ದೀಪಾವಳಿ: ಕರ್ನಾಟಕದಲ್ಲಿ ಎಲ್ಲಾ ಮಾದರಿ ಪಟಾಕಿಗಳಿಗೆ ನಿಷೇಧ
ಬೆಂಗಳೂರು, ನವೆಂಬರ್ 06: ಕರ್ನಾಟಕದಲ್ಲಿ ದೀಪಾವಳಿ ವೇಳೆ ಎಲ್ಲಾ ಮಾದರಿಯ ಪಟಾಕಿಗಳನ್ನು ಸರ್ಕಾರ ನಿಷೇಧಿಸಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮಾಡಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಯಲ್ಲಿ ಪಟಾಕಿಗಳಿಗೆ ನಿಷೇಧ: ಅರವಿಂದ್ ಕೇಜ್ರಿವಾಲ್
ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವ ನಿರ್ಧಾರಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಸಂಪ್ರದಾಯವಾದಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
ಪಟಾಕಿ ಸಿಡಿಸುವುದರಿಂದ ಪರಿಸರ ಹಾನಿ ಆಗುತ್ತದೆ ಎಂದರೆ ಪರಿಸರಕ್ಕೆ ಹಾನಿಯಾಗುವ ಎಲ್ಲವನ್ನೂ ನಿಷೇಧ ಮಾಡಿ ಎಂಬುವುದು ಸಂಪ್ರದಾಯವಾದಿಗಳ ವಾದವಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಶೀಘ್ರವೇ ಸರ್ಕಾರ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದ್ದಾರೆ.
ಇನ್ನೂ ಸರ್ಕಾರದ ನಿರ್ಧಾರದಿಂದ ಪಟಾಕಿ ಮಾರಾಟಗಾರರಿಗೆ ಮತ್ತು ಪಟಾಕಿ ಖರೀದಿಸಿದ್ದವರಿಗೆ ಆಘಾತವಾಗಿದೆ. ಕೊವಿಡ್ ಕಾರಣದಿಂದಾಗಿ ರಾಜಸ್ಥಾನದಲ್ಲಿ ಈಗಾಗಲೇ ಪಟಾಕಿ ನಿಷೇಧ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿಯಲ್ಲಿ ಸರ್ಕಾರ ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನಷ್ಟೇ ಉಪಯೋಗ ಮಾಡಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಪಟಾಕಿ ನಿಷೇಧದ ಕುರಿತಾಗಿ ತಜ್ಞರು ಸಲಹೆ ನೀಡಿದ್ದರು.
Recommended Video
ಹೋಂ ಐಸೋಲೇಷನ್ನಲ್ಲಿರುವ ಕೊವಿಡ್ ರೋಗಿಗಳಿಗೆ ಪಟಾಕಿ ಹೊಗೆಯಿಂದ ಹಾಗೂ ಅದು ಸೃಷ್ಟಿಸುವ ವಾಯು ಮಾಲಿನ್ಯದಿಂದ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಪಟಾಕಿ ನಿಷೇಧಿಸುವಂತೆ ಸಲಹೆ ನೀಡಿದ್ದರು. ತಜ್ಞರ ಸಲಹೆಗೆ ಒಪ್ಪಿಗೆ ಸೂಚಿಸಿದ ಸರ್ಕಾರ ಇದೀಗ ಪಟಾಕಿ ನಿಷೇಧ ಮಾಡಿದೆ.