ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 49% ಮತ: ಸಮೀಕ್ಷೆ
ಬೆಂಗಳೂರು, ಜನವರಿ 26: 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 49 ಮತಗಳನ್ನು ಪಡೆಯಲಿದೆ ಎಂದು ಲೋಕನೀತಿ-ಸಿಎಸ್ ಡಿಎಸ್ ಸಮೀಕ್ಷೆ ಹೇಳಿದೆ. ಬಿಜೆಪಿ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಿದ್ದು ಶೇಕಡಾ 27 ಮತಗಳನ್ನು ಹಾಗೂ ಜೆಡಿಎಸ್ ಶೇಕಡಾ 20 ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಭಾಗವಾಗಿ ಕರ್ನಾಟಕದಲ್ಲ ಸಮೀಕ್ಷೆ ನಡೆಸಲಾಗಿದೆ. ಹಾಲಿ ಸರಕಾರದ ಪ್ರಮುಖ 4 ಸಾಧನೆಗಳನ್ನು ಈ ಸಮೀಕ್ಷೆಯಲ್ಲಿ ಒರೆಗೆ ಹಚ್ಚಲಾಗಿದೆ. ಲೋಕನೀತಿಯ ರಾಷ್ಟ್ರೀಯ ಸಹ ಆಯೋಜಕ ಡಾ ಸಂದೀಪ್ ಶಾಸ್ತಿಗಳ ಸಂಪೂರ್ಣ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಂದೀಪ್ ಶಾಸ್ತ್ರಿ ಬೆಂಗಳೂರಿನ ಜೈನ್ ಡೀಮ್ಸ್ ವಿವಿಯ ಉಪಕುಲಪತಿಗಳಾಗಿದ್ದಾರೆ.
ಬೆಂಗಳೂರಿಗರು ಅತೃಪ್ತರು
ಕಾಂಗ್ರೆಸ್ ಸರಕಾರದ ಬಗ್ಗೆ ಬೆಂಗಳೂರಿಗರಿಗೆ ಅಷ್ಟಾಗಿ ಪ್ರೀತಿಯಿಲ್ಲ. ಶೇಕಡಾ 55ರಷ್ಟು ಜನರು ಸಿದ್ದರಾಮಯ್ಯ ಸರಕಾರದಿಂದ ಸಂಪೂರ್ಣ ನಿರಾಸೆಯಾಗಿದೆ ಎಂದು ಹೇಳಿದ್ದರೆ, ಶೇಕಡಾ 11ರಷ್ಟು ಜನರು ಮಾತ್ರ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಉಳಿದವರು ಪರವಾಗಿಲ್ಲ ಎಂದಿದ್ದಾರೆ.
ಸಣ್ಣ ಪಟ್ಟಣಗಳಲ್ಲಿ ಕಾಂಗ್ರೆಸ್ ಗಿದೆ ಬೆಂಬಲ
ಸಣ್ಣ ಪಟ್ಟಣಗಳಲ್ಲಿ ಕಾಂಗ್ರೆಸ್ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲೂ ಪ್ರಭಾವಶಾಲಿಯಲ್ಲದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ಈ ಸರಕಾರದ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ.
ಮುಂಬೈ ಕರ್ನಾಟಕ, ಹೈದರಾಬಾದ್ ಮತ್ತು ದಕ್ಷಿಣ ಕರ್ನಾಟಕದ ಜನರು ಸರಕಾರದ ಸಾಧನೆ ತೃಪ್ತಿ ತಂದಿದೆ ಎಂದಿದ್ದಾರೆ. ಜನವರಿ 10 ಮತ್ತು 15ರ ಮಧ್ಯದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 878 ಜನರನ್ನು ಸಂಪರ್ಕಿಸಲಾಗಿದೆ.ಜನಗಣತಿಯ ಮಾಹಿತಿಯನ್ವಯ ಸಮೀಕ್ಷೆ ನಡೆಸಲಾಗಿದೆ. ಮನೆಗಳಿಗೆ ಹೋಗಿ ಮುಖಾಮುಖಿ ಭೇಟಿಯಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಸಂತೃಪ್ತಿ
ಸಮೀಕ್ಷೆ ಪ್ರಕಾರ ಕರ್ನಾಟಕ ಶೇ. 11ರಷ್ಟು ಜನರು ಸರಕಾದ ಕಾರ್ಯವೈಖರಿ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ. ಇನ್ನು ಶೇಕಡಾ 46ರಷ್ಟು ಜನರು ಸರಕಾರ ತಕ್ಕ ಮಟ್ಟಿಗೆ ಪರವಾಗಿಲ್ಲ ಎಂದು ಹೇಳಿದ್ದಾರೆ. ಶೇಕಡಾ 33ರಷ್ಟು ಜನರು ಒಂದು ಹಂತಕ್ಕೆ ನಿರಾಸೆಯಾಗಿದೆ ಎಂದರೆ, ಶೇ. 6 ಜನರು ಸಂಪೂರ್ಣ ನಿರಾಸೆಯಾಗಿದೆ ಎಂದಿದ್ದಾರೆ. ಶೇಕಡಾ 4ರಷ್ಟು ಜನರು ಮಾತ್ರ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ನಗರಗಳಲ್ಲಿ ಬೆಂಬಲ ಕಡಿಮೆ
ಅದೇ ಪಟ್ಟಣ ಮತ್ತು ನಗರಗಳಿಗೆ ಬಂದಾಗ ಕಾಂಗ್ರೆಸ್ ಬಗೆಗಿನ ಅಭಿಪ್ರಾಯ ಸ್ವಲ್ಪ ಬದಲಾಗಿದೆ. ಶೇಕಡಾ 9 ರಷ್ಟು ಜನರು ಮಾತ್ರ ನಾವು ಸಂಪೂರ್ಣ ತೃಪ್ತರಾಗಿದ್ದೇವೆ ಎಂದಿದ್ದಾರೆ. ಶೇಕಡಾ 59 ಜನರು ಪರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 19ರಷ್ಟು ಜನರಿಗೆ ಈ ಸರಕಾರ ಅಷ್ಟಾಗಿ ಹಿಡಿಸಿಲ್ಲ. ಇನ್ನು ಶೇ. 7 ಜನರು ಸರಕಾರವನ್ನು ಸಂಪೂರ್ಣ ವಿರೋಧಿಸಿದ್ದಾರೆ. ಉಳಿದವರು ತಾವೇನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹಿಂದುಳಿದ ವರ್ಗಗಳಿಂದ ಭಾರೀ ಬೆಂಬಲ
ಪ್ರಭಾವಶಾಲಿಯಲ್ಲದ ಹಿಂದುಳಿದ ವರ್ಗದ ಶೇಕಡಾ 14ರಷ್ಟು ಜನರು ಸಂಪೂರ್ಣ ತೃಪ್ತಿ, ಶೇಕಡಾ 49 ಪರವಾಗಿಲ್ಲ, ಶೇ. 25 ಸ್ವಲ್ಪ ಮಟ್ಟಿಗೆ ಅಸಮಾಧಾನ ಮತ್ತು ಶೇ. 6 ಹೇಳಲಾಗದು ಎಂದಿದ್ದಾರೆ.
ಗ್ರಾಮಗಳ ಶೇಕಡಾ 11ರಷ್ಟು ಜನರು ಸಂಪೂರ್ಣ ತೃಪ್ತಿ, ಶೇಕಡಾ 44 ಪರವಾಗಿಲ್ಲ, ಶೇ. 37 ಸ್ವಲ್ಪ ಮಟ್ಟಿಗೆ ಅಸಮಾಧಾನ ಮತ್ತು ಶೇ. 4 ಹೇಳಲಾಗದು ಎಂದಿದ್ದಾರೆ.
ಎಸ್.ಸಿ, ಎಸ್.ಟಿ ಗಳಿಂದಲೂ ಬೆಂಬಲ
ಪರಿಶಿಷ್ಟ ಜಾತಿಯ ಶೇಕಡಾ 12ರಷ್ಟು ಜನರು ಸಂಪೂರ್ಣ ತೃಪ್ತಿ, ಶೇಕಡಾ 51 ಪರವಾಗಿಲ್ಲ, ಶೇ. 32 ಸ್ವಲ್ಪ ಮಟ್ಟಿಗೆ ಅಸಮಾಧಾನ, ಶೇ. 2 ಸಂಪೂರ್ಣ ಅಸಮಧಾನ ಮತ್ತು ಶೇ. 3 ಹೇಳಲಾಗದು ಎಂದಿದ್ದಾರೆ.
ಪರಿಶಿಷ್ಟ ಪಂಗದಡ ಶೇಕಡಾ 12ರಷ್ಟು ಜನರು ಸರಕಾರದ ಕಾರ್ಯಕ್ರಮಗಳು ಸಂಪೂರ್ಣ ತೃಪ್ತಿದಾಯಕವಾಗಿದೆ ಎಂದಿದ್ದರೆ, ಶೇಕಡಾ 61 ಪರವಾಗಿಲ್ಲ, ಶೇ. 24 ಸ್ವಲ್ಪ ಮಟ್ಟಿಗೆ ಅಸಮಾಧಾನ, ಶೇ. 3 ಜನರು ಸಂಪೂರ್ಣ ಅಸಮಧಾನ ಹೊಂದಿದ್ದೇವೆ ಎಂದಿದ್ದಾರೆ.
ದಕ್ಷಿಣ ಕರ್ನಾಟಕದವರಿಂದ ಕಾಂಗ್ರೆಸ್ ಗೆ ಜೈ
ದಕ್ಷಿಣ ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯ ಸರಕಾರದ ಬಗ್ಗೆ ಶೇ. 9 ಜನರು ಸಂಪೂರ್ಣ ಸಹಮತ ಹೊಂದಿದ್ದಾರೆ. ಶೇ. 71 ಜನರು ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎಂದಿದ್ದಾರೆ. ಶೇಕಡಾ 14 ಜನರಿಗೆ ಸರಕಾರದ ಕಾರ್ಯಕ್ರಮಗಳು ಅಷ್ಟಾಗಿ ತೃಪ್ತಿ ನೀಡಿಲ್ಲ. ಶೇ. 4 ಜನರು ಸಂಪೂರ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಶೇ. 2 ಜನರು ಹೇಳಲಾಗದು ಎಂದಿದ್ದಾರೆ.