ಮಹದಾಯಿ, ಸಿನಿಮಾದವರ ಬೆಂಬಲಕ್ಕೆ ಅಪಸ್ವರ: ನಾವೇನು ಷಂಡರಾ?
ಹುಬ್ಬಳ್ಳಿ, ಸೆ 14: ಹುಬ್ಬಳ್ಳಿಯಲ್ಲಿ ಕನ್ನಡ ಚಿತ್ರೋದ್ಯಮ ಭಾನುವಾರ (ಸೆ 13) ನಡೆಸಿದ ಅಭೂತಪೂರ್ವ ಮಹದಾಯಿ ಹೋರಾಟದ ಶಕ್ತಿ ಪ್ರದರ್ಶನಕ್ಕೆ ಕಳಸಾ ಬಂಡೂರಿ ಸಮಿತಿ ಮತ್ತು ರೈತ ಸಂಘದ ಮುಖಂಡರು ಅಪಸ್ವರ ಎತ್ತಿದ್ದಾರೆ.
ಅರವತ್ತು ದಿನದ ನಂತರ ಹೋರಾಟಕ್ಕೆ ಸಿನಿಮಾ ನಟನಟಿಯರು ಹುಬ್ಬಳ್ಳಿಗೆ ಬಂದು 'ರೋಡ್ ಶೋ' ಮಾಡಿ ವಾಪಸ್ ಬೆಂಗಳೂರಿಗೆ ಹೋಗಿದ್ದಾರೆಂದು ಹೋರಾಟ ಸಮಿತಿಯ ಅಧ್ಯಕ್ಷ ವಿಜಯ್ ಕುಲ್ಕರ್ಣಿ ಲೇವಡಿ ಮಾಡಿದ್ದಾರೆ.
ಚಲನಚಿತ್ರ ಮಂಡಳಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಚಿತ್ರೋದ್ಯಮದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರ ದೊಡ್ಡ ದಂಡೇ ಹುಬ್ಬಳ್ಳಿಯಲ್ಲಿ ಜಮಾಯಿಸಿತ್ತು. (ರೈತರಿಗೆ ಚಿತ್ರರಂಗದ ಬೆಂಬಲ, ಟ್ವೀಟ್ ಪ್ರತಿಕ್ರಿಯೆ)
ಭಾನುವಾರ ಬೆಳಗ್ಗೆ 10.30ಕ್ಕೆ ಮೂರು ಸಾವಿರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದ ನಂತರ ಚಿತ್ರೋದ್ಯಮದವರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಭಾಷಣ ಮಾಡಿ ಕಿಚ್ಚೆಬ್ಬಿಸಿದ್ದರು.
ರಾಜ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯನ್ನು ನೆನಪಿಸುವಂತಹ ಚಿತ್ರೋದ್ಯಮದ ಭಾನುವಾರದ ಮಹಾದಾಯಿ ಪ್ರತಿಭಟನೆಗೆ ನಾಲ್ಕೂ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು.
ಚಿತ್ರೋದ್ಯಮದ ಪ್ರತಿಭಟನೆಗೆ ಕೆಲವರು ಅಪಸ್ವರ ಎತ್ತಿದ್ದಾರೆ. ನಾವೇನು ಷಂಡರಲ್ಲಾ, ರಾಜಕಾರಣಿಗಳ ಮನೆಯಲ್ಲಿ ಸಾವಾದರೆ ನಾವು ಹೋಗೋಲ್ಲಾ ಎಂದಿದ್ದಾರೆ. ಮುಂದೆ ಓದಿ..

ವಿಜಯ್ ಕುಲ್ಕರ್ಣಿ
ಕಳಸಾ ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ್ ಕುಲ್ಕರ್ಣಿ ನರಗುಂದದಲ್ಲಿ ಮಾತನಾಡುತ್ತಾ, ಚಿತ್ರದ್ಯೋಮದವರು ಈ ಹೋರಾಟ ಶುರುವಾದ ಅರವತ್ತು ದಿನದ ನಂತರ ಬಂದು ರೋಡ್ ಶೋ ಮಾಡಿ ಹೋಗಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಎಂದು ಲೇವಡಿ ಮಾಡಿದ್ದಾರೆ.

ಚರ್ಮ ಸುಲಿದು ಬಿಡುತ್ತೇವೆ
ನಮಗೆ ಹೋರಾಟ ಹೇಗೆ ನಡೆಸಬೇಕು ಎನ್ನುವುದು ಅರಿತಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಈ ಭಾಗದ ರಾಜಕಾರಣಿಗಳ ಚರ್ಮ ಸುಲಿದು ಮಹದಾಯಿ ನೀರು ಹರಿಸುತ್ತೇವೆಂದು ವಿಜಯ್ ಕುಲ್ಕರ್ಣಿ ಎಚ್ಚರಿಕೆ ನೀಡಿದ್ದಾರೆ.

ನಾವೇನೂ ಷಂಡರಲ್ಲ
ಈ ಹೋರಾಟ ಆರಂಭವಾಗಿದ್ದು ನರಗುಂದ ಮತ್ತು ನವಲಗುಂದಲ್ಲಿ. ಚಿತ್ರೋದ್ಯಮವರು ಇಲ್ಲಿಗೆ ಬಂದು ಹೋರಾಟ ನಡೆಸಬೇಕಾಗಿತ್ತು, ಹುಬ್ಬಳ್ಳಿಯಿಂದಲ್ಲಾ. ಹುಬ್ಬಳ್ಳಿಗೆ ಬಂದು ಮೊಸಳೆ ಕಣ್ಣೀರು ಹಾಕಿ ಹೋಗುವುದು ಯಾವನಿಗೆ ಬೇಕಾಗಿದೆ. ನಮಗೆ ಯಾವ ರೀತಿ ಹೋರಾಟ ಮಾಡಬೇಕು ಎನ್ನುವುದು ಅರಿತಿದೆ, ನಾವೇನೂ ಷಂಡರಲ್ಲ ಎಂದು ಕುಲ್ಕರ್ಣಿ ಚಿತ್ರೋದ್ಯಮದವರಿಗೆ ಎಚ್ಚರಿಕೆ ನೀಡಿದ್ದಾರೆ.

ಬಸವರಾಜು ದೇವರು
ಕಳಸಾ ಬಂಡೂರಿ ನಾಲೆ ಜೋಡಣೆ ವಿಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಮಠಾಧೀಶ ಬಸವರಾಜ ದೇವರು ನರಗುಂದದಲ್ಲಿ ಮಾತನಾಡುತ್ತಾ, ಸಿನಿಮಾದವರು ನರಗುಂದದಲ್ಲಿ ಬಂದು ಪ್ರತಿಭಟನೆ ನಡೆಸಬೇಕಾಗಿತ್ತು. ಈ ಭಾಗದ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು, ಇನ್ಮುಂದೆ ಇಂತಹ ರಾಜಕಾರಣಿಗಳ ಮನೆಯಲ್ಲಿ ನಾಮಕರಣ ನಡೆದರೂ,ಸಾವಾದರೂ ನಾವು ಹೋಗುವುದಿಲ್ಲ ಎಂದು ಬಸವರಾಜ ದೇವರು ಹೇಳಿದ್ದಾರೆ. (ಚಿತ್ರದಲ್ಲಿ ಗೋವಾ ಕಡೆ ಹರಿದು ಹೋಗುತ್ತಿರುವ ಮಹದಾಯಿ ನದಿನೀರು)

ಹೋರಾಟಕ್ಕೆ ಅರವತ್ತು ದಿನ
ಮಹದಾಯಿ ನೀರಿಗಾಗಿ ನರಗುಂದದ ರೈತರು ವೀರಗಲ್ಲಿನ ಎದುರು ಶುರು ಮಾಡಿರುವ ಸತ್ಯಾಗ್ರಹ ಸೆ.13ಕ್ಕೆ 60 ದಿನ ಪೂರೈಸಿದೆ. ಚಿತ್ರೋದ್ಯಮ ಇದೇ ದಿನವನ್ನು ತನ್ನ ಹೋರಾಟಕ್ಕಾಗಿ ಆಯ್ಕೆ ಮಾಡಿತ್ತು. ಇದಲ್ಲದೇ ಸೆಪ್ಟಂಬರ್ ಹದಿಮೂರರಂದೇ (1980) ಗೋಕಾಕ್ ಚಳುವಳಿಯ ನೇತೃತ್ವವನ್ನು ಅಣ್ಣಾವ್ರು ವಹಿಸಿದ್ದರು. (ಚಿತ್ರದಲ್ಲಿ: ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್)












Click it and Unblock the Notifications