ಮಜವಾದಿ ಸಿದ್ದರಾಮಯ್ಯ ಸುಳ್ಳು ಆರೋಪಕ್ಕೆ ಕಾರ್ಯಕರ್ತನೇ ಉತ್ತರ ಕೊಡ್ತಾನೆ- ಬಿಜೆಪಿ
ಬೆಂಗಳೂರು, ಜನವರಿ 18: ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಹಿರಂಗ ಚರ್ಚೆಗೆ ಕಡೆದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸುಳ್ಳು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರೇ, ನಿಮ್ಮಂತೆ ಹೀಗೆ ಕಾಲಹರಣ ಮಾಡುವುದಕ್ಕೆ ಸದಾ ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತಿರುವ ಪ್ರಧಾನ ಮಂತ್ರಿಗಳಿಗೆ ಸಮಯವಿಲ್ಲ. ನಿಮ್ಮ ಈ ಉದ್ಧಟತನದ ಸುಳ್ಳು ಆರೋಪಗಳಿಗೆ ಬಿಜೆಪಿ ಕಾರ್ಯಕರ್ತನೇ ಉತ್ತರ ಕೊಡುತ್ತಾನೆ ಎಂದು ಎದುರೇಟು ನೀಡಿದೆ.

ಜೀವನದುದ್ದಕ್ಕೂ ಈ ರೀತಿ ಸುಳ್ಳು ಹೇಳುತ್ತಾ ರಾಜಕಾರಣ ಮಾಡಿ ಅಭ್ಯಾಸವಿರುವ ತಾವು, ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಇಲ್ಲಸಲ್ಲದ ದತ್ತಾಂಶವನ್ನು ಆವಿಷ್ಕರಿಸಿ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಅಂದುಕೊಂಡಿದ್ದೀರಿ. ಆದರೆ ಸತ್ಯ ಇಲ್ಲಿದೆ ನೋಡಿ ಎಂದು ಬಿಜೆಪಿ ಕೆಲವು ಅಂಶಗಳನ್ನು ಉಲ್ಲೇಖಿಸಿದೆ.
* ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಡುತ್ತಿಲ್ಲ ಎಂಬ ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿರುವ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಬಂದಿರುವ ಅನುದಾನಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ತಿಳಿಯದೇ ಇರುವ ವಿಷಯವೇನಲ್ಲ.

* ಕೇಂದ್ರದ ಮೋದಿ ಸರ್ಕಾರವೂ ಅರ್ಟಿಕಲ್ 280 ಅಡಿಯಲ್ಲಿ ನಿಗದಿತ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. 14 ಬಾರಿ ಬಜೆಟ್ ಮಂಡಿಸಿರುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರಿಗೆ ಈ ಹಿಂದೆಯೇ ಜಿಎಸ್ಟಿ ಮಂಡಳಿಯ ಸದಸ್ಯರಾಗಿದ್ದರೂ ಈ ಸಾಮಾನ್ಯ ಜ್ಞಾನವಿಲ್ಲದಿರುವುದು ದುರಂತ.
* 2014-24 ರಲ್ಲಿ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ₹2,82,791 ಕೋಟಿ ನೀಡಿದ್ದು, ಇದು 2004-14ರ ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ 245.7% ಹೆಚ್ಚಾಗಿದೆ. 9 ವರ್ಷಗಳ ಅವಧಿಯಲ್ಲಿ ಒಟ್ಟು ತೆರಿಗೆ ಹಂಚಿಕೆ ₹2,92,789 ಕೋಟಿಯನ್ನು ಮೋದಿ ಸರ್ಕಾರ ನೀಡಿದೆ.
* ಸಬ್ ಅರ್ಬನ್ ರೈಲಿನ ಬಗ್ಗೆ ಮಾತಾನಾಡುವ ಮಜವಾದಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಟ್ರಾಫಿಕ್ ನಿರ್ವಹಣೆಗೆ ಶೇ. 70 ರಷ್ಟು ಅನುದಾನ ಕಡಿಮೆ ಮಾಡಿ ಸಾರಿಗೆ ವ್ಯವಸ್ಥೆಯನ್ನೇ ಕುಲಗೆಡಿಸಿದ್ದಾರೆ. ಮೋದಿ ಸರ್ಕಾರ ಸಬ್ ಅರ್ಬನ್ ಯೋಜನೆಗೆ ಅನುದಾನ ನೀಡಿದ್ದರೂ ರಾಜ್ಯ ಸರ್ಕಾರದಿಂದ ನಯಾ ಪೈಸೆ ಬಂಡವಾಳ ಹೂಡಿಕೆ ಮಾಡದೆ, ಕುಂಭಕರ್ಣ ನಿದ್ದೆಯಲ್ಲಿರುವುದು ನಾಚಿಕೆಗೇಡು.
* 15ನೇ ಹಣಕಾಸು ಆಯೋಗದ ಹಣಕಾಸು ಹಂಚಿಕೆಯಂತೆ ಇಲ್ಲಿಯವರೆಗೂ ₹116,828 ಕೋಟಿಯನ್ನು ನೀಡುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಕರ್ನಾಟಕಕ್ಕೆ ಬರುತ್ತಿದ್ದ ತೆರಿಗೆಗೆ ಪ್ರತಿರೂಪವಾಗಿ ಮೋದಿ ಸರ್ಕಾರದಿಂದ 60% ಹೆಚ್ಚುವರಿ ತೆರಿಗೆಯ ಹಣ ಕರ್ನಾಟಕಕ್ಕೇ ವಾಪಸ್ ಸಿಗುತ್ತಿದೆ.
* ಕಾಂಗ್ರೆಸ್ ಸರ್ಕಾರ ದಶಕಗಳ ಕಾಲದಿಂದ ಪೋಷಿಸಿಕೊಂಡು ಬಂದಿದ್ದ ಮಧ್ಯವರ್ತಿಗಳು ಹಾಗೂ ಕಮಿಷನ್ ಏಜೆಂಟರ ದಬ್ಬಾಳಿಕೆಯನ್ನು ಕೊನೆಗೊಳಿಸಿದ್ದೇ ಮೋದಿ ಸರ್ಕಾರ. ಕೇಂದ್ರ ಸರ್ಕಾರ ₹100 ಬಿಡುಗಡೆ ಮಾಡಿದರೆ ಅದರಲ್ಲಿ ₹15 ಮಾತ್ರವೇ ಫಲಾನುಭವಿಗಳ ಪಾಲಾಗುತ್ತದೆ ಎಂದು ಕಾಂಗ್ರೆಸ್ಸಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಅದೀಗ ಗತಕಾಲದ ಇತಿಹಾಸ, ಏಕೆಂದರೆ ಮೋದಿ ಸರ್ಕಾರ ಬಿಡುಗಡೆ ಮಾಡುವ ನೂರಕ್ಕೆ ನೂರು ರೂಪಾಯಿ ಕೂಡ ಕಟ್ಟ ಕಡೆಯ ಫಲಾನುಭವಿಗಳ ಜೇಬು ಸೇರುತ್ತಿದೆ.
* ಆದರೆ ತನ್ನ ಹಳೆಯ ಪರಂಪರೆಯನ್ನೇ ರಾಜ್ಯದಲ್ಲಿ ಮರು ಅಸ್ತಿತ್ವಕ್ಕೆ ತಂದಿರುವ ಕಾಂಗ್ರೆಸ್ ಸರ್ಕಾರ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಈ ಎಟಿಎಂನಿಂದ ಸಂಗ್ರಹವಾಗುವ ಮೊತ್ತವನ್ನು ದೆಹಲಿಗೆ ಕೊಂಡೊಯ್ಯಲು ಪ್ರತಿ ತಿಂಗಳೂ ಸುರ್ಜೇವಾಲಾ ಅವರು ಬಂದು ಹೋಗುತ್ತಿದ್ದಾರೆ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿರುವ SCSP-TSP ಯ ₹11 ಸಾವಿರ ಕೋಟಿ ಅನುದಾನವನ್ನು ಸಿದ್ದರಾಮಯ್ಯರವರ ಸರ್ಕಾರ ತನ್ನ ಅವೈಜ್ಞಾನಿಕ ಆರ್ಥಿಕ ನೀತಿಗಳಿಗೆ ಪೋಲು ಮಾಡಿದೆ.
* ಖಜಾನೆ ಖಾಲಿ ಮಾಡಿಕೊಂಡು ಗಾಢ ನಿದ್ದೆಯಲ್ಲಿರುವ ಮಜವಾದಿ ಸಿದ್ದರಾಮಯ್ಯ ಅವರಿಗೆ ಏಕಾಏಕಿ ಮುಳುಗುವ ದೋಣಿಯಲ್ಲಿ ಎಚ್ಚರವಾಗಿದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇದೀಗ ಬೃಹನ್ನಳೆ ನಾಟಕ ಪ್ರದರ್ಶನಕ್ಕೆ ವಂದಿ ಮಾಗಧರನ್ನು ಸೆಳೆಯುತ್ತಿದ್ದಾರೆ. ಐಟಿ ಸೆಲ್ ಒಳಗೆ ಕೂತು ನಕಲಿ ಫೋಟೋ ಸೃಷ್ಟಿಸುವ ಮಜವಾದಿ ಸಿದ್ದರಾಮಯ್ಯ ಅವರಿಗೆ ಸದಾ ಶಿವನಿಗೆ ಅದೇ ಧ್ಯಾನವೆಂದರೆ ತಪ್ಪಾಗಲಾರದು.












Click it and Unblock the Notifications