ಯಡಿಯೂರಪ್ಪನವರ 'ಮಿಷನ್ 150' ಲೆಕ್ಕಾಚಾರ 'ಕೈ' ಕೊಡ್ತಾ ಇದ್ಯಾ?
ಯಡಿಯೂರಪ್ಪ ಬಳಸುತ್ತಿದ್ದ 'ಮಿಷನ್ 150' ಅನ್ನೋ ಪದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜು7) ಯಡಿಯೂರಪ್ಪನವರಿಗೆ ನೆನೆಪಿಸಿದ್ದು, ಸದ್ಯದ ಮಟ್ಟಿಗೆ ಯಡಿಯೂರಪ್ಪನವರಿಗೆ ಆದ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗಿದ್ದ 'ಗೆದ್ದೇ ಗೆಲ್ಲುತ್ತೇವೆ' ಎನ್ನುವ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಕಮ್ಮಿಯಾಗುತ್ತಿದೆಯೇ?
ಈಶ್ವರಪ್ಪನವರ ಜೊತೆಗಿನ ಜಗಳ ಬೀದಿರಂಪವಾಗಿದ್ದು, ರೈತರ ಸಾಲಮನ್ನಾ ಎನ್ನುವ ಸಿದ್ದರಾಮಯ್ಯನವರ ಭಯಂಕರ ರಾಜಕೀಯ ದಾಳದ ಮುಂದೆ ಯಡಿಯೂರಪ್ಪನವರ 'ಮಿಷನ್ 150' ಎನ್ನುವ ರಾಜಕೀಯ ಮಹತ್ವಾಕಾಂಕ್ಷೆ ಕಮರಿ ಹೋಗುತ್ತಿದೆಯೇ?
ಈ ಹಿಂದೆ ಎಲ್ಲಾ ರಾಜಕೀಯ ಸಭೆಯಲ್ಲಿ ಯಡಿಯೂರಪ್ಪ ಬಳಸುತ್ತಿದ್ದ 'ಮಿಷನ್ 150' ಅನ್ನೋ ಪದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜು7) ಯಡಿಯೂರಪ್ಪನವರಿಗೆ ನೆನೆಪಿಸಿದ್ದು, ಸದ್ಯದ ಮಟ್ಟಿಗೆ ಯಡಿಯೂರಪ್ಪನವರಿಗೆ ಆದ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ.
ಸರ್ಜಿಕಲ್ ಸ್ಟ್ರೈಕ್, ಅಪನಗದೀಕರಣ, ಜಿಎಸ್ಟಿ ಮುಂತಾದ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡು ಎಲ್ಲರ ಬಾಯಲ್ಲಿ ಮೋದಿ ಅನ್ನೋ ಹೆಸರು ಗುನುಗುತ್ತಿರುವ ಈ ಹೊತ್ತಿನಲ್ಲಿ, ಅದನ್ನೆಲ್ಲಾ ಮೀರಿ ಸಿದ್ದರಾಮಯ್ಯ ಪ್ರಯೋಗಿಸುತ್ತಿರುವ ರಾಜಕೀಯ ದಾಳದ ಮುಂದೆ ರಾಜ್ಯ ಬಿಜೆಪಿ ಘಟಕ 'ಕೈಕುಟ್ಟಿ' ಕೂತಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.
ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರೂ ಹಿರಿಯ ಮುತ್ಸದ್ದಿಗಳಾಗಿದ್ದರೂ, ಪಕ್ಷದ ಒಗ್ಗಟ್ಟಿನ ವಿಚಾರದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿರುವ ತಮ್ಮ ಪಕ್ಷದ ಮುಖಂಡರ ಬೆಂಬಲ, ಯಡಿಯೂರಪ್ಪನವರಿಗೆ ಸಿಗುತ್ತಿಲ್ಲ ಎನ್ನುವುದು ಕಟುಸತ್ಯ. ಇದರಲ್ಲಿ ತಪ್ಪು ಯಾರದ್ದೋ? ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಲು ಕಾರಣಗಳು ಯಾವುದಿರಬಹುದು, ಮುಂದೆ ಓದಿ..

ಹಿಂದಿ ಹೇರಿಕೆ ವಿಚಾರದಲ್ಲಿ ಎಡವಿತೇ ಬಿಜೆಪಿ
ರಾಜ್ಯದಲ್ಲಿ ಮುಕ್ಕಾಲು ವಾಸಿ ಸಂಸದರನ್ನು ಹೊಂದಿದ್ದರೂ, ಹಿಂದಿ ಹೇರಿಕೆ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಮನವರಿಕೆ ಮಾಡಿ ರಾಜಕೀಯ ಮೈಲೇಜ್ ಪಡೆದುಕೊಳ್ಳುವ ಚಾನ್ಸ್ ಅನ್ನು ಬಿಜೆಪಿ ಕಳೆದುಕೊಳ್ಳುತ್ತಾ ಬಂತು. ಅತ್ತ ಸದ್ಯದ ಮಟ್ಟಿಗೆ ದುರ್ಭಲವಾಗಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಕಾಯದೇ ಕನ್ನಡ ಪರ ನಿಲುವನ್ನು ತಾಳಿ ಸಿದ್ದರಾಮಯ್ಯ ಸೈ ಎನಿಸಿಕೊಂಡರು.

ದಲಿತರ ಕೇರಿ ಭೇಟಿ ವರ್ಕೌಟ್ ಆಗುತ್ತಿಲ್ಲವೇ?
ದಲಿತರ ಕೇರಿಗೆ ನಿರಂತರ ಭೇಟಿ ಆ ವರ್ಗದ ಮನಗೆಲ್ಲುವ ಯಡಿಯೂರಪ್ಪನವರ ತಂತ್ರಗಾರಿಕೆ ಸರಿಯಾಗಿ ವರ್ಕೌಟ್ ಆಗುತ್ತಿಲ್ಲವೇ? ಹೋಟೆಲ್ ನಲ್ಲಿ ತಂದ ತಿನುಸನ್ನು ದಲಿತರ ಮನೆಯಲ್ಲಿ ತಂದು ತಿಂದರು ಎನ್ನುವ ಆರೋಪ, ವೋಟ್ ಬ್ಯಾಂಕ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದು ಬಿಜೆಪಿ ಮುಖಂಡರಿಗೆ ಅರ್ಥವಾಗದೇ ಇದ್ದದ್ದು ವಿಪರ್ಯಾಸ.

ರೈತರ ಸಾಲಮನ್ನಾ
ರೈತರ ವಿಚಾರದಲ್ಲಿ ತೆಗೆದುಕೊಳ್ಳುವ ಯಾವ ನಿರ್ಧಾರವೇ ಇರಲಿ ಅದು ನೇರವಾಗಿ ಮತಬ್ಯಾಂಕಿಗೆ ಕೈಹಾಕುವಂತದ್ದು. ಈ ಹಿಂದೆ ಬಿಎಸ್ವೈ, ಕೃಷಿ ಬಜೆಟ್ ಮಂಡಿಸಿ ಹೆಸರು ಮಾಡಿದ್ದೂ ನೆನೆಪಿಸಿಕೊಳ್ಳುವಂತದ್ದು. ಹೀಗಿರುವಾಗ, ಕೇಂದ್ರ ಸರಕಾರೀ ಬ್ಯಾಂಕುಗಳ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ ಸ್ವಲ್ಪ ದಿನದಲ್ಲೇ ಸಿದ್ದರಾಮಯ್ಯ ಸಹಕಾರೀ ಬ್ಯಾಂಕುಗಳ ಸಾಲಮನ್ನಾ ಮಾಡಿ, ಕೇಂದ್ರಕ್ಕೆ ನೇರ ಸವಾಲು ಮಾಡಿದ್ದು ಬಿಜೆಪಿಗಾದ ಭಾರೀ ಹಿನ್ನಡೆ.

ಇಂದಿರಾ ಕ್ಯಾಂಟೀನ್
ಚುನಾವಣೆ ಸಮೀಪಿಸುತ್ತಿರುವ ವೇಳೆ, ಸಿದ್ದು ಸರಕಾರದ ಮಹತ್ವಾಕಾಂಕ್ಷೆಯ 'ಇಂದಿರಾ ಕ್ಯಾಂಟೀನ್' ಗೆ ಆಗಸ್ಟ್ ಹದಿನೈದರಂದು ಚಾಲನೆ ಸಿಗಲಿದೆ. ಸುಮಾರು ಇನ್ನೂರಕ್ಕೂ ಹೆಚ್ಚು
ಶಾಖೆ ತೆರೆದು ಕಡಿಮೆ ದರದಲ್ಲಿ ತಿಂಡಿ, ಊಟ ಸರಬರಾಜು ಆಗಲಿದೆ. ತಮಿಳುನಾಡಿನ ದಿವಂಗತ ಸಿಎಂ ಜಯಲಲಿತಾಗೆ ಬಹುದೊಡ್ಡ ಪ್ಲಸ್ ಪಾಯಿಂಟ್ ಕೊಟ್ಟ ಜಯಾ ಕ್ಯಾಂಟೀನ್ ರೀತಿಯಲ್ಲೇ ಇದು ಕಾರ್ಯಾರಂಭವಾಗಲಿದೆ.

ಆರ್ ಎಸ್ ಎಸ್ ಮುಖಂಡ ಆರ್ ಸಂತೋಷ್
ರಾಜ್ಯ ಬಿಜೆಪಿ ಮತ್ತು ಮಾತೃ ಸಂಘಟನೆಯ ಆರ್ ಎಸ್ ಎಸ್ ಮುಖಂಡ ಮತ್ತು ಬಿಜೆಪಿಯಲ್ಲಿ ಎಲ್ಲರೂ ಗೌರವಿಸುವ ಆರ್ ಸಂತೋಷ್ ಅವರ ವಿರುದ್ದ ನೇರವಾಗಿ ಯಡಿಯೂರಪ್ಪ ಆರೋಪಿಸಿದ್ದು ಪಕ್ಷದ ಹಲವು ಮುಖಂಡರಿಗೆ ಬೇಸರ ತಂದಿತ್ತು. ಯಡಿಯೂರಪ್ಪನವರ ರಾಜ್ಯ ಪ್ರವಾಸದಲ್ಲಿ ಕೆಲವೇ ಕೆಲವು ಮುಖಂಡರು ಅವರಿಗೆ ಸಾಥ್ ನೀಡುತ್ತಿರುವುದು, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜನಸಾಮಾನ್ಯರಿಗಿರುವ ಸಂದೇಹ.












Click it and Unblock the Notifications