ಅಪ್ಪನ ಇಚ್ಛೆಗೆ ವಿರುದ್ಧವಾಗಿ ಹೈಕಮಾಂಡ್ ಸಹ ಹೋಗಲ್ಲ: ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ ಎಂಬ ದಾಟಿಯಲ್ಲಿ ಯತೀಂದ್ರ ಹೇಳಿಕೆ?
'ನಾನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಪ್ಪನಿಗೆ ಹೇಳಿದ್ದೇನೆ. ಆದರೆ, ಅವರು ಕೋಲಾರದಿಂದಲೇ ಕಣಕ್ಕಿಳಿಯುತ್ತೇನೆಂದು ಹೇಳಿದ್ದಾರೆ. ಅಪ್ಪನ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್ನ ಹೈಕಮಾಂಡ ಸಹ ಹೋಗುವುದಿಲ್ಲ' ಎಂದು ಡಾ ಯಂತೀಂದ್ರ ತಿಳಿಸಿದ್ದಾರೆ.
ಬೆಂಗಳೂರು, ಜನವರಿ 31: ಕರ್ನಾಟಕ ಚುನಾವಣೆಗೆ ಇನ್ನೇನು ಮೂರ್ನಾಲ್ಕು ತಿಂಗಳು ಬಾಕಿ ಇದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭಾರೀ ಪೈಪೋಟಿ ನಡೆಸುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ. ಅವರಿಗೆ ಹೈಕಮಾಂಡ್ನ ಅಪ್ಪಣೆ ಬೇಕಿದೆ. ಈ ವಿಚಾರವಾಗಿ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಹೇಳಿಕೆ ನೀಡಿದ್ದಾರೆ. ತಮ್ಮ ತಂದೆ, ಮಾಜಿ ಸಿಎಂ ಸಿದ್ದರಾಮಯ್ಯ ಇಚ್ಛೆಗೆ ವಿರುದ್ಧವಾಗಿ ಹೈಕಮಾಂಡ್ ಸಹ ಹೋಗಲ್ಲ ಎಂದು ಅವರು ತಿಳಿಸಿದ್ದಾರೆ. ನಿನ್ನೆ ಕೋಲಾರದಲ್ಲಿ ಸಿದ್ದರಾಮಯ್ಯನವರಿಗೆ ನಿವಾಸವನ್ನು ಆಯ್ಕೆ ಮಾಡಿದ ನಂತರ ಈ ಮಾತುಗಳನ್ನು ಆಡಿದ್ದಾರೆ. 'ನಾನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಪ್ಪನಿಗೆ ಹೇಳಿದ್ದೇನೆ. ಆದರೆ, ಅವರು ಕೋಲಾರದಿಂದಲೇ ಕಣಕ್ಕಿಳಿಯುತ್ತೇನೆಂದು ಹೇಳಿದ್ದಾರೆ. ಅಪ್ಪನ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್ನ ಹೈಕಮಾಂಡ ಸಹ ಹೋಗುವುದಿಲ್ಲ' ಎಂದು ಡಾ ಯಂತೀಂದ್ರ ತಿಳಿಸಿದ್ದಾರೆ. ಇದೇ ವೇಳೆ ಕೋಲಾರದ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
'ರಾಜ್ಯ ಬಿಜೆಪಿಯ ಹಿಡಿತ BSY ಕೈತಪ್ಪಿ BL ಸಂತೋಷ್ ಕೈಸೇರಿಯಾಗಿದೆ, ಬಿಜೆಪಿ ಟಿಕೆಟ್ ಹಂಚಿಕೆಯ ಮೇಲೆ ಸಂತೋಷ್ ಪ್ರಾಬಲ್ಯ'
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ
ಮಾಜಿ ಸಿಎಂ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ. ಅವರು ಕಳೆದ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದ್ದ ಅವರು ಜೆಡಿಎಸ್ನ ಜಿ ಟಿ ದೇವೇಗೌಡರ ವಿರುದ್ಧ ಸೋಲು ಅನುಭವಿಸಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕಣಕ್ಕಿಳಿದಿದ್ದ ಅವರು ಬಿಜೆಪಿಯ ಶ್ರೀರಾಮುಲು ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇದು ಸಿದ್ದರಾಮಯ್ಯನವರಿಗೆ ಭಾರೀ ಹಿನ್ನೆಡೆ ತಂದುಕೊಟ್ಟಿತ್ತು. ಈ ಬಾರಿ ಕೋಲಾರದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಸೂಚನೆಯೊಂದೆ ಬಾಕಿ ಇದೆ.
ಕೋಲಾರದಲ್ಲಿಯೂ ಕಠಿಣ ಸವಾಲು
ಸಿದ್ದರಾಮಯ್ಯನವರಿಗೆ ಕೋಲಾರ ಕ್ಷೇತ್ರದಲ್ಲಿ ಕಠಿಣ ಸವಾಲುಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಕಳೆದ ಬಾರಿ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ನ ಶ್ರೀನಿವಾಸಗೌಡರು ಆರಿಸಿ ಬಂದಿದ್ದರು. ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅದಕ್ಕೂ ಮುಂಚೆ ಪಕ್ಷೇತರರಾಗಿ ಕುರುಬ ಸಮುದಾಯದ ವರ್ತೂರು ಪ್ರಕಾಶ್ ಆಯ್ಕೆಯಾಗಿದ್ದರು. ಒಕ್ಕಲಿಗರು ಹಾಗೂ ಕುರುಬ ಸಮುದಾಯದವರು ಇಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂಬುದು ರಾಜಕೀಯ ತಜ್ಞರ ವಾದ. ಈಗಾಗಲೇ ಒಕ್ಕಲಿಗ ಸಮುದಾಯದ ಮುಖಂಡರನ್ನು ಜೆಡಿಎಸ್ ಘೋಷಿಸಿದೆ. ಬಿಜೆಪಿಯಿಂದ ಕುರುಬ ಸಮುದಾಯದ ವರ್ತೂರು ಪ್ರಕಾಶ್ ಸ್ಪರ್ಧಿಸಲಿರುವುದು ಬಹುತೇಕ ಖಚಿತವಾಗಿದೆ. ಇದು ಸಿದ್ದರಾಮಯ್ಯನವರಿಗೆ ತೊಡಕಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮುಖ್ಯಮಂತ್ರಿ ಕುರ್ಚಿಗಾಗಿ ಡಿಕೆಶಿ, ಸಿದ್ದು ಪೈಪೋಟಿ
ಮುಖ್ಯಮಂತ್ರಿ ಕುರ್ಚಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬಂದಿವೆ. ಬಿಜೆಪಿಯ ಮುಖಂಡರು ಈ ವಿಚಾರವನ್ನು ಪದೇಪದೇ ಹೇಳುತ್ತಲೇ ಇರುತ್ತಾರೆ. ಇದು ಕಾಂಗ್ರೆಸ್ ಅನ್ನು ಮುಜುಗರಕ್ಕೆ ಈಡು ಮಾಡಿದೆ. ಕಾಂಗ್ರೆಸ್ನಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎಂಬ ಎರಡು ಬಣಗಳಿವೆ ಎಂಬುದರ ಬಗೆಗಿನ ಚರ್ಚೆಗಳು ಕೇಳಿಬಂದಿವೆ.
ಯತೀಂದ್ರ ಮಾತಿನ ಒಳಾರ್ಥವೇನು?
ಸಿದ್ದರಾಮಯ್ಯನವರ ಪುತ್ರರಾದ ಡಾ ಯತೀಂದ್ರ ಅವರು ಸೋಮವಾರ ಕೋಲಾರಕ್ಕೆ ಭೇಟಿ ನೀಡಿದ್ದರು. ಅವರು ಸಿದ್ದರಾಮಯ್ಯನವರಿಗೆ ಮನೆಯೊಂದನ್ನು ಆಯ್ಕೆ ಮಾಡಿದರು. ಆ ನಂತರ ಮುಸ್ಲಿಂ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು. 'ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಕೇಳಿಕೊಂಡಿದ್ದೇನೆ. ಆದರೆ, ಅವರು ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರ ಮಾತನ್ನು ಹೈ ಕಮಾಂಡ್ ಸಹ ತೆಗೆದು ಹಾಕುವುದಿಲ್ಲ' ಎಂದು ಹೇಳಿದ್ದಾರೆ. ಈ ಮಾತುಗಳು ಬೇರೆಯದೇ ಒಳಾರ್ಥವನ್ನು ಧ್ವನಿಸುತ್ತಿವೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲಿದ್ದಾರೆ. ಅದು ಅವರ ಇಚ್ಛೆಯೂ ಹೌದು. ಇದನ್ನು ಯಾರಿಂದಲೂ ತೆಗೆದುಹಾಕಲು ಸಾಧ್ಯವಿಲ್ಲ ಎನ್ನುವಂತಹ ದಾಟಿಯಲ್ಲಿ ಯತೀಂದ್ರ ಮಾತನಾಡಿರಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.