ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ
ಬೆಂಗಳೂರು, ಮೇ 16: ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಶಾಸಕರಿಗೆ 100 ಕೋಟಿ ರೂಪಾಯಿ ಹಣ ಮತ್ತು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಆಮಿಷ ಒಡ್ದಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಾರೆ. ಹಾಗಾದರೆ ಈ ಕಪ್ಪು ಹಣ ಎಲ್ಲಿಂದ ಬಂತು? ಬಡ ಜನರ ಸೇವೆ ಮಾಡಬೇಕಾದವರು ಇವತ್ತು ಹಣದ ಆಮಿಷ ಒಡ್ಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗ ಎಲ್ಲಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
'ಆಪರೇಷನ್ ಕಮಲ' ಮಾಡಿದ್ರೆ ತಿರುಗೇಟು : ಕುಮಾರಸ್ವಾಮಿ ಎಚ್ಚರಿಕೆ
ಇನ್ನು ಆಪರೇಷನ್ ಕಮಲ ವಿಚಾರವನ್ನು ಬಿಟ್ಟು ಬಿಡಿ. ಬಿಜೆಪಿ ತೊರೆದು ನಮ್ಮ ಜೊತೆ ಬರಲು ಶಾಸಕರು ಸಿದ್ಧವಾಗಿದ್ದಾರೆ. ಒಂದೊಮ್ಮೆ ನಮ್ಮ ಶಾಸಕರನ್ನು ಸೆಳೆದುಕೊಳ್ಳಲು ಯತ್ನಸಿದರೆ ಅದರ ದುಪ್ಪಟ್ಟು ಶಾಸಕರನ್ನು ನಿಮ್ಮಿಂದ ಸೆಳೆದುಕೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಇನ್ನು ಶಾಸಕರ ಕುದುರೆ ವ್ಯಾಪಾರಕ್ಕೆ ಉತ್ತೇಜನ ನೀಡುವ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಳ್ಳಬಾರದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.