HD Kumaraswamy: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಕನ್ನಡಿಗರ ಬಹಿರಂಗ ಪತ್ರ, ಏನದು ?
HD Kumaraswamy: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕನ್ನಡಿಗರು ಹಾಗೂ ಪ್ರಗತಿಪರರು ಬರೆದಿರುವ ಬಹಿರಂಗ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳು ತಮ್ಮ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿವೆ. ಹಿಂದೆ ಭಾಷೆ ಹೇರಿಕೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಅನುದಾನ ಮತ್ತು ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ದೂರಿವೆ. ಆದರೆ, ಬಿಜೆಪಿಯೊಂದಿಗೆ ಮೈತ್ರಿ ಇರುವ ಕಾರಣಕ್ಕೆ ಆಂಧ್ರಪ್ರದೇಶ ಸರ್ಕಾರವು ಸಮಾನ ಅಂತರವನ್ನು ಕಾಪಾಡಿಕೊಂಡಿದೆ. ಇದೀಗ ಕರ್ನಾಟಕದಲ್ಲೂ ಕನ್ನಡಿಗರು ಅಭಿಯಾನ ಶುರು ಮಾಡಿದ್ದು ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಹಿರಂಗ ಪತ್ರವನ್ನು ಬರೆಯಲಾಗಿದೆ.
ಕುಮಾರಸ್ವಾಮಿಗೆ ಬಹಿರಂಗ ಪತ್ರ: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರು ಮತ್ತು ಭಾರೀ ಕೈಗಾರಿಕಾ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕನ್ನಡಿಗರು ಹಾಗೂ ಪ್ರಗತಿಪರರು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ದಕ್ಷಿಣದ ರಾಜ್ಯ ಸರ್ಕಾರಗಳು ಇಂಡಿಯಾ ಒಕ್ಕೂಟ ಸರ್ಕಾರವು ಎಸಗುತ್ತಿರುವ ಅನ್ಯಾಯದ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿರುವುದು ನಿಮಗೆ ತಿಳಿದೇ ಇದೆ. ಯಾಕೆಂದರೆ ಈ ಹಿಂದೆ ತಾವು ಕೂಡ ಶಾಸಕ, ಸಂಸದ ಮತ್ತು ಮುಖ್ಯಮಂತ್ರಿಯಾಗಿ ಈ ಹೋರಾಟದಲ್ಲಿ ಸಕ್ರಿಯವಾಗಿ ಇದ್ದಿರಿ, ಅದರೆ ಈಗ ಒಕ್ಕೂಟ ಸರ್ಕಾರದ ಪ್ರತಿನಿಧಿಯಾಗಿದ್ದೀರಿ ಎಂದು ಹೇಳಲಾಗಿದೆ.

ಮುಂದುವರಿದು ಒಕ್ಕೂಟ ಸರ್ಕಾರವು ಈಚೆಗೆ ಅತಿಯಾದ ಕೇಂದ್ರೀಕರಣದ ಕಾಯ್ದೆಗಳನ್ನು ರೂಪಿಸುತ್ತಾ ಹೆಚ್ಚು ಪ್ರಬಲವಾಗುತ್ತಾ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುತ್ತಿದೆ. ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯವಂತು ಹೇಳತೀರದು. ತೆರಿಗೆ ಹಂಚಿಕೆ, ಹಿಂದಿ ಹೇರಿಕೆ, ಹತ್ತು ಹಲವು ಅನುದಾನಗಳ ಕಡಿತಗಳನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬರುತ್ತಿದೆ. ಇಂತಹ ಅನ್ಯಾಯಗಳ ಸರದಿಯಲ್ಲೇ ಈಗ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯ ಕಾರ್ಯ ಕೂಡ ನಡೆಯಲಿದೆ.
ಇತ್ತೀಚಿನ ಜನಗಣತಿಯ(2011 ಹಾಗೂ 2021ರಲ್ಲಿ ನಡೆದಿಲ್ಲ) ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರುವಿಂಗಡನೆ ನಡೆದರೆ ದಕ್ಷಿಣದ ರಾಜ್ಯಗಳು ಈಗ ಇರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಅದಕ್ಕಾಗಿಯೇ ಈ ಹಿಂದೆ ನಡೆದ ಕ್ಷೇತ್ರ ಮರುವಿಂಗಡನೆಯಲ್ಲಿ 1971ರ ಜನಗಣತಿಯನ್ನು ಅಧಾರವಾಗಿಟ್ಟುಕೊಳ್ಳಲಾಗಿತ್ತು. ಆದರೆ ಈಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ದಕ್ಷಿಣದ ರಾಜ್ಯಗಳು ಕಟ್ಟುನಿಟ್ಟಾಗಿ ಜನಸಂಖ್ಯೆ ನಿಯಂತ್ರಣವನ್ನು ಜಾರಿಗೆ ತಂದಿದ್ದರೆ, ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಯಾವುದೇ ನಿಯಂತ್ರಣವಿಲ್ಲದೆ ಜನಸಂಖ್ಯಾ ಸ್ಫೋಟವನ್ನುಂಟು ಮಾಡಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಇದರಿಂದ ಜನಸಂಖ್ಯಾ ನಿಯಂತ್ರಣಕ್ಕೆ ಒಳಪಟ್ಟ ದಕ್ಷಿಣದ ರಾಜ್ಯಗಳ ಹೊರೆಯನ್ನು ಹೊರುವಂತಾಗಿದೆ. ಇದನ್ನೆಲ್ಲವನ್ನು ಗಮನಿಸಿ ನೆರೆಯ ರಾಜ್ಯ ತಮಿಳುನಾಡು ಒಕ್ಕೂಟ ಸರ್ಕಾರಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದೆ ಮತ್ತು ಈ ಕುರಿತಾಗಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ನಡೆಸುತ್ತಿದೆ. ಇಂತಹ ಹೊತ್ತಿನಲ್ಲಿ ಈ ನೆಲದ ಪ್ರತಿನಿಧಿಯಾಗಿ ತಮ್ಮನಿಲುವು ಏನು ಎಂಬುದನ್ನು ನೀವು ವ್ಯಕ್ತಪಡಿಸಿಲ್ಲ.

ತಾವೀಗ ಒಕ್ಕೂಟ ಸರ್ಕಾರದ ಪಾಲುದಾರರು ಮಾತ್ರವಲ್ಲ, ಅಧಿಕಾರಸ್ಥ ಪ್ರತಿನಿಧಿ ಕೂಡ ಆಗಿದ್ದೀರಿ. ಅದು ಕನ್ನಡ ನಾಡಿನ ಜನರಿಂದ ಸಿಕ್ಕಿದ್ದೆಂಬುದನ್ನು ತಾವು ಮರೆತಿಲ್ಲ ಎಂಬ ವಿಶ್ವಾಸ ನನಗಿದೆ. ಒಕ್ಕೂಟ ಸರ್ಕಾರದಿಂದ ನಮಗೆ ಯಾವುದೇ ಅನ್ಯಾಯವಾಗದಂತೆ ಅದು ತೆರಿಗೆ ಹಂಚಿಕೆ ಆಗಬಹುದು, ಅನುದಾನಗಳಾಗಬಹುದು, ಭಾಷಾ ನೀತಿ ಮತ್ತು ಲೋಕಸಭಾ ಕ್ಷೇತ್ರ ಮರುವಿಂಗಡನೆಯಾಗಬಹುದು ತಾವು ದೃಢನಿರ್ಧಾರ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಲಾಗಿದೆ.
ಒಂದೊ, ಸರ್ಕಾರದೊಂದಿಗೆ ತಾವು ಇರುವುದರಿಂದ ಒಕ್ಕೂಟ ಸರ್ಕಾರಕ್ಕೆ ದಕ್ಷಿಣದ ಜನರಿಗೆ ಅಗುತ್ತಿರುವ ಅನ್ಯಾಯವನ್ನು ಮನದಟ್ಟು ಮಾಡಿ, ನ್ಯಾಯ ಒದಗಿಸಲು ಪ್ರಯತ್ನಿಸುತ್ತಿರೋ ಅಥವಾ ಹೋರಾಟಕ್ಕೆ ಧುಮುಕಿ ಕನ್ನಡ ಜನರ ಹಿತಾಸಕ್ತಿಗೆ ಬೆಂಬಲವಾಗಿ ನಿಲ್ಲುತ್ತೀರೋ ನೀವೇ ಸ್ಪಷ್ಟಪಡಿಸಬೇಕು. ಶರಣುಗಳೊಂದಿಗೆ ತಮ್ಮ ವಿಶ್ವಾಸದ, ಕನ್ನಡ ಜನತೆ ಎಂದು ಪತ್ರ ಬರೆಯಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪತ್ರವನ್ನು ಎಚ್.ಡಿ ಕುಮಾರಸ್ವಾಮಿಗೆ ಟ್ಯಾಗ್ ಮಾಡಲಾಗಿದೆ.
ಈ ಪತ್ರಕ್ಕೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಉದ್ದೇಶಪೂರ್ವಕವಾಗಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದರೆ ಇನ್ನೂ ಕೆಲವರು ಹೌದು ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹಗಾರ ನಾಗೇಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದು, "ಈ ಪೋಸ್ಟ್ನಲ್ಲಿ H D Kumaraswamy ಅವರಿಗೆ ಕನ್ನಡಿಗರು ಬರೆದಿರುವ ಬಹಿರಂಗ ಪತ್ರವನ್ನು ಪ್ರಕಟ ಮಾಡಿದ್ದೇನೆ. ಈ ಪತ್ರ ನಿಮಗೆಲ್ಲರಿಗೂ ಸರಿ ಅನ್ನಿಸಿದರೆ ದಯವಿಟ್ಟು ಈ ಪತ್ರವನ್ನು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಕುಮಾರಸ್ವಾಮಿಯವರನ್ನು ಟ್ಯಾಗ್ ಮಾಡಿ ಪ್ರಕಟಿಸಿ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಹಲವರು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
ಬರಹಗಾರ ರಾಜೇಂದ್ರ ಪ್ರಸಾದ್ ಅವರು, ತೆರಿಗೆ ಹಂಚಿಕೆ, ಹಿಂದಿ ಹೇರಿಕೆ, ಅನುದಾನಗಳ ಕಡಿತ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಕುರಿತಾಗಿ ಕನ್ನಡ ನಾಡಿನ ಎಲ್ಲ ಜನರು, ರಾಜಕಾರಣಿಗಳು, ಕಲಾವಿದರು, ರೈತರು, ಕಾರ್ಮಿಕರು, ಮಠಗಳು, ವಿದ್ಯಾರ್ಥಿಗಳು ಮಾತನಾಡಬೇಕಾದ ಹೊತ್ತು ಇದು. ದಕ್ಷಿಣ ರಾಜ್ಯಗಳ ಮೇಲೆ ಒಕ್ಕೂಟ ಸರ್ಕಾರವು ಪ್ರತ್ಯಕ್ಷವಾಗಿಯೇ ಅನ್ಯಾಯವೆಸಗುತ್ತಿದೆ. ಇದನ್ನ ಸಹಿಸಿದರೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಬಹುದೊಡ್ಡ ನರಕದಲ್ಲಿ ಸಿಕ್ಕಿಬೀಳುತ್ತೇವೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರೂ ಈ ಬಗ್ಗೆ ಸೊಲ್ಲೆತ್ತಲೇ ಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಂದುವರಿದು ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಉಳಿಸುವ ಹೊಣೆಗಾರಿಕೆ ಇರುವುದು ಒಕ್ಕೂಟ ಸರ್ಕಾರಕ್ಕೆ. ಅದು ರಾಜ್ಯ ಸರ್ಕಾರಗಳನ್ನು, ಅವುಗಳ ಕಳಕಳಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ತಮ್ಮದೇ ಒಂದು ಭಾಷೆ, ಒಂದು ನೀತಿ, ಒಂದು ರೀತಿಗಳನ್ನು ಬಲವಂತವಾಗಿ ಹೇರಲು ಹೊರಟರೆ, ರಾಜ್ಯಗಳು ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸುವುದು ಅನಿವಾರ್ಯ ಅಗತ್ಯವಾಗುತ್ತದೆ.
ಇಂದು ತಮಿಳುನಾಡು ಆ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ.
ಇದನ್ನು ಕೇರಳ, ಪಶ್ಚಿಮಬಂಗಾಳ, ಈಶಾನ್ಯ ರಾಜ್ಯಗಳು ಅನುಸರಿಸಬಹುದು. ಆದ್ರೆ ಕರ್ನಾಟಕ?! ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣಲು ಶುರುವಾಗಿವೆ.. ಅಧಿಕಾರ, ಆಡಳಿತ ಮತ್ತು ನೀತಿಗಳಲ್ಲೂ ಸಹ ಸ್ಪಷ್ಟತೆ ಇಲ್ಲ. ಶೋಚನಿಯ ಸ್ಥಿತಿ ಎಂದು ಹೇಳಿದ್ದಾರೆ.












Click it and Unblock the Notifications