ರಾಜ್ಯ ಬಿಜೆಪಿ ನಾಯಕರಿಗೆ ತೇಜಸ್ವಿನಿ ಅನಂತ್ ಕುಮಾರ್ 'ನೀತಿಪಾಠ'
ಬೆಂಗಳೂರು, ಆಗಸ್ಟ್ 27: ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ, ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಯ ನಂತರ, ರಾಜ್ಯ ಬಿಜೆಪಿ ಮುಖಂಡರಲ್ಲಿ ಅಸಮಾಧಾನದ ಹೊಗೆ, ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಪರೋಕ್ಷವಾಗಿ ಕಾಣುತ್ತಿದೆ.
ಸಿಗಬೇಕಾದ ಮರ್ಯಾದೆ ಸಿಗದ ಸಚಿವರ ಬೆಂಬಲಿಗರು ಸಿಟ್ಟಾಗಿದ್ದಾರೆ. ಸಂಬಂಧಪಟ್ಟ ಮುಖಂಡರ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದನ್ನು ಬಿಟ್ಟು, ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ, ಸಾರ್ವಜನಿಕರು ತೊಂದರೆ ಪಡುವಂತಾಗಿದೆ.
ಬಿಜೆಪಿ ಮುಖಂಡರ ಆಂತರಿಕ ಬೇಗುದಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಬಿಜೆಪಿ ನಾಯಕಿ, ಅದಮ್ಯ ಚೇತನ ಟ್ರಸ್ಟ್ ಮುಖ್ಯಸ್ಥೆಯಾಗಿರುವ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದಾರೆ.
Recommended Video

ಅವರು ಮಾಡಿರುವ ಟ್ವೀಟ್ ಹೀಗಿದೆ, "370 ಮತ್ತು 35ಎ ತೆಗೆದುಹಾಕಿ ಅಖಂಡ ಭಾರತದ ಕನಸನ್ನು ನನಸು ಮಾಡುತ್ತಿರುವ ಮೋದಿ ನಾಯಕತ್ವವನ್ನು ಗಟ್ಟಿಗೊಳಿಸಲು ಕರ್ನಾಟಕ ಭಾಜಪಾದ ಎಲ್ಲಾ ಕಾರ್ಯಕರ್ತರು ನಿಸ್ವಾರ್ಥವಾಗಿ ಕೆಲಸ ಮಾಡೋಣ, ಒಳಜಗಳ ಬದಿಗಿಟ್ಟು ಭಾರತವನ್ನು ವಿಶ್ವಗುರು ವಾಗಿಸಲು ಪ್ರತಿಜ್ಞೆ ಮಾಡೋಣ. @BJP4Karnataka"
ತೇಜಸ್ವಿನಿ ಅನಂತ್ ಕುಮಾರ್ ಅವರ ಈ ಮೇಲಿನ ಟ್ವೀಟ್ ನಲ್ಲಿ, ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದಂತೂ ಅತ್ಯಂತ ಸ್ಪಷ್ಟವಾಗುತ್ತದೆ. ಖಾತೆ ಹಂಚಿಕೆ, ಮತ್ತಿತ್ತರ ಸಮಸ್ಯೆಗಳು, ಮುಂದಿನ ದಿನಗಳಲ್ಲಿ ಸ್ಪೋಟಗೊಳ್ಳಲಿದೆಯೋ ಅಥವಾ ಅಮಿತ್ ಶಾ, ಎಲ್ಲವನ್ನೂ ಹಿಸುಕಿ ಹಾಕಲಿದ್ದಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಮಾಜಿ ಸಚಿವ, ಕುಂದಗೋಳ ಕ್ಷೇತ್ರದ "ಕಾಂಗ್ರೆಸ್ ಮುಖಂಡ ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ಒತ್ತಡವೇ ಕಾರಣ" ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಅದಕ್ಕೆ, ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದರು.
"ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದು ನಾಲಗೆ ಹರಿಬಿಟ್ಟಿರುವ ಬಿಜೆಪಿ ನಾಯಕರೇ, ದಿ.ಅನಂತಕುಮಾರ್ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ. ಎಲ್ಲವನ್ನೂ ಸಹಿಸಿಕೊಂಡಿರುವ ಧೈರ್ಯವಂತ ಹೆಣ್ಣುಮಗಳು ತೇಜಸ್ವಿನಿಯವರು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ" ಎಂದು ಸಿದ್ದರಾಮಯ್ಯ, ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications