ದ್ವಿತೀಯ PUC ಪರೀಕ್ಷೆ-2 ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಏಪ್ರಿಲ್ 18 ಕೊನೆಯ ದಿನ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಹತ್ವದ ಹಾಗೂ ನಿರಾಳತೆ ತರುವಂತಹ ಸುದ್ದಿಯೊಂದನ್ನು ನೀಡಿದೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವನ್ನು ಇದೀಗ ಏಪ್ರಿಲ್ 18, 2026ರವರೆಗೆ ವಿಸ್ತರಿಸಿ ಮಂಡಳಿಯು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.
ಈ ಹಿಂದೆ ಪ್ರಕಟಿಸಲಾಗಿದ್ದ ಮಂಡಳಿಯ ಸುತ್ತೋಲೆಗಳ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 9 ರಿಂದ ಏಪ್ರಿಲ್ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ಮಂಡಳಿಯು http://tinyurl.com/mvp9k6es ಎಂಬ ಆನ್ಲೈನ್ ಲಿಂಕ್ ಅನ್ನು ಕೂಡ ಒದಗಿಸಿತ್ತು. ಕಾಲೇಜುಗಳ ಮೂಲಕ ಪ್ರಾಂಶುಪಾಲರ ಲಾಗಿನ್ ಬಳಸಿ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿತ್ತು. ಆದರೆ, ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ ಮಂಡಳಿಗೆ ನಿರಂತರವಾಗಿ ಮನವಿ ಮಾಡಿದ್ದರು.

ವಿದ್ಯಾರ್ಥಿಗಳಿಂದ, ಪೋಷಕರಿಂದ ಹಾಗೂ ವಿವಿಧ ಕಾಲೇಜುಗಳ ಆಡಳಿತ ಮಂಡಳಿಯಿಂದ ಬಂದಂತಹ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ, ಇದೀಗ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏಪ್ರಿಲ್ 18, 2026ರವರೆಗೆ ವಿಸ್ತರಿಸಲಾಗಿದೆ. ಯಾರೆಲ್ಲಾ ಇದುವರೆಗೂ ಅರ್ಜಿ ಸಲ್ಲಿಸಿಲ್ಲವೋ, ಅವರು ತಕ್ಷಣವೇ ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಅಗತ್ಯ ಶುಲ್ಕದೊಂದಿಗೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯು ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದ್ದು, ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಅವರ ಶೈಕ್ಷಣಿಕ ವರ್ಷ ಹಾಳಾಗುವುದನ್ನು ತಪ್ಪಿಸಲು ವಾರ್ಷಿಕವಾಗಿ ಮೂರು ಪರೀಕ್ಷೆಗಳನ್ನು (ಪರೀಕ್ಷೆ 1, 2 ಮತ್ತು 3) ನಡೆಸುವ ಪದ್ಧತಿಯನ್ನು ಜಾರಿಗೆ ತಂದಿದೆ. ಪರೀಕ್ಷೆ-1 ರಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಅನುತ್ತೀರ್ಣರಾದವರು ಈ ಪರೀಕ್ಷೆ-2 ನ್ನು ಬರೆದು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕವನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿರುವ ಈ ಹೊಸ ಸುತ್ತೋಲೆಯಲ್ಲಿ, ಈ ಹಿಂದೆ ಏಪ್ರಿಲ್ 11, 2026ರಂದು ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿನ ಉಳಿದೆಲ್ಲಾ ಷರತ್ತುಗಳು ಹಾಗೂ ನಿಯಮಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಮಂಡಳಿಯು ಸ್ಪಷ್ಟಪಡಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಲ್ಲದೆ ಕೂಡಲೇ ಅರ್ಜಿ ಸಲ್ಲಿಸಿ, ಮುಂಬರುವ ಪರೀಕ್ಷೆಗೆ ಉತ್ತಮವಾಗಿ ಸಿದ್ಧರಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ













Click it and Unblock the Notifications