ಆಂಧ್ರದಲ್ಲಿ ಕರ್ನಾಟಕ ಬಿಜೆಪಿ ನಾಯಕನ ಬರ್ಬರ ಹತ್ಯೆ, ಕೋರ್ಟ್ ಬಳಿ ಕಿಡ್ನ್ಯಾಪ್ ಮಾಡಿ ಕೃತ್ಯ!
ರಾಜ್ಯ ಬಿಜೆಪಿ ನಾಯಕ ಹಾಗೂ ಅವರ ತಂದೆ ಆಂಧ್ರಪ್ರದೇಶಕ್ಕೆ ತೆರಳಿದ್ದಾಗ ಘನಘೋರ ಘಟನೆ ನಡೆದಿದೆ. ಪ್ರಕರಣವೊಂದರಲ್ಲಿ ಕೋರ್ಟ್ನಲ್ಲಿ ಹಾಜರಾಗಲು ಆಂಧ್ರಕ್ಕೆ ತೆರಳಿದ್ದ ಇವರನ್ನು ಕೋರ್ಟ್ ಬಳಿಯಿಂದಲೇ ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿರುವ ವಿಚಾರ ಬೆಚ್ಚಿಬೀಳಿಸುವಂತಿದೆ. ಮೃತರು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಎಂದು ತಿಳಿದುಬಂದಿದೆ.
ಬೆಂಗಳೂರಿನ ಉದ್ಯಮಿ ವೀರಸ್ವಾಮಿ ರೆಡ್ಡಿ ಹಾಗೂ ಅವರ ಪುತ್ರ, ಬಿಜೆಪಿ ಯುವ ಮೋರ್ಚಾ ನಾಯಕ ಪ್ರಶಾಂತ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಸಾವಿಗೀಡಾಗಿದ್ದಾರೆ. ದುರಂತ ಘಟನೆ ನಡೆದಿದೆ. ಇವರಿಬ್ಬರನ್ನು ಆಂಧ್ರದ ಪಾಳನಾಡು ಜಿಲ್ಲೆಯ ನರಸರಾಜಪೇಟ ಕೋರ್ಟ್ ಬಳಿ ಬುಧವಾರ ಅಪಹರಿಸಲಾಗಿದ್ದು, ನಂತರ ಬಪಟ್ಲ ಜಿಲ್ಲೆ ಶಾಂತಮಗುಲುರು ಬಳಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ವೀರಸ್ವಾಮಿ ಮತ್ತು ಪ್ರಶಾಂತ್ ರೆಡ್ಡಿ ತಮ್ಮ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಕೋರ್ಡ್ನಲ್ಲಿ ಹಾಜರಾಗಲು ಪಾಳನಾಡು ಜಿಲ್ಲೆಯ ನರಸರಾಜಪೇಟೆಗೆ ತೆರಳಿದ್ದರು. ಕೋರ್ಟ್ ಬಳಿಯ ಟಿಫನ್ ಸೆಂಟರ್ನಿಂದ ಇಬ್ಬರನ್ನು ಅಪರಿಚಿತರು ಕಿಡ್ನ್ಯಾಪ್ ಮಾಡಿದ್ದರು. ಕೆಲವು ಗಂಟೆಗಳ ಬಳಿಕ ಬಪಟ್ಲ ಜಿಲ್ಲೆಯಲ್ಲಿ ಅವರ ಮೃತದೇಹ ಸಿಕ್ಕಿದ್ದು, ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಶಾಂತ್ ರೆಡ್ಡಿ ಬಿಜೆಪಿಯ ಯುವ ಮೋರ್ಚಾ ಸದಸ್ಯರಾಗಿದ್ದು, ಅವರ ನಾಪತ್ತೆ ಮತ್ತು ಕೊಲೆ ಸಂಬಂಧ ಅತ್ಯಂತ ಸೂಕ್ಷ್ಮ ತನಿಖೆ ಈಗ ನಡೆಯುತ್ತಿದೆ. ಪಾಳನಾಡು ಮತ್ತು ಬಪಟ್ಲ ಜಿಲ್ಲೆಗಳ ಪೊಲೀಸರು ಜಂಟಿಯಾಗಿ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ. ಕಿಡ್ನ್ಯಾಪ್ಗೆ ಬಳಕೆಯಾದ ವಾಹನವನ್ನು ಗುರುತಿಸಲು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೃತರಿಗೆ ವಿಜಯೇಂದ್ರ ಸಂತಾಪ
ಈ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರು ಹತ್ಯೆಗೀಡಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ದುಃಖಕರ, ಈ ದುರ್ಘಟನೆಯನ್ನು ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಕೊಲೆಗಡುಕರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಲಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ. ಮೃತರ ಕುಟುಂಬ ವರ್ಗದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದಿದ್ದಾರೆ.
ಪ್ರಶಾಂತ್ ರೆಡ್ಡಿ ನಿಧನಕ್ಕೆ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಕಂಬನಿ ಮಿಡಿದಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ವೀರಸ್ವಾಮಿ ರೆಡ್ಡಿ ಅವರ ಮತ್ತು ಅವರ ಪುತ್ರ, ಯುವ ನಾಯಕ ಕೆ.ವಿ.ಪ್ರಶಾಂತ್ ರೆಡ್ಡಿ ಅವರ ಭೀಕರ ಹತ್ಯೆ ತೀವ್ರ ಆಘಾತ ಮತ್ತು ದುಃಖವನ್ನುಂಟು ಮಾಡಿದೆ. ಆಂಧ್ರಪ್ರದೇಶ ಪೊಲೀಸರು ಅಪರಾಧಿಗಳನ್ನು ತ್ವರಿತವಾಗಿ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರತಾಪ್ ಸಿಂಹ ಕೂಡ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ಪಿಸಿ ಮೋಹನ್, ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.












Click it and Unblock the Notifications