ದೇವನಹಳ್ಳಿ ಬಿಜ್ಜವಾರ ರೈತನ ಮಗಳು ಕಾಮರ್ಸ್ನಲ್ಲಿ ಟಾಪರ್ !
ಬೆಂಗಳೂರು, ಜೂ. 18: ಆಕೆ ಅಪ್ಪಟ ಕೃಷಿಕನ ಮಗಳು. ಅಮ್ಮನದ್ದು ಮನೆಯಲ್ಲಿ ಕೆಲಸ. ದಿನಕ್ಕೆ ಸತತ ನಾಲ್ಕು ತಾಸು ಓದುತ್ತಿದ್ದ ಹಳ್ಳಿಗಾಡಿನ ಹೆಣ್ಣು ಮಗಳು ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.
ಹೌದು. ಇದು ದೇವನಹಳ್ಳಿ ತಾಲೂಕಿನ ಬಿಜ್ಜವಾರದ ನಿವಾಸಿ ರಾಮಸ್ವಾಮಿ ಜಿ. ಅಪ್ಪಟ ಕೃಷಿಕ. ಹೇಳಿಕೊಳ್ಳುವಂತಹ ಶ್ರೀಮಂತಿಕೆಯೂ ಇಲ್ಲ. ಕೃಷಿಯಲ್ಲಿ ಕೆಲಸ ಮಾಡಿದ್ರೆ ಜೀವನ ಸಾಗುತ್ತೆ. ಇಲ್ಲಾ ಅಂದರೆ ಇಲ್ಲ. ಇರೋದು ಕೂಡ ಪುಟ್ಟ ಮನೆ. ಇನ್ನು ಇವರ ಪತ್ನಿ ಅನ್ನಪೂರ್ಣ ಮನೆಯಲ್ಲಿ ಕೆಲಸ ಮಾಡುತ್ತಾರೆ. ಇವರ ಪುತ್ರಿ ನೇಹಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಅಂಕಕ್ಕೆ 596 ಅಂಕ ಗಳಿಸುವ ಮೂಲಕ ಮೊದಲ ಟಾಪರ್ ಆಗಿದ್ದಾರೆ.
ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿರುವ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಬಿಜಿಎಸ್ ಶಾಲೆಯಲ್ಲಿ ನೇಹಾ ಬಿ.ಆರ್ ಓದುತ್ತಿದ್ದರು. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅದ್ವಿತೀಯ ಸಾಧನೆ ತೋರಿದ್ದಾರೆ. 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ ನೇಹಾ, ತುಂಬಾ ಪರಿಶ್ರಮ ಹಾಕಿ ಓದಿದರೆ ಅಂಕ ಗಳಿಸುವುದು ದೊಡ್ಡ ಕಷ್ಟವೇನಲ್ಲ. ಮುಂದೆ ನಾನು ಭಾರತೀಯ ನಾಗರಿಕ ಸೇವೆಗೆ ಸೇರುವ ಆಸೆ ಹೊಂದಿದ್ದೇನೆ ಎಂದು ತನ್ನ ಗುರಿಯನ್ನು ಹಂಚಿಕೊಂಡರು.

ನಾನು ಕಾಲೇಜಿನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಾಗ ಬೇಸರವಾಗುತ್ತಿತ್ತು. ಶಿಕ್ಷಕರು ನನಗೆ ಹೇಳಿಕೊಡುತ್ತಿದ್ದರು. ನನಗೆ 590 ಮೇಲೆ ಅಂಕ ಬರುತ್ತೆ ಅಂತ ಅಂದುಕೊಂಡಿದ್ದೆ. ಅದ್ರೆ ನಾನು ಟಾಪರ್ ಆಗುತ್ತೇನೆ ಎಂಬ ನಂಬಿಕೆ ನನಗಿರಲಿಲ್ಲ. ನಾನು ಟಾಪರ್ ಆಗಿರುವುದು ಖುಷಿ ತಂದಿದೆ. ಇದಕ್ಕೆ ಕಾರಣ ನನ್ನ ತಂದೆ ತಾಯಿ ಪ್ರೋತ್ಸಾಹ ಹಾಗೂ ನನ್ನ ಕಾಲೇಜು ಶಿಕ್ಷಕರ ಪ್ರೇರಣೆ ಎಂದು ನೇಹಾ ಸ್ಮರಿಸಿದರು.

ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿರುವ ಆಕಾಶ್ ದಾಸ್ ಸಹ 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದರು. ಕೋಲ್ಕತಾ ಮೂಲದ ಆಕಾಶ ದಾಸ್ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಪಿಯು ಕಾಲೇಜಿನ ವಿದ್ಯಾರ್ಥಿ. ಈ ವಿದ್ಯಾರ್ಥಿ ತಂದೆ ಖಾಸಗಿ ಕಂಪನಿಯೊಂದರ ಉದ್ಯೋಗಿ. ನನ್ನ ಯಶಸ್ಸಿಗೆ ಕಾಲೇಜಿನ ಶಿಕ್ಷಕರೇ ಕಾರಣ. ನನಗೆ ಈ ರ್ಯಾಂಕ್ ಗಳಿಸಿರುವುದು ಸಂತಸ ತಂದಿದೆ. ಉತ್ತಮ ಅಂಕಕ್ಕಿಂತ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವುದೇ ನನ್ನ ಗುರಿ ಎಂದು ಸಂತಸ ತೋಡಿಕೊಂಡರು.












Click it and Unblock the Notifications