₹25 ಕೋಟಿಗೂ ಅಧಿಕ ವೆಚ್ಚವಾಗಲಿದ್ದು, ಇಎಸ್ಐ ವ್ಯಾಪ್ತಿಗೆ ಒಳಪಡದ ನೌಕರರಿಗೆ ಆರೋಗ್ಯ ವಿಮೆಯನ್ನು ಒದಗಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅನೇಕ ಉದ್ಯೋಗಿಗಳು ಸೂಕ್ತ ಹಣಕಾಸಿನ ರಕ್ಷಣೆ ಇಲ್ಲದ ಕಾರಣ ಆರೋಗ್ಯ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಈ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ, ಅವರಿಗೆ ಹಾಗೂ ಅವರ ಕುಟುಂಬಗಳಿಗೆ ವೈದ್ಯಕೀಯ ತುರ್ತು ಸನ್ನಿವೇಶಗಳು ಆರ್ಥಿಕವಾಗಿ ಹೊರೆಯಾಗುವುದನ್ನು ತಪ್ಪಿಸಲು ನಾವು ಅವರ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಸುರಕ್ಷತೆಯನ್ನು ಒದಗಿಸುತ್ತಿದ್ದೇವೆ ಎಂದು ಸಚಿವರು ವಿವರಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಎಐ ತಂತ್ರಜ್ಞಾನ ಇನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಪಾರದರ್ಶಕತೆ ತರಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವನ್ನು ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು, ಗ್ರಾಮೀಣಾಭಿವೃದ್ಧಿಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ಹಾಗೂ ಗ್ರಾಮಗಳ ಮಟ್ಟದಲ್ಲೂ ಆಧುನಿಕ ತಂತ್ರಜ್ಞಾನವನ್ನು ಕೊಂಡೊಯ್ಯುವುದು ನನ್ನ ಪ್ರಮುಖ ಆಶಯ ಎಂದಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವನಾಗಿ ಈ ಆಶಯವನ್ನು ಕಾರ್ಯರೂಪಕ್ಕೆ ತರುವುದು ನನಗೆ ಸಂತೋಷದ ಸಂಗತಿ. ತಂತ್ರಜ್ಞಾನದ ಬಳಕೆಯಿಂದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು ನನ್ನ ನಂಬಿಕೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಪಾರದರ್ಶಕತೆ ತರಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವನ್ನು ಅಳವಡಿಸಿದೆ.
ಸಮುದಾಯ ಕಾಮಗಾರಿಗಳಲ್ಲಿ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂಬ ನಿಖರವಾದ ಲೆಕ್ಕವನ್ನು ಹೆಡ್ ಕೌಂಟ್ ವ್ಯವಸ್ಥೆ ಮೂಲಕ ಎಐ ತಂತ್ರಾಂಶವೇ ದಾಖಲಿಸಿಕೊಳ್ಳುತ್ತದೆ. ಇಲಾಖೆಯ ಈ ಪ್ರಯತ್ನದ ಫಲವಾಗಿ ಮನರೇಗಾದ ಕೂಲಿ ಹಣ ಸೋರಿಕೆಯಾಗುವ ಸಮಸ್ಯೆಗೆ ಕಡಿವಾಣ ಬೀಳಲಿದೆ.
ಮನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜೊತೆಗೆ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಗಮನ ಸೆಳೆಯುತ್ತಿದೆ. ಅಧಿಕ ಉದ್ಯೋಗ ಸೃಷ್ಟಿ ಹಾಗೂ ಹೆಚ್ಚಿನ ಕೂಲಿ ದರ ಒದಗಿಸುವುದರಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಈಗ ಹಾಜರಾತಿ ಲೋಪಗಳು, ಕೂಲಿ ಹಣ ದುರ್ಬಳಕೆಯ ಸಾಧ್ಯತೆಗಳನ್ನು ತಪ್ಪಿಸಲು ಎಐ ತಂತ್ರಾಂಶ ಜಾರಿ ಮೂಲಕ ನಮ್ಮ ಇಲಾಖೆ ಮಾದರಿ ಹೆಜ್ಜೆ ಇರಿಸಿದೆ. ಈ ರೀತಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಇಲಾಖೆ ಎಂಬ ಹೆಗ್ಗಳಿಕೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಾತ್ರವಾಗಿದೆ ಎಂದು ಸಚಿವರು ಖುಷಿ ಹಂಚಿಕೊಂಡಿದ್ದಾರೆ.












Click it and Unblock the Notifications