ಮೈಸೂರು: ಫೆ.5ಕ್ಕೆ ಕಾಂಗ್ರೆಸ್ ಸೇರಲಿರುವ ಅನಿಲ್ ಚಿಕ್ಕಮಾದು
ಮೈಸೂರು, ಫೆಬ್ರವರಿ 3 : ಹೆಗ್ಗಡದೇವನಕೋಟೆ ಶಾಸಕರಾಗಿದ್ದ ಚಿಕ್ಕಮಾದು ಅವರ ಪುತ್ರ, ಜೆಡಿಎಸ್ ನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಅನಿಲ್ ಚಿಕ್ಕಮಾದು ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗುವುದು ಖಚಿತವಾಗಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ ಅವರ ನೇತೃತ್ವದ ನಿಯೋಗ ಮಾತುಕತೆ ನಡೆಸಿದ್ದು, ಅನಿಲ್ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲು ಹಸಿರು ನಿಶಾನೆ ಸಿಕ್ಕಿದೆ.
ಇದಕ್ಕೆ ಪೂರಕವೆಂಬಂತೆ ಚಿಕ್ಕಮಾದು ಅವರು ಜೆಡಿಎಸ್ ಪ್ರಾಥಮಿಕ ಸದಸತ್ವ ಮತ್ತು ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಹುಣಸೂರು ತಾಲೂಕು ಹನಗೂಡು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರಾಗಿರುವ ಅನಿಲ್ ಚಿಕ್ಕಮಾದು ಅವರು, ಮುಚ್ಚಿದ ಲಕೋಟೆಯಲ್ಲಿ ಜಿ ಪಂ ಅಧ್ಯಕ್ಷೆ ನಯಿಮಾ ಸುಲ್ತಾನ್ ನಜೀರ್ ಅಹಮ್ಮದ್ ಅವರಿಗೆ ರಾಜಿನಾಮೆ ಪತ್ರ ನೀಡಿದ್ದಾರೆ.

ಟಿಕೆಟ್ ಖಾತರಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕೋಟೆ ಕ್ಷೇತದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದೊಡ್ಡನಾಯಕ ಅಥವಾ ಅನಿಲ್ ಚಿಕ್ಕಮಾದು ಅವರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿಗಳು ಕೇಳಿದಾಗ ನಿಯೋಗದಲ್ಲಿ ತೆರಳಿದ್ದ ದೊಡ್ಡನಾಯಕ ಅವರು, ನಮ್ಮೆಲ್ಲರ ಒಮ್ಮತದ ಆಯ್ಕೆ ಅನಿಲ್ ಚಿಕ್ಕಮಾದು ಅವರೇ ಆಗಿದ್ದಾರೆ. ಅವರಿಗೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ಹೇಳಿದರು. ಹಾಗಾಗಿ, ಕೋಟೆಯಿಂದ ಅನಿಲ್ ಚಿಕ್ಕಮಾದು ಸ್ಪರ್ಧೆಗೆ ಹಸಿರು ನಿಶಾನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಚಿಕ್ಕಣ್ಣ ಅವರಿಗೆ ಜೆ ಡಿ ಎಸ್ ಟಿಕೆಟ್ ನೀಡಲು ವರಿಷ್ಠ ನಿರ್ಧರಿಸಿದ್ದು, ಹೀಗಾಗಿ ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಕೈ ಹಿಡಿಯಲು ಚಿಕ್ಕಮಾದು ಪ್ಯಾಮಿಲಿ ಮುಂದಾಗಿದೆ. ಫೆ.5 ರಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಸಿ ಹೆಚ್ ವಿಜಯ ಶಂಕರ್ ಹಾಗೂ ಅನಿಲ್ ಕಾಂಗ್ರೆಸ್ ಸೇರಲು ವೇದಿಕೆ ಸಿದ್ದವಾಗಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿಲ್ ಚಿಕ್ಕಮಾದು ಸ್ಪರ್ಧಿಸಲಿದ್ದಾರೆ












Click it and Unblock the Notifications